ತಿರುಪತಿಯಲ್ಲಿ ಎಷ್ಟೊಂದು ಜಲಪಾತಗಳು ಇವೆ ?

ಭಾರತದಲ್ಲಿ ಹಲವಾರು ದೇವಾಲಯಗಳು ಇವೆ. ಹಾಗೆಯೇ ಒಂದೊಂದು ದೇವಾಲಯವು ತನ್ನದೇ ಆದ ಐತಿಹಾಸಿಕ ವೈಶಿಷ್ಯಗಳನ್ನು ಒಳಗೊಂಡಿದೆ. ನಾವಿಲ್ಲಿ ಭಾರತದ ಶ್ರೀಮಂತ ದೇವಾಲಯವಾದ ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಾಲಯದ ಬಗ್ಗೆ ತಿಳಿಯೋಣ. ಹೌದು ವಿಶ್ವ ವಿಖ್ಯಾತಿ ಪಡೆದಿರುವ ಈ ದೇವಾಲಯವು ದಟ್ಟವಾದ ಹಸಿರು ಅರಣ್ಯ ಮತ್ತು ನಿರ್ಮಲವಾದ ವಾತಾವರಣದಿಂದ ತುಂಬಿದ್ದು ಕೇವಲ ಧಾರ್ಮಿಕ ಪ್ರವಾಸ ಮಾಡುವವರಿಗೆ ಮಾತ್ರವಲ್ಲದೇ, ಪ್ರಕೃತಿ ಪ್ರೇಮಿಗಳನ್ನು ಬಹುವಾಗಿ ಆಕರ್ಷಿಸುತ್ತದೆ.

ವಿಶೇಷವಾಗಿ ತಿರುಪತಿಯಲ್ಲಿ ಮನೋಹರವಾದ ಜಲಪಾತಗಳಿಗೆ ನೆಲೆಯಾಗಿದೆ. ಹೌದು ತಿರುಮಲ, ತಿರುಪತಿಯಲ್ಲಿ ಕೇವಲ ಪವಿತ್ರವಾದ ದೇವಾಲಯಗಳು ಮಾತ್ರವಲ್ಲ, ಮಂತ್ರಮುಗ್ಧಗೊಳಿಸುವ ಜಲಪಾತಗಳು ಇವೆ. ಹಾಗಾದರೆ ಆ ಜಲಪಾತಗಳು ಯಾವುವು ಎಂಬುದನ್ನು ತಿಳಿಯೋಣ.

  • ಆಕಾಶ ಗಂಗಾ ತೀರ್ಥಂ: ಇದೊಂದು ಪವಿತ್ರವಾದ ಜಲಪಾತವಾಗಿದ್ದು, ತಿರುಪತಿಯಲ್ಲಿನ ಪ್ರಮುಖವಾದ ಜಲಪಾತಗಳಲ್ಲಿ ಒಂದಾಗಿದೆ. ಆಕಾಶ ಗಂಗಾ ತೀರ್ಥಂ ತಿರುಪತಿಯಿಂದ ಕೇವಲ 27 ಕಿ.ಮೀ ದೂರದಲ್ಲಿದೆ. ವರ್ಷವಿಡೀ ಧುಮ್ಮಿಕ್ಕುವ ಈ ಜಲಪಾತದ ನೀರು, ಅಪಾರ ಭಕ್ತರನ್ನು ಆಕರ್ಷಿಸುತ್ತದೆ. ಮಳೆಗಾಲದಲ್ಲಂತೂ ಜಲಪಾತದ ನೋಟ ನೋಡುವುದೇ ಸೋಜಿಗ. ಹಾಗೆಯೇ ಇಲ್ಲೊಂದು ದೇವಿಯ ದೇವಾಲಯವಿದ್ದು, ಭಕ್ತರು ಜಲಪಾತದ ನೀರನ್ನು ಸ್ಪರ್ಶಿಸಿ ತಾಯಿಯ ಆಶೀರ್ವಾದ ಪಡೆಯುತ್ತಾರೆ.
  • ನಾಗಲಾಪುರಂ ಜಲಪಾತ: ದಟ್ಟವಾದ ಹಸಿರಿನ ಮಧ್ಯೆ ಗುಪ್ತ ರತ್ನವಾಗಿ ಈ ಜಲಪಾತವು ಅಡಗಿದೆ. ತನ್ನ ಪ್ರಶಾಂತವಾದ ವಾತಾವರಣದಿಂದ ಹೆಚ್ಚು ಜನಪ್ರಿಯವಾಗಿದೆ. ನಾಗಲಾಪುರಂ ಎಂಬ ಸುಂದರವಾದ ಗ್ರಾಮದಲ್ಲಿ ಒಟ್ಟು 3 ಜಲಪಾತಗಳ ಗುಂಪನ್ನು ಕಣ್ತುಂಬಿಕೊಳ್ಳಬಹುದು. ತಿರುಪತಿಯಿಂದ ನಾಗಲಾಪುರಂ ಜಲಪಾತ ಸುಮಾರು 64 ಕಿ.ಮೀ ದೂರದಲ್ಲಿದೆ. ಜೊತೆಗೆ ಸಾಹಸ ಚಟುವಟಿಕೆಗಳಾದ ಕ್ಯಾಂಪಿಂಗ್, ಟ್ರೆಕ್ಕಿಂಗ್‌ ಮಾಡಲು ಮತ್ತು ಬೆಟ್ಟಗಳ ತುದಿಯಲ್ಲಿ ನಿಂತು ವಿಹಂಗಮ ನೋಟವನ್ನು ನೋಡುವುದೇ ಸೋಜಿಗ.
  • ತಲಕೋನ ಜಲಪಾತ: ಈ ಜಲಪಾತವು ತಿರುಪತಿಯಲ್ಲಿರುವ ಅತಿ ಎತ್ತರವಾದ ಜಲಪಾತಗಳಲ್ಲಿ ಒಂದಾಗಿದೆ. ಇದೊಂದು ಪಿಕ್ನಿಕ್‌ ತಾಣವು ಹೌದು. ತಿರುಪತಿಗೆ ಹೋಗುವ ಬಹಳಷ್ಟು ಮಂದಿ ತಪ್ಪದೇ ಸಂದರ್ಶಿಸುವ ಜಲಪಾತ ಇದಾಗಿದೆ. ಇದು ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನವನದಲ್ಲಿದೆ. ನಿರ್ಮಲವಾದ ವಾತಾವರಣವನ್ನು ಹೊಂದಿರುವ ಈ ಶ್ರೀಮಂತ ತಾಣದಲ್ಲಿ ಟ್ರೆಕ್ಕಿಂಗ್‌ ಕೈಗೊಳ್ಳಬಹುದು. ಜೊತೆಗೆ ಈ ತಲಕೋನ ಜಲಪಾತದ ನೀರು ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಈ ಕಾರಣದಿಂದಲೇ ಯಾತ್ರಿಕರು ಜಲಪಾತದಲ್ಲಿ ಮಿಂದೇಳಲು ಬಯಸುತ್ತಾರೆ. ಇದು ತಿರುಪತಿಯಿಂದ 61 ಕಿ.ಮೀ ದೂರದಲ್ಲಿ ತಲಕೋನ ಜಲಪಾತವಿದೆ.
  • ಚಕ್ರ ತೀರ್ಥಂ ಜಲಪಾತ: ಧಾರ್ಮಿಕ ಸ್ಥಳ ಪುರಾಣ ಹೊಂದಿರುವ ಈ ಜಲಪಾತದಲ್ಲಿ ಬ್ರಹ್ಮ ದೇವನು ತಪಸ್ಸು ಮಾಡಿದರು ಎಂದು ನಂಬಲಾಗಿದೆ. ತಿರುಪತಿಯಲ್ಲಿರುವ ಅತ್ಯಂತ ಪವಿತ್ರವಾದ ಜಲಪಾತಗಳಲ್ಲಿ ಇದು ಒಂದಾಗಿದೆ. ಹಾಗೆಯೇ ಈ ಪ್ರದೇಶವನ್ನು ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಶುದ್ದೀಕರಿಸಿದನು. ಈ ಕಾರಣದಿಂದಲೇ ಜಲಪಾತದ ನೀರು ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ. ಯಾರೆಲ್ಲಾ ಜಲಪಾತದಲ್ಲಿ ಮಿಂದೇಳುತ್ತಾರೆಯೋ ಅಂತವರ ಪಾಪ ಕಳೆಯುತ್ತದೆ ಎಂದು ನಂಬಲಾಗಿದೆ. ತಿರುಪತಿಯಿಂದ ಕೇವಲ 25 ಕಿ.ಮೀ ದೂರದಲ್ಲಿ ಚಕ್ರ ತೀರ್ಥಂ ಜಲಪಾತವಿದೆ.

ಕೈಗಲ್ ಜಲಪಾತ: ತಿರುಪತಿಯಿಂದ ಕೈಗಲ್‌ ಜಲಪಾತವು 144 ಕಿ.ಮೀ ದೂರದಲ್ಲಿದೆ. ಹೌದು ಕೈಗಲ್‌ ಫಾಲ್ಸ್ ಇರುವುದು ಆಂಧ್ರಪ್ರದೇಶದ ಚಿತ್ತೂರಿನಲ್ಲಿ. ಇದು ಕೌಂಡಿನ್ಯ ಎಂಬ ವನ್ಯಜೀವಿ ಅಭಯಾರಣ್ಯದ ನಡುವೆ ಗುಪ್ತ ರತ್ನವಾಗಿ ಅಡಗಿದೆ. ಈ ಜಲಪಾತವು ಅದರ ಸುತ್ತಲೂ ಇರುವ ಕೈಗಲ್‌ ಎಂಬ ಗ್ರಾಮದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳುವುದೇ ಸ್ವರ್ಗ.

ಸ್ಥಳೀಯರು ಈ ಜಲಪಾತವನ್ನು ‘ದುಮುಕುರಲ್ಲು ಜಲಪಾತ’ ಎಂದೇ ಕರೆಯುತ್ತಾರೆ. ಜಲಪಾತದ ನೀರು 40 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಹಾಗೆಯೇ ಜಲಪಾತವು ಹಲವಾರು ಸಣ್ಣ ಕೊಳಗಳನ್ನು ರೂಪಿಸುತ್ತದೆ. ಜಲಪಾತದ ಸುರಕ್ಷಿತವಾದ ಸ್ಥಳದಲ್ಲಿ ಕೂತು ಜಲಕ್ರೀಡೆಯನ್ನು ಎಂಜಾಯ್ ಮಾಡಬಹುದು.

  • ಕೈಲಾಸಕೊಂಡ ಜಲಪಾತ: ತಿರುಪತಿಯಿಂದ ಕೈಲಾಸಕೊಂಡ ಜಲಪಾತವು ಸುಮಾರು 60 ಕಿ.ಮೀ ದೂರದಲ್ಲಿದೆ. ವೆಂಕಟೇಶ್ವರ ಸ್ವಾಮಿ ಮತ್ತು ಪದ್ಮಾವತಿ ದೇವಿಯ ಸ್ಥಳ ಪುರಾಣ ಹೊಂದಿರುವ ಈ ಜಲಪಾತವು ಅತ್ಯಂತ ಪವಿತ್ರವಾದುದು ಎಂದು ನಂಬಲಾಗಿದೆ. ಜಲಪಾತದ ನೀರು ಸ್ಪಟಿಕ ಸ್ಪಷ್ಟವಾಗಿದ್ದು, ಖನಿಜಗಳಿಂದ ಸಮೃದ್ಧವಾಗಿದೆ. ಅಲ್ಲದೇ, ಔಷಧೀಯ ಗುಣಗಳನ್ನು ಹೊಂದಿದೆ ಎಂದು ಸಹ ನಂಬಲಾಗಿದೆ. ಬಹುತೇಕ ಯಾತ್ರಿಕರು ತಿರುಪತಿಗೆ ಹೋದಾಗ ತಪ್ಪದೇ ಕೈಲಾಸಕೊಂಡ ಜಲಪಾತಕ್ಕೆ ಭೇಟಿ ನೀಡುತ್ತಾರೆ.
  • ಕಪಿಲಾ ತೀರ್ಥಂ: ಈ ಕಪಿಲ ತೀರ್ಥವು ಶೇಷಾದರಿ ಬೆಟ್ಟಗಳ ಕೆಳಗೆ ಕಪಿಲೇಶ್ವರ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನೆಲೆಗೊಂಡಿರುವ ಪವಿತ್ರ ಜಲಪಾತವಾಗಿದೆ. ತಿರುಪತಿಯಿಂದ ಕಪಿಲಾ ತೀರ್ಥಂ ಸುಮಾರು 36 ಕಿ.ಮೀ ದೂರದಲ್ಲಿದೆ. ಸುಮಾರು 100 ಮೀಟರ್‌ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತದ ದೃಶ್ಯವನ್ನು ನೋಡುವುದೇ ಸ್ವರ್ಗ.

ಹೌದು ನೀವು ತಿರುಪತಿ ಕಡೆಗೆ ಪಯಣ ಹೊರಟಾಗ ಐತಿಹಾಸಿಕ ದೇವಸ್ಥಾನ ಭೇಟಿಯ ಜೊತೆಗೆ ಹಲವಾರು ಜಲಪಾತಗಳನ್ನು ಕಣ್ತುಂಬಿ ಕೊಳ್ಳಬಹುದು. ಈ ಜಲಪಾತವು ಅರಣ್ಯಗಳ ನಡುವೆ ಪ್ರಕೃತಿ ಸಾಕ್ಷಿಯಾಗಿ ಹರಿಯುವುದನ್ನು ನೋಡುವುದೇ ಒಂದು ವಿಸ್ಮಯ ಅನುಭವ ಆಗಿದೆ.

Leave A Reply

Your email address will not be published.