Pilchandi Daivastana: ‘ಹುಚ್ಚು ಕಟ್ಟಿದವರ ಹುಚ್ಚು ಹಿಡಿಸುತ್ತೇನೆ’ ಎಂದು ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ? ಕೊನೆಗೂ ಸ್ಪಷ್ಟೀಕರಣ ಕೊಟ್ಟ ದೈವಸ್ಥಾನ ಮಂಡಳಿ!!

Share the Article

Pilchandi Daivastana: ಕಾಂತಾರ ಚಿತ್ರದ ಕುರಿತಾಗಿ ಪಿಲಿಚಂಡಿ ದೈವವೂ ಹೇಳಿಕೆ ನೀಡಿದೆ ಎನ್ನಲಾದ ವಿಚಾರ ರಾಜ್ಯಾದ್ಯಂತ ಭಾರಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದು ದೈವ ಹೇಳಿದ್ದು ಅಥವಾ ದೈವ ನರ್ತಕ ಹೇಳಿದ ಹೇಳಿಕೆಯೋ ಎಂಬ ವಿವಾದ ಮುನ್ನಲೆಗೆ ಬಂದು ಸಾಕಷ್ಟು ಗೊಂದಲಗಳನ್ನು ಕೂಡ ಸೃಷ್ಟಿಸಿತ್ತು. ಇದೀಗ ಈ ಕುರಿತಾಗಿ ಪಿಲಿಚಂಡಿ ದೈವಸ್ಥಾನದ ಆಡಳಿತ ಮಂಡಳಿ ಸ್ಪಷ್ಟೀಕರಣವನ್ನು ನೀಡಿದೆ.

ಹೌದು, ಕಾಂತಾರ ಚಿತ್ರ ಬಿಡುಗಡೆಯಾಗುವುದರೊಂದಿಗೆ ಕರಾವಳಿಯ ಜಾನಪದ ಕಲೆ, ಸಂಸ್ಕೃತಿ ಇಡೀ ವಿಶ್ವಕ್ಕೆ ಪರಿಚಯವಾಗುತ್ತಿದೆ. ದೈವದ ವೇಷ, ಹಾಕೋದು ದೈವ ಆವಾಹನೆಯಾದಂತೆ ನಟಿಸೋ ಹುಚ್ಚು ಪ್ರೇಕ್ಷಕರು ಕಾಂತಾರಾ ಚಿತ್ರ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಈ ರೀತಿ ಮಾಡಿದರೆ ಅದು ದೈವಗಳಿಗೆ ಅವಮಾನ ಮಾಡಿದಂತೆ. ಹೀಗೆ ಹುಚ್ಚಾಟ ಆಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸಿನಿಮಾ ತಂಡ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ‘ಕಾಂತಾರ’ ಚಿತ್ರದ ವಿರುದ್ಧ ದೈವದ ಅಪಹಾಸ್ಯದ ಆರೋಪದ ಹಿನ್ನೆಲೆಯಲ್ಲಿ, ಕೆಲವು ದೈವಾರಾಧಕರು ಪಿಲ್ಚಂಡಿ ದೈವದ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ‘ನಾನು ನಿಮ್ಮ ಹಿಂದಿದ್ದೇನೆ, ನಿಮ್ಮ ಹೋರಾಟ ಮುಂದುವರೆಸಿ. ಹುಚ್ಚು ಕಟ್ಟಿದವರ ಹುಚ್ಚು ಹಿಡಿಸುತ್ತೇನೆ’ ಎಂದು ಹೇಳುವ ಮೂಲಕ ಎಚ್ಚರಿಕೆಯನ್ನೂ ನೀಡಿತ್ತು. ಅಷ್ಟೇ ಅಲ್ಲದೆ ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನು (ಆದಾಯವನ್ನು) ಆಸ್ಪತ್ರೆಗೆ ಸುರಿಸುವಂತೆ ಮಾಡುತ್ತೇನೆ ಎಂದೂ ಹೇಳಿತ್ತು.

ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಚರ್ಚೆ, ವಾದ ನಡೆದು, ಇದು ದೈವ ಹೇಳಿದ್ದಾ, ದೈವ ನರ್ತಕಾ ಹೇಳಿದ್ದಾ? ಎಂದು ಕೆಲವರು ಪ್ರಶ್ನಿಸುವ ಮೂಲಕ ದೈವ ವಾಕ್ಯವನ್ನೇ ಅಪಹಾಸ್ಯ ಮಾಡುತ್ತಿದ್ದರು. ಇದೀಗ ಈ ಘಟನೆಯ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ಪೆರಾರ ಶ್ರೀ ಬ್ರಹ್ಮ ದೇವರು ಬಲವಾಂಡಿ-ಪಿಲಿಚಂಡಿ ದೈವಸ್ಥಾನ ಸ್ಪಷ್ಟೀಕರಣ ನೀಡಿದ್ದು ‘ಕಾಂತಾರ ಚಿತ್ರದ (Kantara Chapter 1) ಬಗ್ಗೆ ದೈವ ಯಾವುದೇ ಅಭಯ ನುಡಿ ನೀಡಿಲ್ಲ’ ಎಂದು ಹೇಳಿದೆ.

ಮಾಧ್ಯಮ ಹೇಳಿಕೆಯಲ್ಲಿ ಏನಿದೆ?
ಮಂಗಳೂರು ತಾಲೂಕು ಶ್ರೀ ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ ಪಿಲಿಚಾಂಡಿ ದೈವಸ್ಥಾನ -ಪಡುಪೆರಾರ ಕ್ಷೇತ್ರದಲ್ಲಿ ನಡೆದ ಬಲವಾಂಡಿ-ಪಿಲಿಚಾಂಡಿ ದೈವಗಳ ಪುದರ್ -ಮೆಚ್ಚಿ ಜಾತ್ರೆ ಸಮಯದ ದೈವಪಾತ್ರಿ ದರ್ಶನ -ದೈವದ ನಡೆ-ನುಡಿಗಳ ಬಗ್ಗೆ ಉಂಟಾದ ಗೊಂದಲ-ಭಿನ್ನಾಭಿಪ್ರಾಯ ವಿಚಾರದಲ್ಲಿ ಆಡಳಿತ ಮಂಡಳಿಯ ಸ್ಪಷ್ಟಿಕರಣ ನೀಡುತ್ತಿದೆ. ಬ್ರಹ್ಮ ದೇವರು -ಇಷ್ಟ ದೇವತಾ ಬಲವಾಂಡಿ -ಪಿಲಿಚಾಂಡಿ ದೈವಸ್ಥಾನ, ಪಡುಪೆರಾರ-ಕ್ಷೇತ್ರದಲ್ಲಿ ಶತಮಾನದ ಕಾಲದ ಕಟ್ಟು ಕಟ್ಟುಳೆಯಂತೆ, ಗುತ್ತು ಬರ್ಕೆ ಮಹನೀಯರು ಹಾಗೂ ಗ್ರಾಮಸ್ಥರು, ಸಾರ್ವಜನಿಕರ ಕೂಡವಿಕೆಯಿಂದ ನಡೆಸಲ್ಪಡುವ ಪುರ್-ಮೆಚ್ಚಿ ಜಾತ್ರೆಯು ಇತ್ತೀಚಿಗೆ ಕ್ಷೇತ್ರದಲ್ಲಿ ನಡೆದಿರುತ್ತದೆ. ಈ ಸಂದರ್ಭದಲ್ಲಿ ದೈವದ ಪಾತ್ರಿ-ದೈವವು ನೀಡಿದ ಅಭಯ ನಡೆ ನುಡಿಗಳ ವಿಚಾರದಲ್ಲಿ ಗೊಂದಲ ಭಿನ್ನಾಭಿಪ್ರಾಯ ಏರ್ಪಟ್ಟಿರುವುದು ಕ್ಷೇತ್ರದ ಆಡಳಿತ ಮಂಡಳಿಯ ಗಮನಕ್ಕೆ ಬಂದಿರುತ್ತದೆ.

ಕ್ಷೇತ್ರದ ಬಲವಾಂಡಿ -ಪಿಲಿಚಾಂಡಿ ದೈವದ ನರ್ತನದ ಬಳಿಕ ನಡೆಯುವ ನಡೆ ನುಡಿಗಳ ಸಂದರ್ಭದಲ್ಲಿ ಕೆಲವೊಂದು ಯುವಕರುಗಳು ದೈವ-ದೇವರ, ಆಚಾರ-ವಿಚಾರದಲ್ಲಿ ಆಗುತ್ತಿರುವ ಅಪಪ್ರಚಾರ ವಿಚಾರದಲ್ಲಿ ದೈವದ ಸಮಕ್ಷಮ ನಿವೇದನೆ ಮಾಡಿ ಕೊಂಡಿರುತ್ತಾರೆ. ಈ ಬಗ್ಗೆ ದೈವವು ಸೂಕ್ತ ಅಭಯವನ್ನು ನೀಡಿರುತ್ತದೆ ವಿನಾ: ಯಾವುದೇ ಚಲನಚಿತ್ರ, ಅದರಲೂ ಮುಖ್ಯವಾಗಿ ಪ್ರಕೃತ ಪ್ರಚಾರದಲ್ಲಿರುವ ಕಾಂತರ-1 ಬಗ್ಗೆ ಯಾವುದೇ ಅಭಯ ನುಡಿಯನ್ನು ದೈವವು ನೀಡಿರುವುದಿಲ್ಲ.ಆದರೆ ದೈವವು ನಿವೇದನೆಗೆ ಸಂಬಂಧಿಸಿ ನೀಡಿದ ಅಭಯ-ನುಡಿಯನ್ನು ನಿವೇದಿಸಿಕೊಂಡ ಯುವಕರು ಮಾಧ್ಯಮಗಳಿಗೆ ಬಿಡುಗಡೆ ಮಾಡಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುವುದಕ್ಕೆ ಶ್ರೀಕ್ಷೇತ್ರದ ಭಕ್ತರು ಗ್ರಾಮಸ್ಥರು, ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿರುವುದರಿಂದ ಈ ಸ್ಪಷ್ಟಿಕರಣವನ್ನು ಆಡಳಿತ ಮಂಡಳಿ ನೀಡುತ್ತಿದೆ.

ಮೇಲಿನಂತೆ ಶ್ರೀ ಕ್ಷೇತ್ರ ಪೆರಾರದದಲ್ಲಿ ನಡೆದ ಜಾತ್ರ ಸಂದರ್ಭದಲ್ಲಿನ ದೈವ ನಡೆ-ನುಡಿಯಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಗಳು /ಚಲನಚಿತ್ರದ ಬಗ್ಗೆ ಯಾವುದೇ ಅಭಯ-ನುಡಿ ನೀಡುವ ಸಂದರ್ಭ ಬಂದಿರುವ ಕಾರಣ, ಪ್ರಕೃತ ಈ ವಿಚಾರದಲ್ಲಿನ ಗೊಂದಲ-ಭಿನ್ನಾಭಿಪ್ರಾಯಗಳಿಗೆ ಅಲ್ಲದೇ ಈ ಗೊಂದಲ ಶ್ರೀ ಕ್ಷೇತ್ರದ ದೈವ-ದೇವರು-ಆಡಳಿತ ಮಂಡಳಿಯು ಹೊಣೆಗಾರರಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ.

Comments are closed.