Pratap Simha : ತನಗೆ ಟಿಕೆಟ್ ತಪ್ಪಿಸಿದ್ದು ಯಾರೆಂಬುದರ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ !!

Pratap Simha: ಟಿಕೆಟ್ ಮಿಸ್ ಆದರೂ ಬೇಸರ, ಆಕ್ರೋಶವನ್ನು ಹೊರ ಹಾಕದೆ ಮೋದಿಯವರೇ ನನಗೆ ಎರಡು ಅವಧಿಗೆ ಎಂಪಿ ಮಾಡಿದ್ದಾರೆ, ಪತ್ರಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ದಾರೆ. ಇದಕ್ಕಿಂತ ಇನ್ನೇನು ಬೇಕು. ಸಾಯೋವರೆಗೂ ಮೋದಿ ಮೋದಿ ಎನ್ನುತ್ತಲೇ ಬದುಕುತ್ತೇನೆ. ಯಾರು ಏನೇ ಕೊಡುತ್ತೀನಿ ಎಂದರೂ ಪಕ್ಷ ಬಿಟ್ಟು ಎಲ್ಲೂ ಹೋಗಲ್ಲಾ ಎಂದು ಸ್ವಾಮಿ ನಿಷ್ಠೆ ತೋರಿದ ಪ್ರತಾಪ್ ಸಿಂಹ(Pratap Simha) ಇದೀಗ ತಮಗೆ ಟಿಕೆಟ್ ತಪ್ಪಿಸಿದ್ದು ಯಾರೆಂಬುದರ ಬಗ್ಗೆ ಮಾತನಾಡಿದ್ದಾರೆ.

ಹೌದು, ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಭಾಗವಹಿಸಿದಾಗ ಪ್ರತಾಪ್ ಸಿಂಹ ಅವರಿಗೆ ಸಾಮಾನ್ಯವಾಗಿ ನಿಮಗೆ ಸೀಟ್ ತಪ್ಪಲು ಯಾರು ಕಾರಣ ಎಂಬ ಪ್ರಶ್ನೆ ಎದುರಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ನನಗೆ ಟಿಕೆಟ್‌ ತಪ್ಪಿದ್ದರ ಬಗ್ಗೆ ನೂರು ಕಾರಣಗಳನ್ನು ಹುಡುಕಬಹುದು. ಆದರೆ ಈ ಬಗ್ಗೆ ತಿಪ್ಪೆ ಅಗಿಯುವ ಕೆಲಸ ಮಾಡಬಾರದು. ಜೊತೆಗೆ ಕಾರ್ಯಕರ್ತರಿಗೆ ಯದುವೀರ್‌ ಅವರಿಗೆ ಟಿಕೆಟ್‌ ಸಿಕ್ಕಿದೆ ಅನ್ನುವ ಖುಷಿಗಿಂತ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ಮಿಸ್‌ ಆಯಿತಲ್ಲ ಎನ್ನುವ ನೋವು ಜಾಸ್ತಿ ಆಗಿದೆ. ನಮ್ಮ ಕಾರ್ಯಕರ್ತರಿಗೆ ನೋವಾಗಿರೋದು ಸತ್ಯ. ಇದರಿಂದ ಮೈಸೂರು ಕೊಡಗು ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಉತ್ಸಾಹ ಹೋಗಿದೆ. ಇದನ್ನೆಲ್ಲಾ ಬದಿಗೊತ್ತಿ ಯದುವೀರ್ ಅವರನ್ನು ಗೆಲ್ಲಿಸಿ, ಮೋದಿಯವರನ್ನು ಮತ್ತೆ ಪ್ರಧಾನಿ ಮಾಡೋಣ ಎಂದು ಹೇಳಿದ್ದಾರೆ.

ಅಂದಹಾಗೆ ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಬಿಜೆಪಿ-ಜೆಡಿಎಸ್(BJP-JDS) ಸಮನ್ವಯ ಸಭೆಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಪ್ರತಾಪ್ ಸಿಂಹ ಅವರಿಗೆ ಮುಂದೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಭವಿಷ್ಯವಿದೆ. ಪ್ರಧಾನಿ ಮೋದಿ ಏನೇ ನಿರ್ಧಾರ ಮಾಡಿದರೂ ಯೋಚಿಸಿ ಮಾಡುತ್ತಾರೆ. ಅವರು ಪ್ರತಾಪ್ ಸಿಂಹ ಅವರ ಬಗ್ಗೆಯೂ ಯೋಚಿಸುತ್ತಾರೆ, ಯದುವೀರ್ ಬಗ್ಗೆಯೂ ಯೋಚಿಸುತ್ತಾರೆ. ರಾಷ್ಟ್ರ ವರಿಷ್ಠರು ಏನೇ ಮಾಡಿದರೂ ಅದರ ಹಿಂದೆ ಒಂದು ಕಾರಣ ಇದ್ದೇ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಪ್ರತಾಪ್ ಸಿಂಹ ಅವರನ್ನು ರಾಜ್ಯ ರಾಜಕೀಯಕ್ಕೆ ಕರೆತರುತ್ತೇವೆ ಎಂದು ವಿಜಯೇಂದ್ರ ಪರೋಕ್ಷವಾಗಿ ಹೇಳಿದ್ದಾರೆ.

Leave A Reply

Your email address will not be published.