Bangalore: ಬೇನಾಮಿ ಆಸ್ತಿ ಗಳಿಕೆ : ತಹಶೀಲ್ದಾರ್ ಪುತ್ತೂರಿನ ಅಜಿತ್ ರೈ ಅವರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು

latest news Bangalore news Lokayukta Police arrested Ajit Rai of Tehsildar Puttur

 

ಬೆಂಗಳೂರು : ಬೇನಾಮಿ ಆಸ್ತಿ ಹೊಂದಿರುವ ಪ್ರಕರಣದಲ್ಲಿ ಕೆ.ಆರ್. ಪುರ ತಾಲೂಕಿನ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.

‘ಅಜಿತ್ ಭಾರಿ ಪ್ರಮಾಣದ ಬೇನಾಮಿ ಆಸ್ತಿಗಳನ್ನು ಹೊಂದಿರುವ ದಾಖಲೆಗಳು ಪತ್ತೆಯಾಗಿವೆ. ಅವುಗಳ ಕುರಿತು ವಿಚಾರಣೆ ನಡೆಸಬೇಕಿದೆ. ಬೇನಾಮಿ ವ್ಯಕ್ತಿಗಳನ್ನೂ ವಿಚಾರಣೆ ಮಾಡಬೇಕಿದೆ. ಬುಧವಾರ ತಡ ರಾತ್ರಿ ಆರೋಪಿಯನ್ನು ವಶಕ್ಕೆ ಪಡೆದಿದ್ದೆವು. ಗುರುವಾರ ಬೆಳಿಗ್ಗೆ ಬಂಧಿಸಿದ್ದೇವೆ’ ಎಂದು ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಎಸ್ ಪಿ ಕೆ.ವಿ. ಅಶೋಕ್ ತಿಳಿಸಿದ್ದಾರೆ.

ಕೆ.ಆರ್.ಪುರಂ ತಹಶೀಲ್ದಾರ್(ಗ್ರೇಡ್-2)ಆಗಿರುವ ಕೆಯ್ಯರು ಗ್ರಾಮದ ಸಾಗು ನಿವಾಸಿ ಅಜಿತ್ ಕುಮಾರ್ ರೈ ಸೊರಕೆ ಅವರ ಬೆಂಗಳೂರು ಮನೆ, ಅವರ ಸಹೋದರ ಆಶಿತ್ ರೈ ಮನೆ, ಕೆಯ್ಯೂರು ಗ್ರಾಮದ ಸಾಗುವಿನಲ್ಲಿರುವ ತಾಯಿ ಮನೆ ಮತ್ತು ಅಜಿತ್ ರೈ ಅವರ ನಿಕಟವರ್ತಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.

ಲೋಕಾಯುಕ್ತ ಎಸ್.ಪಿ.ಅಶೋಕ್,ಡಿವೈಎಸ್ಪಿ ಪ್ರಮೋದ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ರೂ.40 ಲಕ್ಷ ನಗದು, ನೂರಾರು ಎಕರೆ ಜಮೀನಿನ ದಾಖಲೆ ಹಾಗೂ ಹಲವು ದುಬಾರಿ ಬೆಲೆಯ ಕಾರುಗಳು ಇರುವುದು ಪತ್ತೆಯಾಗಿದೆ.ಒಟ್ಟು 11 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದ್ದು ಹಲವು ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದರು.

ಪತ್ತೆಯಾಗಿರುವ ಆಸ್ತಿಗಳ ಒಟ್ಟು ಮೌಲ್ಯ ರೂ.1.9 ಕೋಟಿ ಎಂದು ಅಂದಾಜು ಮಾಡಲಾಗಿದೆ.ಈ ಜಮೀನುಗಳು ಹಲವರ ಹೆಸರಿನಲ್ಲಿದ್ದು, ದುಬಾರಿ ಬೆಲೆಯ ಕಾರುಗಳೂ ಬೇರೆಯವರ ಹೆಸರಲ್ಲಿದ್ದು ಬೇನಾಮಿ ಆಸ್ತಿಗಳೆಂದು ಶಂಕಿಸಲಾಗಿದೆ.ಈ ಕುರಿತು ಬೆಂಗಳೂರು ಕೆಎಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಕರ್ನಾಟಕ ಲೋಕಾಯುಕ್ತ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಅಜಿತ್ ಕುಮರ್ ರೈಯವರು ದ.ಕ.ದ ಪುತ್ತೂರು ತಾಲೂಕಿನ ಕೆಯ್ಯರು ಗ್ರಾಮದ ಸಾಗುವಿನವರು.ಅವರ ತಂದೆ ಆನಂದ್ ರೈ ಸೊರಕೆ ಅವರು ಸರ್ಕಾರಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು.ಅವರು ತನ್ನ 51ನೇ ವಯಸ್ಸಿನಲ್ಲಿ ನಿಧನರಾಗಿದ್ದರು.ಅವರ ಮರಣ ನಂತರ ಅನುಕಂಪದ ಆಧಾರದಲ್ಲಿ ಅಜಿತ್ ರೈ ಅವರಿಗೆ ಸರ್ಕಾರಿ ಕೆಲಸ ಸಿಕ್ಕಿತ್ತು.ಸಣ್ಣ ವಯಸ್ಸಿನಲ್ಲೇ ಬೆಂಗಳೂರುನಲ್ಲಿ ಕಂದಾಯ ಇಲಾಖೆಯಲ್ಲಿ ಹೆಡ್ ಕ್ಲರ್ಕ್ ಆಗಿ ಬಳಿಕ ನಿರೀಕ್ಷಕರಾಗಿ ಅಲ್ಲಿಂದ ಭಡ್ತಿ ಹೊಂದಿ ಉಪ ತಹಶೀಲ್ದಾರ್ ಬಳಿಕ ಕೆ.ಎ.ಎಸ್ ಪರೀಕ್ಷೆ ಬರೆದು ತಹಶಿಲ್ದಾರ್ ಹುದ್ದೆಗೆ ನೇಮಕವಾಗಿದ್ದರು.ಇವರ ಸಹೋದರ ಅಶಿತ್ ರೈ ಕೂಡ ಬೆಂಗಳೂರಿನಲ್ಲೇ ಉದ್ಯೋಗದಲ್ಲಿದ್ದು ಸಂಸಾರ ಸಮೇತ ಅಲ್ಲೇ ವಾಸವಾಗಿದ್ದಾರೆ.ಕೆಯ್ಯೂರು ಸಾಗುವಿನಲ್ಲಿ ಮನೆ, ಕೃಷಿಭೂಮಿಯಿದ್ದು ಇಲ್ಲಿರುವ ಮನೆಯಲ್ಲಿ ತಾಯಿ ಜಲಜಾಕ್ಷಿ ಎ.ರೈಯವರು ಮಾತ್ರ ಇದ್ದಾರೆ.

ಕೆಯ್ಯೂರು ಗ್ರಾಮದ ಸಾಗುವಿನಲ್ಲಿರುವ ಅಜಿತ್ ಕುಮಾರ್ ರೈಯವರ ತಾಯಿ ಮನೆ, ಬೆಂಗಳೂರಿನಲ್ಲಿರುವ ಅಣ್ಣನ ಮನೆ, ಆಪ್ತರ ಮನೆ, ಸೇರಿದಂತೆ ಒಟ್ಟು 11 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ.ಅಜಿತ್ ಕುಮಾರ್ ರೈಯವರ ತಾಯಿ ಮನೆಯಾಗಿರುವ ಕೆಯ್ಯೂರು ಗ್ರಾಮದ ಸಾಗು ನಿವಾಸಕ್ಕೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಡಿವೈಎಸ್‌ಪಿ ಚೆಲುವರಾಜ್ ನೇತೃತ್ವದ ಅಧಿಕಾರಿಗಳ ತಂಡ ಎರಡು ವಾಹನಗಳಲ್ಲಿ ಬಂದು ದಾಳಿ ನಡೆಸಿದ್ದಾರೆ.ಮನೆಯಲ್ಲಿ ಅಜಿತ್ ರೈಯವರ ತಾಯಿ ಮಾತ್ರ ವಾಸವಿದ್ದು ಲೋಕಾಯುಕ್ತ ಪೊಲೀಸರು ಮನೆಯನ್ನು ಪರಿಶೀಲನೆ ಮಾಡಿದ್ದಾರೆ.ಕೆಲವೊಂದು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದ್ದು ಮಧ್ಯಾಹ್ನದ ತನಕವೂ ಶೋಧದಲ್ಲಿ ನಿರತರಾಗಿದ್ದರು.ಅಜಿತ್ ಕುಮಾರ್ ರೈಯವರ ದೇವನಹಳ್ಳಿಯ ಇಳತ್ತೋರೆನಲ್ಲಿರುವ ಮನೆ, ದೊಡ್ಡಬಳ್ಳಾಪುರದಲ್ಲಿರುವ ಮನೆ, ಚಂದ್ರಾ ಲೇಔಟ್ ಮನೆಗೂ ದಾಳಿ ನಡೆದಿದೆ.ಅಜಿತ್ ಕುಮಾರ್ ರೈಯವರ ಆಪ್ತ ಬಸವೇಶ್ವರನಗರದಲ್ಲಿರುವ ಗೌರವ್ ಶೆಟ್ಟಿ ನೆಲ್ಲಿಕಟ್ಟೆ ಎಂಬವರ ಮನೆ ಮೇಲೂ ದಾಳಿ ನಡೆದಿದೆ. ಇಷ್ಟು ಮಾತ್ರವಲ್ಲದೆ ಅಜಿತ್ ಕುಮಾರ್ ರೈ ಸಂಬಂಧಿಕರ ಮನೆ ಮೇಲೂ ದಾಳಿ ನಡೆದಿತ್ತು.

Leave A Reply

Your email address will not be published.