Prakash Raj: ಸುದೀಪ್ ನಿರ್ಧಾರ ಅಚ್ಚರಿ, ಆಘಾತ ಮಾತ್ರವಲ್ಲ ನೋವನ್ನೂ ತಂದಿದೆ | ಕಿಚ್ಚನ ಬಿಜೆಪಿ ಬೆಂಬಲಕ್ಕೆ ಪ್ರಕಾಶ್ ರಾಜ್‌ ತಳಮಳ!

Actor Prakash Raj :ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌(Kiccha Sudeep) ಅವರು ಈ ಬಾರಿ ಚುನಾವಣೆಯಲ್ಲಿ ಬಿಜೆಪಿ(BJP)ಗೆ ಬೆಂಬಲ ಘೋಷಿಸಿ, ಪ್ರಚಾರ ಮಾಡುವುದಾಗಿ ತಿಳಿಸಿರುವುದು ಅಚ್ಚರಿ ಉಂಟುಮಾಡಿರುವುದಲ್ಲದೆ ರಾಜ್ಯಾದ್ಯಂತ ಪರ ವಿರೋಧಗಳ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಬಹುಭಾಷಾ ನಟ ಪ್ರಕಾಶ್‌ ರಾಜ್‌(Actor Prakash Raj), ಸುದೀಪ್ ನಡೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕಿಚ್ಚ ಸುದೀಪ್‌ ಹೇಳಿಕೆಯಿಂದ ನನಗೆ ಆಘಾತ ಮತ್ತು ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು, ಖ್ಯಾತ ನಟ ಕಿಚ್ಚ ಸುದೀಪ್ ಇಂದು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ನಿನ್ನೆ ದಿನ ಸಿಎಂ ಬಸವರಾಜ್(CM Bommai) ಬೊಮ್ಮಾಯಿ ಜೊತೆ ಸುದ್ದಿಗೋಷ್ಠಿ ನಡೆಸಿದ ಕಿಚ್ಚ ಸುದೀಪ್ ಬಿಜೆಪಿಗೆ ತಮ್ಮ ಬೆಂಬಲ ಪ್ರಕಟಿಸಿದರು. ಇದರಿಂದ ಬಿಜೆಪಿಗೆ ಆನೆ ಬಲ ಸಿಕ್ಕಂತಾಗಿದೆ. ಕಿಚ್ಚ ಸುದೀಪ್ ನಿರ್ಧಾರ ನಟ ಪ್ರಕಾಶ್ ರಾಜ್‌ಗೆ ತೀವ್ರ ಆಘಾತ ತಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್, ಕಿಚ್ಚ ಸುದೀಪ್ ನಿರ್ಧಾರ ಅಚ್ಚರಿ ತಂದಿದೆ. ಜೊತೆಗೆ ತೀವ್ರ ನೋವಾಗಿದೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಅಂದಹಾಗೆ ಕಿಚ್ಚ ಸುದೀಪ್‌ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಕುರಿತು ಮಾಧ್ಯಮಗಳು ವರದಿ ಮಾಡುತ್ಥಿದ್ದಂತೇ ಬುಧವಾರ ಬೆಳಿಗ್ಗೆಯಷ್ಟೇ ನಟ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿ ” ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ” ಎಂದು ಬರೆದುಕೊಂಡಿದ್ದರು. ಈ ಮೂಲಕ ಸುದೀಪ್ ಬಿಜೆಪಿಗೆ ಬೆಂಬಲ ನೀಡಿದರೆ, ಮಾರಿಕೊಂಡಂತೆ ಅನ್ನೋ ಅಭಿಪ್ರಾಯದಲ್ಲಿ ಟ್ವೀಟ್ ಮಾಡಿದ್ದರು.

ಆದರೆ ಕಿಚ್ಚ ಸುದೀಪ್ ಟೀಕೆ ಟಿಪ್ಪಣಿಗೆ ಕಿವಿಗೊಡದೆ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಬುಧವಾರ ಮಧ್ಯಾಹ್ನ ಮುಖ್ಯಮಂತ್ರಿಗಳ ಜತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ನನಗೆ ಬೆಂಬಲವಾಗಿ ನಿಂತಿದ್ದ ಆತ್ಮೀಯಾರಾದ ಬಸವರಾಜ ಬೊಮ್ಮಾಯಿ ಅವರ ಪರ ಪ್ರಚಾರ ಮಾಡುತ್ತೇನೆ ಅಷ್ಟೇ ಎಂದಿದ್ದರು. ಈ ಬೆಳವಣಿಗೆ ಈ ಕುರಿತು ಪ್ರತಿಕ್ರಿಯಿಸಿದರುವ ನಟ ಪ್ರಕಾಶ್‌ ರಾಜ್‌
“ಕಿಚ್ಚ ಸುದೀಪ್ ಹೇಳಿಕೆಯಿಂದ ನನಗೆ ಆಘಾತ ಮತ್ತು ನೋವಾಗಿದೆ” ಎಂದಿದ್ದಾರೆ.

ಅಂದಹಾಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ “ಚಿತ್ರರಂಗದಲ್ಲಿ ನನಗೆ ಗಾಡ್ ಫಾದರ್ ಇರಲಿಲ್ಲ. ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿರುವುದು ನನಗೆ ಖುಷಿ. ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ. ಚಿಕ್ಕ ವಯಸ್ಸಿನಿಂದ ಬೊಮ್ಮಾಯಿಯರನ್ನು ಮಾಮ ಎನ್ನುತ್ತೇನೆ” ಎಂದರು. ಅಲ್ಲದೆ ರಾಜಕಾರಣಕ್ಕೆ ನಾನು ಇಳಿಯುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದರು. ಆರಂಭದ ದಿನಗಳಿಂದಲೂ ನನಗೆ ಬೊಮ್ಮಾಯಿಯವರು ಪರಿಚಯ. ಬೊಮ್ಮಾಯಿಯವರ ಆಹ್ವಾನದ ಮೇಲೆ ಸುದ್ದಿಗೋಷ್ಠಿಗೆ ಬಂದಿದ್ದೇನೆ. ನಾನು ಬೊಮ್ಮಾಯಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ನನ್ನ ತಂದೆ ತೋರಿಸಿದ ದಾರಿಯಲ್ಲಿ ನಾನು ನಡೆಯುತ್ತೇನೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಟ್ವೀಟ್ ಕರಿತು ಮಾಧ್ಯಮದ ಪ್ರಶ್ನೆಗೆ ಕಿಚ್ಚ ಸುದೀಪ್ ಅದೇ ದಾಟಿಯಲ್ಲಿ ಉತ್ತರ ನೀಡಿದ್ದರು. ನಾನು ಪ್ರಕಾಶ್ ರಾಜ್ ಅವರೊಂದಿಗೆ ಮಂದಿನ ಸಿನಿಮಾ ಮಾಡಲು ಕಾಯುತ್ತಿದ್ದೇನೆ. ಪ್ರಕಾಶ್ ರಾಜ್ ಜೊತೆ ಸಿನಿಮಾ ಮಾಡಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ. ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದೇನೆ ಎಂದಿದ್ದರು.

ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಕಿಚ್ಚ, ಭಾರತ ಎತ್ತರಕ್ಕೆ ಏರುತ್ತಿರುವುದು ಏಕೆ ಎಂದು ತಿಳಿದಿದೆ. ಭಾರತದಲ್ಲಿ ಆಗಿರುವ ಅಭಿವೃದ್ದಿ ಬಗ್ಗೆ ನನಗೆ ಖುಷಿ ಇದ್ದು, ಭ್ರಷ್ಟಾಚಾರದ ಬಗ್ಗೆ ಕಾನೂನು ಸೂಕ್ತ ಕ್ರಮ ಕೈಗೊಳ್ಳಲಿದೆ. ಅಭಿವೃದ್ದಿ ಆಗಿರುವುದನ್ನು ಗಮನಿಸಿದ್ದು, ಅದು ನನ್ನ ಅಭಿಪ್ರಾಯದ ಮೇಲೂ ಪ್ರಭಾವ ಬೀರಿದೆ. ನಾನು ಮೋದಿ ನಾಯಕತ್ವವನ್ನ ಒಪ್ಪಿಕೊಳ್ಳುತ್ತೇನೆ. ಆದರೆ, ಅದಕ್ಕೂ ಇಂದಿನ ನಿರ್ಣಯಕ್ಕೂ ಸಂಬಂಧವಿಲ್ಲ. ಒಳ್ಳೆಯ ಕಾರಣಗಳಿಗಾಗಿ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದರು. ಹಲವು ಸಿದ್ದಾಂತಗಳನ್ನು ನಾನು ಸಹ ಒಪ್ಪುತ್ತೇನೆ ಎಂದರು.

ಇನ್ನು ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸುದೀಪ್‌ ಅವರು ಚಿತ್ರದುರ್ಗ ಜಿಲ್ಲೆಯ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಯೂ ಕಳೆದ ಚುನಾವಣೆ ವೇಳೆ ಕೇಳಿಬಂದಿತ್ತು. ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಆತ್ಮೀಯ ಸಂಬಂಧ ಇರಿಸಿಕೊಂಡಿರುವ ಸುದೀಪ್‌ ಅವರು ನಿರ್ದಿಷ್ಟವಾಗಿ ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಬಗ್ಗೆ ಅನುಮಾನವೂ ಇತ್ತು. ಆದರೆ ಈ ಬಾರಿ ಬಿಜೆಪಿ ಸುದೀಪ್ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Divya Bharati : 19ನೇ ವಯಸ್ಸಿಗೇ ಹಿಟ್ ಸಿನಿಮಾಗಳನ್ನು ನೀಡಿದ್ದ ಈ ನಟಿಯ ಸಾವು ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು! ಅಷ್ಟಕ್ಕೂ ಅಂದು ನಡೆದದ್ದೇನು?

Leave A Reply

Your email address will not be published.