Tumakuru : ಶಾಲಾ ಬಾಲಕಿಯರು ಶೌಚಾಲಯಕ್ಕೆ ತೆರಳಿದ್ದಾಗ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಪ್ರಶ್ನಿಸಿದ ವಿದ್ಯಾರ್ಥಿಗೆ ಹಲ್ಲೆ!!

Tumakuru : ತುಮಕೂರಿನ ಹುಳಿಯಾರು ಸರ್ಕಾರಿ ಶಾಲೆಯ (Huliyaru Government School) ಬಾಲಕಿಯರ ಶೌಚಾಲಯದ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಿದ್ದಾರೆ. ಅಲ್ಲದೆ ಕಲ್ಲು ತೂರಿದನ್ನು ಪ್ರಶ್ನಿಸಿದ ವಿದ್ಯಾರ್ಥಿಗೆ ( Student ) ಪುಂಡರ‌ ಗುಂಪು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹೌದು, ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಕೆಪಿಎಸ್​ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಯಶ್ವಂತ್ ಶುಕ್ರವಾರ (ಮಾ.14)ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆ ತೆರಳಿದ್ದರು. ಈ ವೇಳೆ ಬಾಲಕಿಯರ ಶೌಚಾಲಯದ ಮೇಲೆ ಅನ್ಯಕೋಮಿನ ಪುಂಡರು ಕಲ್ಲು ಎಸೆದಿದ್ದಾರೆ. ಇದನ್ನು ಕಂಡ ಯಶ್ವಂತ್​ ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ಶಾಲೆಯ ಆವರಣದೊಳಗೆ ನುಗ್ಗಿದ ಅನ್ಯಕೋಮಿನಿ 6-7ಜನ ಪುಂಡರು ಯಶ್ವಂತ್​ನನ್ನು ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿಚಾರ ತಿಳಿದು ಕೂಡಲೆ ಶಾಲೆಯ ಮುಖ್ಯಾಪಾದ್ಯಯರು ಸ್ಥಳಕ್ಕೆ ದೌಡಾಯಿ, ಹಲ್ಲೆ ಮಾಡುವುದನ್ನು ತಡೆದು, ಯಶ್ವಂತ್​ನನ್ನು ರಕ್ಷಿಸಿದ್ದಾರೆ. ಬಳಿಕ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬರುವುದನ್ನು ಕಂಡ ಪುಂಡರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹುಳಿಯರು ನಿವಾಸಿ ಮಹಬೂಬ್ ಷರಿಫ್, ಶಂಶುದ್ದೀನ್​, ಇರ್ಫಾನ್​, ಮುಬಾರಕ್​, ಮುದಾಸೀರ್, ಯಾಸೀನ್​, ತಾಝೀಮ್​ ಕಲ್ಲು ತೂರಿ, ಹಲ್ಲೆ ಮಾಡಿದ ಆರೋಪಿಗಳು ಎಂದು ತಿಳಿದು ಬಂದಿದೆ.

ಇನ್ನೂ ಘಟನೆಯಲ್ಲಿ ವಿದ್ಯಾರ್ಥಿ ಯಶ್ವಂತ್​ರ ಬೆನ್ನು ಹಾಗೂ ತಲೆಗೆ ತೀವ್ರಪೆಟ್ಟಾಗಿದೆ. ಗಾಯಾಳು ವಿದ್ಯಾರ್ಥಿ ಯಶ್ವಂತ್​ರನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ಆಡಳಿತ ಮಂಡಳಿ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಮಹಬೂಬ್ ಷರೀಫ್ ಹಾಗೂ ಆತನ ಸಹಚರ ಒಟ್ಟು 7 ಜನರ ವಿರುದ್ಧ ದೂರು ದಾಖಲಾಗಿದೆ.

Comments are closed.