ನಿನ್ನೆ ತಾನೇ ಜೈಲಿಂದ ಬಿಡುಗಡೆ ಆಗಿದ್ದವ, ನಿನ್ನೆ ಒಂದೇ ದಿನದಲ್ಲಿ 2 ವಾಹನ ಕದ್ದ, ಅದೃಷ್ಟ ಅಡ್ಡಡ್ಡ ಮಲಗಿ ನಿನ್ನೆಯೇ ಸಿಕ್ಕಿ ಬಿದ್ದ !

ಉಪ್ಪಿನಂಗಡಿ: ಪ್ರಕರಣದ ಆರೋಪಿಯಾಗಿದ್ದವ ಜೈಲು ವಾಸ ಮುಗಿದು ಇನ್ನೇನು ಒಳ್ಳೆಯ ರೀತಿಲಿ ಬದುಕು ಕಟ್ಟಿಕೊಳ್ಳಲಿ ಎಂದು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಆದರೆ, ಈ ಖದೀಮ, ಹುಟ್ಟು ಗುಣ ಸತ್ತರೂ ಬಿಡುವುದಿಲ್ಲ ಎನ್ನುವ ಹಾಗೆ ಜೈಲಿನಿಂದ ಹೊರಗೆ ಕಾಲಿಡುತ್ತಿದ್ದಂತೆ ಮತ್ತೆ ಕಳವುಗೈದು ಪೋಲಿಸರ ವಶವಾದ ಘಟನೆ ಗುಂಡ್ಯದಲ್ಲಿ ನಡೆದಿದೆ.

ಅಂದಹಾಗೆ ಆರೋಪಿ ಕಣ್ಣೂರು ಜೈಲಿನಿಂದ ನಿನ್ನೆ ಬಿಡುಗಡೆಯಾಗಿದ್ದ.ಅಲ್ಲಿಂದಲೇ ತನ್ನ ಖತರ್ನಾಕ್ ಬುದ್ಧಿ ಶುರು ಹಚ್ಚಿಕೊಂಡು, ಮಂಗಳೂರಿನಿಂದ ಬೈಕೊಂದನ್ನು ಕದ್ದು ಅದರಲ್ಲೇ ಬೆಂಗಳೂರು ಮಾರ್ಗವಾಗಿ ತೆರಳುತ್ತಿದ್ದ. ಇವನ ದುರಾದೃಷ್ಟ ಎಂಬಂತೆ ಎಂಜಿರ ‘ಮಲ್ನಾಡ್’ ಡಾಬಾದ ಸಮೀಪ ಇರುವ ಪಿ.ಸಿ ಸ್ಟೋರ್ ಬಳಿ ಬೈಕ್ ನ ಪೆಟ್ರೋಲ್ ಖಾಲಿಯಾಗಿದೆ.

ಪೆಟ್ರೋಲ್ ಹಾಕಿಸಿಕೊಳ್ಳಲು ಹಣ ಇಲ್ಲದೆ. ನಂತರ ಅಲ್ಲಿಂದ ಮುಂದಕ್ಕೆ ತೆರಳಲು ಪಿ.ಸಿ ಸ್ಟೋರ್ ಬಳಿ ದಿನಸಿ ಸಾಮಾನು ಖರೀದಿಸಲು ತೆರಳಿದ್ದ ನೆಲ್ಯಾಡಿಯ ಪದವಿ ಕಾಲೇಜೊಂದರ ಉಪನ್ಯಾಸಕಿಯ ಸ್ಕೂಟಿಯನ್ನು ಕದ್ದಿದ್ದಾನೆ. ಈತನ ಕಳ್ಳತನ ಸ್ಥಳೀಯರ ಗಮನಕ್ಕೆ ಬರುತ್ತಿದ್ದಂತೆ, ಕೂಡಲೇ ಕಾರ್ಯಪ್ರವೃತ್ತರಾದ ಸತೀಶ್ ದೇರಣೆ, ಮೋಹನ ಕರ್ತಡ್ಕ, ಕವೀಶ್ ಸಂಪಿಗೆತ್ತಡಿ ಮತ್ತು ಅವರ ಸ್ನೇಹಿತರ ಪರಿಶ್ರಮದಿಂದ ಕಳ್ಳನನ್ನು ಗುಂಡ್ಯ ಚೆಕ್ ಪೋಸ್ಟ್ ಬಳಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆದರೆ, ಆರೋಪಿಯ ಹೆಸರು ಮಾತ್ರ ತಿಳಿದು ಬಂದಿಲ್ಲ. ವಿಚಾರಿಸಿದಾಗ ಬೇರೆ ಬೇರೆ ಹೆಸರು ಹೇಳುತ್ತಿದ್ದು, ನಿಜವಾದ ಹೆಸರು ತಿಳಿದು ಬಂದಿಲ್ಲ.ಎಂಜಿರ ಪ್ರದೇಶವು ಧರ್ಮಸ್ಥಳ ಪೋಲಿಸ್ ಠಾಣಾ ವ್ಯಾಪ್ತಿಗೆ ಒಳಪಡುವುದರಿಂದ ಆರೋಪಿಯನ್ನು ಧರ್ಮಸ್ಥಳ ಪೋಲಿಸ್ ಠಾಣೆಗೆ ಉಪ್ಪಿನಂಗಡಿ ಪೋಲಿಸರು ಕರೆದೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.