ಮಂಗಳೂರು : ಕಾರಿನ ಓವರ್ ಟೇಕ್ ಧಾವಂತ | ಸ್ಕೂಟರ್, ರಿಕ್ಷಾ, ಬಾಲಕನಿಗೆ ಡಿಕ್ಕಿ | ಬಾಲಕ ದಾರುಣ ಸಾವು!!!

ಮಂಗಳೂರು: ಅತೀ ವೇಗದಲ್ಲಿ ಬಂದ ಕಾರೊಂದು ನಿಂತಿದ್ದ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸರಣಿ ಅಪಘಾತ ನಡೆಸಿ ರಸ್ತೆ ಬದಿ ನಿಂತಿದ್ದ ಶಾಲಾ ಬಾಲಕನ ಮೇಲೆರಗಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಇಲ್ಲಿನ ಉಳ್ಳಾಲ ಸಮೀಪ ನಡೆದಿದೆ.

ಘಟನೆಯಿಂದ ಮೃತಪಟ್ಟ ವಿದ್ಯಾರ್ಥಿಯನ್ನು ಬೋಳಿಯಾರು ಗ್ರಾಮದ ಭಟ್ರಬೈಲು ನಿವಾಸಿ ಹರಿಶ್ಚಂದ್ರ ಎಂಬವರ ಪುತ್ರ ಮುಡಿಪು ಸರ್ಕಾರಿ ಶಾಲಾ ಎಂಟನೇ ತರಗತಿ ವಿದ್ಯಾರ್ಥಿ ಕಾರ್ತಿಕ್(14) ಎಂದು ಗುರುತಿಸಲಾಗಿದೆ.

ಮಂಗಳೂರಿನಿಂದ ಮುಡಿಪು ಕಡೆಗೆ ತೆರಳುತ್ತಿದ್ದ ಕಾರು ಚಾಲಕ, ಪ್ರಯಾನಿಕರನ್ನು ಇಳಿಸಲು ನಿಂತಿದ್ದ ಬಸ್ಸನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದಾಗ ಎದುರಿನಿಂದ ಬರುತ್ತಿದ್ದ ಸ್ಕೂಟರ್ ಹಾಗೂ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಅಲ್ಲೇ ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದು ಘಟನೆ ನಡೆದಿದೆ ಎನ್ನಲಾಗಿದೆ.

ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾರು ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಸ್ಥಳದಲ್ಲಿ ನೂರಾರು ಜನ ಜಮಾಯಿಸಿ ಕಾರು ಚಾಲಕನ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

Leave A Reply

Your email address will not be published.