Arun Kumar Puttila: ಬಿಜೆಪಿ ಜೊತೆ ಸೇರಲು ಅರುಣ ಕುಮಾರ್‌ ಪುತ್ತಿಲರಿಂದ ಹಲವು ಷರತ್ತು; ಏನೆಲ್ಲ?

Arun Kumar Puttila: ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಮೂಡಿಸಿದ ಹಿಂದೂ ಕಾರ್ಯಕರ್ತ ಅರುಣ್‌ ಪುತ್ತಿಲ ಅವರು ಇದೀಗ ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರುವ ಕುರಿತು ವರದಿಯಾಗಿದೆ. ಇಂದು ಪುತ್ತೂರಿನಲ್ಲಿ ನಡೆದ ಪುತ್ತಿಲ ಪರಿವಾರ ಸಮಾಲೋಚನಾ ಸಭೆಯಲ್ಲಿ ಅವರು ಬಿಜೆಪಿ ಜೊತೆ ವಿಲೀನಕ್ಕೆ ಷರತ್ತುಗಳನ್ನು ಹಾಕಿದ್ದಾರೆ. ಅರುಣ್‌ ಪುತ್ತಿಲ ಜೊತೆಗೆ ಪುತ್ತಿಲ ಪರಿವಾರದವರ ಬೇಡಿಕೆ ಏನೆಂದರೆ, ಲೋಕಸಭಾ ಚುನಾವಣೆಗೂ ಮುನ್ನ ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸ್ಥಾನದ ನೀಡಿದರೆ ಮಾತ್ರ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.

ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅರುಣ್‌ ಪುತ್ತಿಲ ಅವರು ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಒಟ್ಟು ಸೇರಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವುದು ಪರಿವಾರದ ಪ್ರಧಾನ ಬೇಡಿಕೆ. ಜತೆಗೆ ಪದಾಧಿಕಾರಿಗಳಲ್ಲೂ ಅವಕಾಶ ನೀಡಬೇಕು ಎಂದು ಕೋರಲಾಗಿದೆ ಎಂದು ಟಿವಿ9 ವರದಿ ಮಾಡಿದೆ.

ಲೋಕಸಭಾ ಚುನಾವಣೆ ಗೆಲ್ಲುವುದು ದೊಡ್ಡ ಸಂಗತಿ ಅಲ್ಲ. ವ್ಯವಸ್ಥೆಗಳ ಅಗತ್ಯವೂ ಇಲ್ಲ. ಆದರೂ ಬಿಜೆಪಿ ಜೊತೆ ಕೈಜೋಡಿಸಲು ಮುಂದಾಗಿದ್ದೇವೆ. ಗೌರವ ತರುವ ವ್ಯವಸ್ಥೆಗಳು ಸುಸೂತ್ರವಾಗಿ ನಡೆಯಬೇಕು. ಈ ಕಾರಣದಿಂದ ಪುತ್ತಿಲ ಪರಿವಾರ ಸಂಘಟನೆ ಕೆಲವು ತೀರ್ಮಾನಗಳನ್ನು ತಗೊಂಡಿದ್ದಾರೆ ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಮೂರುದಿನದೊಳಗೆ ಈ ಕುರಿತು ಸೂಕ್ತ ನಿರ್ಧಾರವನ್ನು ಮಾತೃಪಕ್ಷದವರು ಕೈಗೊಳ್ಳಬೇಕು. ಪುತ್ತಿಲ ಪರಿವಾರ ಚುನಾವಣಾ ರಾಜಕೀಯಕ್ಕೆ ಸಿದ್ಧವಾಗಿದ್ದು, ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ ಸೂಕ್ತ ನಿರ್ಧಾರವನ್ನು ಮಾತೃಪಕ್ಷ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

Leave A Reply

Your email address will not be published.