ಬ್ಯಾಡಗಿಯಲ್ಲಿ ಅರಳಲಿದೆ ಮಂಗಳೂರಿನ ನಾಗಲಿಂಗ!! ದೇವಾಲಯಗಳಿಗೆ ಉಚಿತವಾಗಿ ತಲುಪಿಸಿದ ನಿಡ್ಡೋಡಿಯ ವಿನೇಶ್ ಪೂಜಾರಿ

ಮಂಗಳೂರು:ಕಳೆದ ಕೆಲ ವರ್ಷಗಳಿಂದ ಅಳಿವಿನಂಚಿನಲ್ಲಿರುವ ನಾಗಲಿಂಗ ಪುಷ್ಪದ ಸಸಿಗಳನ್ನು ಬೆಳೆಸುತ್ತಿರುವ ಮಂಗಳೂರು ನಗರದ ಹೊರವಲಯದ ನಿಡ್ಡೋಡಿ ನಿವಾಸಿ ವಿನೇಶ್ ಪೂಜಾರಿ, ಈ ಬಾರಿ ಸುಮಾರು 160 ಕ್ಕೂ ಮಿಕ್ಕಿ ಸಸಿಗಳನ್ನು ಬ್ಯಾಡಗಿಗೆ ಕಳುಹಿಸಿಕೊಟ್ಟಿದ್ದಾರೆ.

ಬ್ಯಾಡಗಿ ಮೂಲದ ಪರಿಸರ ಪ್ರೇಮಿ ಮೋಹನ್ ಕುಮಾರ್ ಉಳ್ಳಟ್ಟಿ ಎಂಬವರ ಮೂಲಕ ಬ್ಯಾಡಗಿ ತಲುಪಿದ ಸಸಿಗಳನ್ನು ಅಲ್ಲಿನ ಸ್ಥಳೀಯ ದೇವಾಲಯ, ಮಠ ಮಂದಿರಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಅಪರೂಪದ ವೃಕ್ಷಗಳನ್ನು ಉಳಿಸುವ ಹವ್ಯಾಸ ಹೊಂದಿರುವ ವಿನೇಶ್ ಆರಂಭದಲ್ಲಿ ರುದ್ರಾಕ್ಷಿ ಕೃಷಿಯೊಂದಿಗೆ ಒಂದೆರಡು ನಾಗಲಿಂಗ ಪುಷ್ಪದ ಸಸಿಗಳನ್ನು ನೆಟ್ಟು ಬೆಳೆಸಿದ್ದರು. ಬಳಿಕ ಅವುಗಳ ಮಹತ್ವ ಅರಿತು ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಇನ್ನುಷ್ಟು ಸಸಿಗಳನ್ನು ಬೆಳೆಸಿದ್ದು, ಅರಣ್ಯ ಇಲಾಖೆ, ಸ್ಥಳೀಯ ದೇವಾಲಯ ಮಠ ಮಂದಿರಗಳಲ್ಲಿ ನೆಟ್ಟು ಬೆಳೆಸಲು ಪ್ರೋತ್ಸಾಹಿಸಿದ್ದು, ಖುದ್ದು ತಾನೇ ತೆರಳಿ ನೆಟ್ಟು ಬರುತ್ತಿದ್ದಾರೆ.

ಅಲ್ಲದೇ ಉರಗ ಪ್ರೇಮಿಯೂ ಆಗಿರುವ ವಿನೇಶ್ ಸ್ಥಳೀಯವಾಗಿ ಹಲವಾರು ಉರಗಗಳನ್ನು ಹಿಡಿದು ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಸಂರಕ್ಷಣೆ ಮಾಡಿದ್ದಾರೆ. ಮೂಡಬಿದ್ರೆ, ಕಿನ್ನಿಗೋಳಿ ಪರಿಸರದಲ್ಲಿ ಉರಗ ಪ್ರೇಮಿಯಾಗಿ ಚಿರಪರಿಚಿತರಾಗಿರುವ ವಿನೇಶ್ ಅವರ ಬಳಿ ಇನ್ನೂ ಹಲವಾರು ನಾಗಲಿಂಗ ಸಹಿಗಳಿದ್ದು, ಪರಿಸರ ಪ್ರೇಮಿಗಳಿಗೆ, ದೇವಾಲಯಗಳಿಗೆ ಉಚಿತವಾಗಿ ತಲುಪಿಸಬೇಕಾದಲ್ಲಿ ಈ ಕೆಳಗೆ ನೀಡಿರುವ ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ವಿನೇಶ್ ಪೂಜಾರಿ
8748870759

Leave A Reply

Your email address will not be published.