Free Rice: ಉಚಿತ ಅಕ್ಕಿಯ ಬದಲು ಹಣ ನೀಡಲು ನಿರ್ಧಾರ – ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ

latest news Decision to give money instead of free rice

 

Free Rice: ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದ ಬಳಿಕ 5ಗ್ಯಾರಂಟಿ ಯೋಜನೆಗಳಲ್ಲಿ ಒಂದೊಂದೇ ಯೋಜನೆಗಳ ಜಾರಿಗೆ ಕ್ರಮ ಕೈಗೊಳ್ಳುತ್ತಿದೆ. ಇದೀಗ ಕರ್ನಾಟಕ ಸರಕಾರವು ಅಕ್ಕಿ ಕೊರತೆ ಹಿನ್ನೆಲೆಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲು ಹಣವನ್ನು ನೀಡಲು ಮುಂದಾಗಿದೆ.

ಕರ್ನಾಟಕದಲ್ಲಿ ಉಚಿತ ಅಕ್ಕಿ ವಿತರಣೆಗೆ ಸಂಬಂಧಿಸಿದಂತೆ ಅಕ್ಕಿ ಒದಗಿಸಲು ಹರಸಾಹಸ ಪಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಹೊಸ ನಿರ್ಧಾರಕ್ಕೆ ಬಂದಿದೆ. ಕೇಂದ್ರ ಸರ್ಕಾರದೊಂದಿಗೆ ಸುದೀರ್ಘ ಹಗ್ಗಜಗ್ಗಾಟ ನಡೆಸಿದ ಕರ್ನಾಟಕ ಸರ್ಕಾರವು ಇಂದು ಬುಧವಾರ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಹೌದು, ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ, ಫಲಾನುಭವಿಗಳಿಗೆ ತಿಂಗಳಿಗೆ 170 ರೂಪಾಯಿ ನೀಡಲು ಕರ್ನಾಟಕ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರಾದ ಎಚ್‌.ಕೆ.ಪಾಲೀಲ್ ಮತ್ತು ಆಹಾರ ಸಚಿವ ಮುನಿಯಪ್ಪ “ಕೇಂದ್ರ ಸರ್ಕಾರವು ತನ್ನ ಬಳಿ ಅಕ್ಕಿ ದಾಸ್ತಾನು ಇದ್ದರೂ ರಾಜ್ಯದ ಫಲಾನುಭವಿಗಳಿಗೆ ಅಕ್ಕಿ ಕೊಡಲಿಲ್ಲ. ನಾವು ಹಣ ಕೊಡುತ್ತೇವೆ ಎಂದರೂ ಸ್ಪಂದಿಸಲಿಲ್ಲ” ಎಂದು ಮುನಿಯಪ್ಪ ದೂರಿದರು.

ಕೇಂದ್ರದ ಅಧೀನದಲ್ಲಿರುವ ಸಂಸ್ಥೆಗಳು ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಹೀಗಾಗಿ ಕೇಂದ್ರ ಗೋದಾಮು ನಿಗಮವು ಒಂದು ಕೆಜಿ ಅಕ್ಕಿಗೆ ನಿಗದಿಪಡಿಸಿರುವ 34 ರೂಪಾಯಿ ಮೊತ್ತವನ್ನು ಜನರಿಗೇ ನೇರವಾಗಿ ಹಂಚಿಕೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಮುನಿಯಪ್ಪ ತಿಳಿಸಿದರು.

ಬಡವರಿಗೆ ಅಕ್ಕಿ ಕೊಡುವುದರಲ್ಲಿ ರಾಜಕೀಯ ಮಾಡಿದ ಕಾರಣ ನಾವು ಜನರಿಗೆ ಮಾತು ಕೊಟ್ಟಂತೆ ಹಣ ಕೊಡುತ್ತಿದ್ದೇವೆ. ನಂತರ ಎಷ್ಟು ಬೇಗ ಆದರೆ ಅಷ್ಟು ಬೇಗ ಪ್ರತಿ ಫಲಾನುಭವಿಗೆ ತಲಾ 10 ಕೆಜಿಯಂತೆ ಅಕ್ಕಿ ಕೊಡುತ್ತೇವೆ. ಒಂದು ಕೆಜಿಗೆ 34 ರೂಪಾಯಿಯಂತೆ ಮನೆಯಲ್ಲಿ ಎಷ್ಟು ಜನರಿದ್ದಾರೆ ಲೆಕ್ಕ ಹಾಕಿ ಹಣಕೊಡುತ್ತೇವೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಈ ಯೋಜನೆಯ ಅನುಷ್ಠಾನಕ್ಕಾಗಿ ಒಂದು ತಿಂಗಳಿಗೆ ಸುಮಾರು 800 ಕೋಟಿ ರೂಪಾಯಿ ಖರ್ಚು ಮಾಡಬೇಕಾಗಬಹುದು. ಈ ಲೆಕ್ಕಾಚಾರ ನಾವು ಹಾಕಿಕೊಂಡಿದ್ದೇವೆ. 20 ಸಾವಿರ ಟನ್ ಅಕ್ಕಿ ಖರೀದಿಗೂ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸಚಿವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನೆಗೆ ಉತ್ತರಿಸುವಾಗ ಮಾಹಿತಿ ನೀಡಿದರು.

ಅಕ್ಕಿ ಬದಲು ಹಣ ನೀಡುವ ತಾಂತ್ರಿಕ ವಿವರ ಒದಗಿಸಿದ ಸಚಿವ ಎಚ್‌.ಕೆ.ಪಾಟೀಲ, ಕುಟುಂಬದ ಯಜಮಾನರ (ಮ್ಯಾನೇಜರ್ ಆಫ್ ದಿ ಹೌಸ್‌) ಅಕೌಂಟ್‌ಗೆ ಹಣ ಹಾಕುತ್ತೇವೆ. ಅವರು ಮನೆಯ ಇತರರಿಗೆ ಆಹಾರ ಒದಗಿಸುತ್ತಾರೆ. ಈ ಕುರಿತು ನಾವು ಯೋಚಿಸಿದ್ದೇವೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರ ನಮಗೆ ಅಸಹಕಾರ ತೋರಿಸಿದರು. ಹೀಗಾಗಿ ನಾವು ಅನಿವಾರ್ಯವಾಗಿ ಜನರಿಗೆ ಹಣ ಕೊಡುವ ನಿರ್ಧಾರ ಮಾಡಬೇಕಾಯಿತು. ಈ ಹಣದಿಂದ ಜನರು ಅಕ್ಕಿಯಷ್ಟೇ ಅಲ್ಲ, ಜೋಳ, ರಾಗಿ, ಬೇಳೆ, ಎಣ್ಣೆ ಏನು ಬೇಕಾದರೂ ಖರೀದಿಸಬಹುದು ಎಂದು ಸಚಿವ ಎಚ್‌.ಕೆ.ಪಾಟೀಲ ಕೇಂದ್ರದ ವಿರುದ್ಧ ನೇರ ಆರೋಪ ಮಾಡಿದರು.

ಒಬ್ಬ ಫಲಾನುಭವಿಗೆ 170 ರೂಪಾಯಿಯಂತೆ ಪಡಿತರ ಚೀಟಿಯಲ್ಲಿ ಎಷ್ಟು ಜನರ ಹೆಸರಿದೆಯೋ ಅಷ್ಟೂ ಜನರಿಗೆ ಕೊಡುತ್ತೇವೆ. ಇದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ನಮಗೆ ಅಕ್ಕಿ ಸಿಕ್ಕ ನಂತರ ಅಕ್ಕಿಯನ್ನೇ ಕೊಡುತ್ತೇವೆ. ಹಣ ಕೊಡುವುದು ನಿಲ್ಲಿಸುತ್ತೇವೆ ಎಂದು ತಿಳಿಸಿದರು.

ನಾವು ಅಕ್ಕಿ ಬದಲಿಗೆ ಹಣವನ್ನು ಕೊಡಬಾರದು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದನ್ನು ಕೇಳಲು ಆಗುವುದಿಲ್ಲ. ಕೇಂದ್ರ ಸರ್ಕಾರದ ಗೋದಾಮುಗಳಲ್ಲಿ 7 ಲಕ್ಷ ಟನ್ ಅಕ್ಕಿ ಇದೆ. ಇದನ್ನು ಎತ್ತುವಳಿ ಮಾಡಲು ಖಾಸಗಿಯವರಿಗೆ ಕೊಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಬಾರದು ಎಂದು ತಾಕೀತು ಮಾಡಿದೆ ಎಂದು ಆರೋಪ ಮಾಡಿದರು.

ಸದ್ಯ ಶೇ 95ರಷ್ಟು ಪಡಿತರ ಚೀಟಿಗಳು ಆಧಾರ್ ಕಾರ್ಡ್‌ಗೆ ಲಿಂಕ್ ಹಾಗಿವೆ. ಗೃಹಲಕ್ಷ್ಮೀ ಯೋಜನೆಗೂ ಇದು ಬಳಕೆಯಾಗಲಿದೆ. ಬ್ಯಾಂಕ್ ಖಾತೆಗಳಿಗೆ ಹಣ ಹಾಕುತ್ತೇವೆ. ಈ ತಿಂಗಳಲ್ಲಿಯೇ ನಾವು ಕೆಲಸ ಆರಂಭಿಸುತ್ತೇವೆ. ಮುಂದಿನ ತಿಂಗಳಿನಿಂದಲೇ ಹಣ ಜಮಾ ಆಗಲಿದೆ ಎಂದು ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ.

 

ಇದನ್ನು ಓದಿ:  Water price hike: ವಿದ್ಯುತ್ ದರ ಏರ್ತು, ತರಕಾರಿ ಆಕಾಶಕ್ಕೆ ಹಾರ್ತು, ಈಗ ನೀರಿನ ಬೆಲೆ ಬಾನಿಗೆ ಚಿಮ್ಮಲು ರೆಡಿ ?! 

Leave A Reply

Your email address will not be published.