ಪುತ್ತೂರು: ಚೂರಿಯಿಂದ ತಿವಿದು ಯುವತಿಯ ಹತ್ಯೆ ಪ್ರಕರಣ : ತನ್ನ ಬಳಿಯಲ್ಲಿದ್ದ ಚೂರಿಯಿಂದಲೇ ಬಲಿಯಾದಳಾ ಗೌರಿ !

ಪುತ್ತೂರು: ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಬಳಿಯಲ್ಲಿ ಹತ್ಯೆಗೀಡಾದ ಗೌರಿ ಪ್ರಕರಣದಲ್ಲಿ ಆಕೆಯ ಬ್ಯಾಗ್‌ನಲ್ಲಿದ್ದ ಚೂರಿಯಿಂದಲೇ ಆಕೆ ಹತ್ಯೆಯಾಗಿದ್ದಾಳೆ ಎಂಬ ಸ್ಪೋಟಕ ಮಾಹಿತಿ ಸುದ್ದಿಯಾಗುತ್ತಿದೆ.

ಉದ್ಯೋಗಸ್ಥ ಯುವತಿಯರು, ಮಹಿಳೆಯರು ಮುಸ್ಸಂಜೆ ಮನೆಗೆ ಹೋಗುವಾಗ ನಿರ್ಜನ ದಾರಿಯಲ್ಲಿ ನಡೆದುಕೊಂಡು ಹೋಗುವ ಸಂದರ್ಭ ಮತ್ತು ಮನೆಗೆ ತಲುಪುವಾಗ ಕತ್ತಲಾಗುವ ಸಾಧ್ಯತೆಗಳು ಇರುವುದರಿಂದ ತಮ್ಮ ಆತ್ಮರಕ್ಷಣೆಗೆಂದು ಸಣ್ಣದಾದ ಆಯುಧವನ್ನು ಬಹುತೇಕ ಮಂದಿ ತಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತಿದ್ದು, ಕೊಲೆಯಾಗಿರುವ ಗೌರಿ ಕೂಡ ತನ್ನ ಆತ್ಮರಕ್ಷಣೆಗಾಗಿ ಇಟ್ಟುಕೊಂಡಿದ್ದ ಚೂರಿಯಿಂದಲೇ ಕೊಲೆಗೀಡಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಮೃತ ಯುವತಿ ಗೌರಿ ವಿಟ್ಲದ ಕುದ್ದುಪದವು ಆದಾಳ ನಿವಾಸಿಯಾಗಿದ್ದು, ಸಂಜೆ ಕೆಲಸ ಬಿಟ್ಟು ಮನೆಗೆ ಹೋಗುವಾಗ ಕುದ್ದುಪದವಿನಲ್ಲಿ ಬಸ್‌ನಲ್ಲಿ ಇಳಿದು ಅಲ್ಲಿಂದ ಅದಾಳಕ್ಕೆ ನಿರ್ಜನ ಪ್ರದೇಶ ಸೇರಿದಂತೆ ಸುಮಾರು ಅರ್ಧ ಕಿ.ಮೀ ನಡೆದುಕೊಂಡು ಹೋಗಿ ಮನೆಗೆ ಸೇರಬೇಕಾಗುತ್ತದೆ. ಮತ್ತು ಈ ಕತ್ತಲು ಆವರಿಸುವುದರಿಂದ ಆಕೆ ತನ್ನ ಆತ್ಮರಕ್ಷಣೆಗಾಗಿ ಚೂರಿಯೊಂದನ್ನು ತನ್ನ ಪರ್ಸ್‌ನಲ್ಲಿ ಇರಿಸಿಕೊಳ್ಳುತ್ತಿದ್ದರು. ಅದೇ ಚೂರಿಯಿಂದಲೇ ಆಕೆ ಕೊಲೆಗೀಡಾಗಿರುವುದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಲ್ಲದೇ ಆರೋಪಿ ಪದ್ಮರಾಜ್‌ಗೆ ಗೌರಿ ಹಲವು ವರ್ಷಗಳಿಂದಲೇ ಪರಿಚಯದಲ್ಲಿದ್ದು, ಯುವತಿಯು ಪ್ರೀತಿಯ ವಿಚಾರದಲ್ಲಿ ತನ್ನ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾಳೆ ಎಂಬ ಕಾರಣಕ್ಕೆ ಆತ ಕೃತ್ಯ ಎಸಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ವಿಟ್ಲದ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾಗಲೇ ಗೌರಿಯನ್ನು ಪದ್ಮರಾಜ್‌ ಪರಿಚಯ ಮಾಡಿಕೊಂಡಿದ್ದ. ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತ್ತು. ಕೆಲವು ವರ್ಷಗಳಲ್ಲಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಆತನ ವಿರುದ್ಧವೇ ಆಕೆ ವಿಟ್ಲ ಠಾಣೆಗೆ ದೂರು ನೀಡಿದ್ದಳು. ಪೊಲೀಸರು ಗೌರಿ ಮತ್ತು ಪದ್ಮರಾಜ್ ನನ್ನು ಠಾಣೆಗೆ ಕರೆಯಿಸಿ ಮುಚ್ಚಳಿಕೆ ಬರೆಯಿಸಿ ಕಳುಹಿಸಲಾಗಿತ್ತು. ಆದರೆ ಆ ಬಳಿಕವೂ ಇಬ್ಬರ ನಡುವೆ ಮಾತುಕತೆ ಮುಂದುವರಿದಿತ್ತು.

ಆ. 24 ರಂದು ಪದ್ಮರಾಜ್‌ ಗೌರಿ ಕೈಯಿಂದ ಕಸಿದುಕೊಂಡು ಹೋಗಿದ್ದಮೊಬೈಲ್‌ ಆತ ಈ ಹಿಂದೆ ಗಿಫ್ಟ್ ರೂಪದಲ್ಲಿನೀಡಿರುವುದು ಎನ್ನಲಾಗಿದೆ. ಈ ಮಧ್ಯೆ ಬೇರೊಬ್ಬ ಯುವಕನ ವಿಚಾರದಲ್ಲಿ ಗೌರಿ ಜತೆ ಮನಸ್ತಾಪ ಹೊಂದಿದ್ದ ಪದ್ಮರಾಜ್‌ ಅದೇ ಕಾರಣಕ್ಕೆ ಆತ, ಗೌರಿ ಕೆಲಸ ಮಾಡುತ್ತಿದ್ದ ಪುತ್ತೂರಿನ ಫ್ಯಾನ್ಸಿ ಅಂಗಡಿಗೆ ಬಂದು ಆಕೆಯ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡಿದ್ದ ಹೋಗಿದ್ದ ಎನ್ನಲಾಗಿದೆ.

ಬಳಿಕ ಮೊಬೈಲ್ ಕೊಡುವಂತೆ ಗೌರಿ ಆತನಿಗೆ ಕರೆ ಮಾಡಿದ್ದರಿಂದ ಆತನ ವಾಪಾಸ್ ಬಂದಿದ್ದ, ಮಹಿಳಾ ಪೊಲೀಸ್ ಠಾಣೆಯ ಬಳಿಯಲ್ಲಿ ಆಕೆ ಆತನಿಗೆ ಕಾದು ನಿಂತಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದಿರುವ ಸಾಧ್ಯತೆ ಇದ್ದು, ಆ ವೇಳೆ ಆಕೆಯ ಬ್ಯಾಗಿನಲ್ಲಿದ್ದ ಚೂರಿಯಿಂದಲೇ ಆತ ಇರಿದಿದ್ದಾನೆ. ಯುವತಿಯ ಮೇಲೆ ದಾಳಿ ಮಾಡುತ್ತಿದ್ದ ವೇಳೆ ತಡೆಯಲು ಬಂದ ಕೆಲವರಿಗೆ ಆರೋಪಿಯು ಚೂರಿಯಿಂದ ಬೆದರಿಕೆಯನ್ನೂ ಒಡ್ಡಿದ್ದ ಎನ್ನಲಾಗಿದೆ.

Leave A Reply

Your email address will not be published.