PM Modi in Mangaluru: ಮಂಗಳೂರು: ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಸಮಯದಲ್ಲಿ ಫ್ಲ್ಯಾಶ್‌‌‌ ಲೈಟ್ ಹಾಕಿಸಲು ಕಾರಣವೇನು?

PM Narendra Modi in mangaluru

PM Modi in Mangaluru: ಮಂಗಳೂರು: ಚುನಾವಣೆ ಹಿನ್ನೆಲೆ ಮೇ 3ರಂದು ಪ್ರಧಾನಿ ನರೇಂದ್ರ ಮೋದಿ (Narendra modi) ಮಂಗಳೂರಿಗೆ (PM Modi in Mangaluru) ಭೇಟಿ ನೀಡಿದ್ದು, ಪ್ರಚಾರದಲ್ಲಿ ತೊಡಗಿದ್ದರು. ಇಲ್ಲಿನ ಮೂಡಬಿದಿರೆ ಕ್ಷೇತ್ರದ ಮೂಲ್ಕಿಯ ಕೊಳ್ನಾಡು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ನರೇಂದ್ರ ಮೋದಿ ಕಾರ್ಯಕರ್ತರ ಮೊಬೈಲ್​​ನಿಂದ ಫ್ಲಾಶ್ ಲೈಟ್ ಹಾಕಿಸಿದ್ದರು. ಯಾವ ಕಾರಣಕ್ಕೆ ಫ್ಲಾಶ್ ಲೈಟ್ ಹಾಕಿಸಿದರು ಗೊತ್ತಾ? ಇಲ್ಲಿದೆ ಮಾಹಿತಿ.

ಸಮಾವೇಶದಲ್ಲಿ, ಮೋದಿಗೆ ಕೇಸರಿ ಶಾಲು ಮತ್ತು ಪೇಟ ಹಾಕಿ ಸ್ವಾಗತಿಸಲಾಯಿತು. ಈ ವೇಳೆ ಗಣಪತಿ ಮೂರ್ತಿ, ಉಡುಪಿ ಶ್ರೀಕೃಷ್ಣನ ಮೂರ್ತಿ ಮತ್ತು ದಕ್ಷಿಣ ಕನ್ನಡ (dakshina kannada) ಮತ್ತು ಉಡುಪಿ ಜಿಲ್ಲೆಯ (Udupi) ಪುಣ್ಯಕ್ಷೇತ್ರಗಳ ಪ್ರಸಾದವನ್ನು ನೀಡಲಾಯಿತು. ಕಟೀಲು ಮತ್ತು ಬಪ್ಪನಾಡು ಕ್ಷೇತ್ರದ ಪ್ರಸಾದವನ್ನು ಶಾಸಕ ಉಮನಾಥ ಕೋಟ್ಯಾನ್ ನೀಡಿದ್ದು, ಧರ್ಮಸ್ಥಳದ ಪ್ರಸಾದವನ್ನು ಶಾಸಕ ಹರೀಶ್ ಪೂಂಜಾ (Harish poonja) ಮೋದಿಗೆ ನೀಡಿದರು.

ಮೋದಿ ಭಾಷಣ ಪ್ರಾರಂಭಿಸುವ ವೇಳೆ, ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡಲು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಮುಂದಾದರು. ಆದರೆ ಕಾರ್ಯಕರ್ತರು ಭಾಷಾಂತರ ಬೇಡ ಎಂದು ಹೇಳಿ, ‘ಮೋದಿ ಮೋದಿ’ ಎಂದು ಘೋಷಣೆ ಕೂಗಲಾರಂಭಿಸಿದರು. ಈ ಸಂದರ್ಭ ಮಾತನಾಡಿದ ಮೋದಿ “ನೀವೇ ನಮ್ಮ ರಿಮೋಟ್ ಕಂಟ್ರೋಲ್. ನಿಮ್ಮ ಆದೇಶವನ್ನು ತಲೆಯ ಮೇಲಿಟ್ಟು ಪಾಲಿಸುತ್ತೇನೆ” ಎಂದು ಹೇಳಿದರು.

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ, “ನನಗೊಂದು ವೈಯಕ್ತಿಕ ಸಹಾಯ ಮಾಡುವಿರಾ?” ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಕೇಳಿದ್ದು, ಸಭೆಯು ಒಕ್ಕೊರಲಿನಿಂದ “ಹೋ” ಎಂದಿತು. ನಂತರ “ಎಲ್ಲರೂ ನಿಮ್ಮ ಮೊಬೈಲ್ ನಲ್ಲಿರುವ ಫ್ಲಾಶ್ ಲೈಟ್ ಆನ್ ಮಾಡಿ, ಕೈ ಮೇಲಕ್ಕೆ ಹಿಡಿಯಿರಿ” ಎಂದು ಪ್ರಧಾನಿ ಹೇಳಿದರು. ಅದರಂತೆ ಕಾರ್ಯಕರ್ತರ ಸಮೂಹ ಮೊಬೈಲ್ ನ ಫ್ಲ್ಯಾಶ್ ಆನ್ ಮಾಡಿದರು. ಬಳಿಕ ಮಾತನಾಡಿದ ಮೋದಿ, “ದಿಲ್ಲಿಯಿಂದ ನಿಮ್ಮ ಪ್ರಧಾನಿ ನರೇಂದ್ರ ಮೋದಿ ಮೂಲ್ಕಿಗೆ ಬಂದು ನಿಮಗೆ ಪ್ರಣಾಮ, ನಮಸ್ಕಾರ ಹೇಳಿದ್ದಾರೆ ಎಂಬ ಸಂದೇಶವನ್ನು ಮನೆಮನೆಗೆ ತಲುಪಿಸಿ” ಎಂದು ಹೇಳಿದರು.

ಮೋದಿ ಕಾರ್ಯಕ್ರಮದ ವೇದಿಕೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 13 ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು, ಎರಡು ಕ್ಷೇತ್ರದ ಸಂಸದರು ಭಾಗಿಯಾಗಿದ್ದರು. ‌ಅಲ್ಲದೆ, ಬಿಜೆಪಿ ಟಿಕೆಟ್ ಸಿಗದ ಹಾಲಿ ಶಾಸಕರನ್ನು ಸಮಾವೇಶಕ್ಕೆ ಆಹ್ವಾನಿಸಲಾಗಿತ್ತು. ಟಿಕೆಟ್ ವಂಚಿತ ಪುತ್ತೂರು ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಸುಳ್ಯ ಕ್ಷೇತ್ರದ ಶಾಸಕ ಸಚಿವ ಅಂಗಾರ, ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್ ಮತ್ತು ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್, ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ್ ಶೆಟ್ಟಿ, ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಜರಾಗಿದ್ದರು.

ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಆಘಾತಕಾರಿ ಸುದ್ದಿ! ರಾಜ್ಯದಲ್ಲಿ ನಾಲ್ಕು ದಿನ ಮದ್ಯ ಮಾರಾಟ ಬಂದ್!!!

Leave A Reply

Your email address will not be published.