Holalkere: ಬೇಸಿಗೆ ದಗೆ ನೀಗಿಸಲು ನೀರಿಗಳಿದ ಪ್ರಾಣ ಸ್ನೇಹಿತರು, ಅಪ್ಪಿಕೊಂಡೇ ಕೊನೆಯುಸಿರೆಳೆದರು!

Holalkere :ನೀರಿನಲ್ಲಿ ಮುಳುಗಿ ಸಾವನ್ನಪ್ಪುವ ಅರ್ಧ ಗಂಟೆ ಮುಂಚೆ ಗಿರೀಶ್, ತನ್ನ ಹಾಗೂ ಮೂವರು ಗೆಳೆಯರ ಫೋಟೊವನ್ನು ಇನ್‌ಸ್ಟಾಗ್ರಾಂನ(Instagram) ಲ್ಲಿ ಪೋಸ್ಟ್ ಮಾಡಿದ್ದ. ಇನ್ನೇನು ಪರೀಕ್ಷೆ ಮುಗಿದರೆ ನಾವು ನಿತ್ಯ ಸಿಗುವುದಿಲ್ಲ ಎಂದು ಗೆಳೆಯರೊಂದಿಗೆ ಸಂತಸದಿಂದ ಕಾಲ ಕಳೆಯುವ ಬಗ್ಗೆ ಬರೆದುಕೊಂಡಿದ್ದ. ಆದರೆ ಬದುಕು ಇಷ್ಟು ಬೇಗ ಮುಗಿಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಅವರು ಮೂವರೂ ಜೀವದ ಗೆಳೆಯರು. ಒಬ್ಬರನ್ನೊಬ್ಬರು ಬಿಟ್ಟು ಎಂದೂ ಇರದವರು. ಕಾಲೇಜಿಗೆ ಹೋಗುವಾಗಲೂ, ಬರುವಾಗಲೂ ಒಟ್ಟಿಗೆ. ಆದರೆ ವಿಪರ್ಯಾಸವೆಂದರೆ ಈಗ ಸಾವಿನಲ್ಲೂ ಒಟ್ಟಾಗಿದ್ದಾರೆ. ಹೌದು,ಮೂವರೂ ದ್ವಿತೀಯ ಪಿಯುಸಿ(2nd PuU)ಯ ಸಹಪಾಠಿಗಳು. ಐದು ವಿಷಯಗಳಿಗೆ ವಾರ್ಷಿಕ ಪರೀಕ್ಷೆ ಬರೆದ್ದ ಅವರು ಬುಧವಾರ (ಮಾರ್ಚ್ 29)ರಂದು ಸೋಷಿಯಾಲಜಿಯ ಕೊನೆಯ ಪರೀಕ್ಷೆ ಬರೆಯಬೇಕಿತ್ತು. ಅದೊಂದು ವಿಷಯದ ಪರೀಕ್ಷೆ ಬರೆದಿದ್ದರೆ ಮುಂದೆ ಪದವಿ ಕಾಲೇಜಿಗೆ ಹೋಗಬೇಕಿತ್ತು. ಆದರೆ ವಿಧಿಯ ಆಟವೇ ಬೇರೆ ಇತ್ತು. ಜೀವದ ಗೆಳೆಯರಾಗಿದ್ದ ಈ ಮೂವರು ಗುಂಡಿಕೆರೆಯಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡೇ ಕೊನೆಯುಸಿರೆಳೆದಿದ್ದಾರೆ.

ಹೊಳಲ್ಕೆರೆ(Holalkere) ತಾಲ್ಲೂಕಿನ ನಂದನ ಹೊಸೂರಿನ ಕೆರೆಯಲ್ಲಿ ಮಂಗಳವಾರ ಈಜಲು ಹೋಗಿ ಸಾವನ್ನಪ್ಪಿದ ಗೆಳೆಯರ ಕರುಣಾಜನಕ ಕತೆಯಿದು. ಗ್ರಾಮದಿಂದ ತುಸು ದೂರದಲ್ಲಿರುವ ಗುಂಡಿಕೆರೆ ಗುಡ್ಡಗಳ ಮಧ್ಯೆ ಜಲಾಶಯದಂತೆ ಗೋಚರಿಸುತ್ತಾ ಸುಮಾರು 30 ಅಡಿಗಳಷ್ಟು ಆಳವಿದೆ. ಬಿಸಿಲಿನ ಬೇಗೆ ಹೆಚ್ಚಿದ್ದರಿಂದ ಸುತ್ತಲಿನ ಗ್ರಾಮಗಳ ಯುವಕರು, ವಿದ್ಯಾರ್ಥಿಗಳು ಮಧ್ಯಾಹ್ನ ಈಜಲು ಹೋಗುತ್ತಾರೆ. ಅಂತೆಯೇ ಹೊರಕೆರೆ ದೇವರಪುರ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಈಜಲು ಹೋಗಿದ್ದು, ದಡದಲ್ಲಿ ಜೀವನ್ ಎಂಬ ವಿದ್ಯಾರ್ಥಿಯನ್ನು ಕೂರಿಸಿ ಮೂವರು ಕೆರೆಗೆ ಇಳಿದಿದ್ದಾರೆ. ಈಜಲು ಬಾರದೇ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಬಿಸಿಲು ಹೆಚ್ಚಿದ್ದುದರಿಂದ ಮೂವರು ಗೆಳಯರೂ ನೀರಿಗೆ ಇಳಿದರು. ನಾನು ದಡದಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದೆ. ಕ್ಷಣಾರ್ಧದಲ್ಲಿ ಮೂವರೂ ಕಾಣೆಯಾದರು. ಕೂಗಿದರೂ ಮೇಲೆ ಏಳಲಿಲ್ಲ. ತಕ್ಷಣವೇ ಗ್ರಾಮದ ಜನರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಸ್ವಲ್ಪ ಹೊತ್ತಿಗೆ ಮೊದಲು ಜತೆಗಿದ್ದ ಗೆಳೆಯರು ಕಣ್ಮರೆಯಾಗಿದ್ದನ್ನು ನೋಡಿ ಅಳು ತಡೆಯಲಾಗಲಿಲ್ಲ’ ಎಂದು ದಡದಲ್ಲಿ ಕುಳಿತಿದ್ದ ವಿದ್ಯಾರ್ಥಿ ಜೀವನ್ ಅಳಲು ತೋಡಿಕೊಂಡಿದ್ದಾನೆ.

ಅಂದಹಾಗೆ ‘ದೇವರ ಕಾರ್ಯಕ್ಕೆಂದು ಚನ್ನಗಿರಿ ಸಮೀಪದ ಅಮ್ಮನ ಗುಡ್ಡಕ್ಕೆ ಮನೆಯವರೆಲ್ಲ ಹೋಗಿದ್ದೆವು. ನಾಳೆ ಪರೀಕ್ಷೆ ಇದೆ ಎಂದು ಮಗನನ್ನು ಬಿಟ್ಟು ಹೋಗಿದ್ದೆವು. ಅವನನ್ನೂ ಕರೆದುಕೊಂಡು ಹೋಗಿದ್ದರೆ ಮಗ ಬದುಕಿರುತ್ತಿದ್ದ. ವಯಸ್ಸಿಗೆ ಬಂದ ಮಗನನ್ನು ಮಣ್ಣಿಗೆ ಹೇಗೆ ಇಡಲಿ’ ಎಂದು ನಂದನಹೊಸೂರಿನ ಗೊಲ್ಲರಹಟ್ಟಿಯ ಟಿ. ಗಿರೀಶ್ ಅವರ ತಂದೆ ತಿಮ್ಮೇಶ್ ದುಃಖ ತೋಡಿಕೊಂಡಿದ್ದಾರೆ

ಕಣಿವೆ ಜೋಗಿಹಳ್ಳಿಯ ಟಿ.ಎಸ್. ಮನೋಜ್‌ನ ತಂದೆ-ತಾಯಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ‘ಮಗ ಚೆನ್ನಾಗಿ ಓದಿ ನಮಗೆ ಆಸರೆಯಾಗುತ್ತಾನೆ’ ಎಂದು ನಂಬಿ ಜೀವನ ನಡೆಸುತ್ತಿದ್ದರು. ಮಗನ ಆಸೆಗಳಿಗೆ ತಣ್ಣೀರು ಎರಚುತ್ತಿರಲಿಲ್ಲ. ಪ್ರೀತಿಯ ಮಗನಾಗಿದ್ದ ಮನೋಜ್ ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದರು. ಆದರೆ ವಿಧಿಯ ಆಟಕ್ಕೆ ಹೆತ್ತವರು ಕನಸು ಕಮರಿ ಹೋಗಿದೆ. ಮಗನನ್ನು ಕಳೆದುಕೊಂಡು ಹೆತ್ತವರ ರೋದನ ಹೃದಯ ಕಲಕುವಂತಿತ್ತು.

ಹೊರಕೆರೆ ದೇವರಪುರದ ಎಂ.ಸಂಜಯ್ ತಂದೆ ಟೇಲರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ. 9ನೇ ತರಗತಿಯವರೆಗೆ ಬೆಂಗಳೂರಿನಲ್ಲಿ ಓದಿದ್ದ ಸಂಜಯ್ ಮೂರು ವರ್ಷಗಳ ಹಿಂದೆ ಸ್ವಂತ ಗ್ರಾಮದ ಕಾಲೇಜಿಗೆ ಸೇರಿದ್ದ. ಕಾಲೇಜಿನಲ್ಲಿ ಗೆಳೆಯರೊಂದಿಗೆ ಖುಷಿಯಾಗಿರುತ್ತಿದ್ದ ಸಂಜಯ್ ಇನ್ನು ನೆನಪು ಮಾತ್ರ.

 

ಇದನ್ನೂ ಓದಿ: Amrutha Iyengar: ತಾನು ವರಿಸುವ ಹುಡುಗ ಹೀಗಿರಬೇಕೆಂದ ನಟಿ ಅಮೃತ ಅಯ್ಯಂಗಾರ್, ಹಾಗಿದ್ರೆ ‘ಡಾಲಿ’ ಕಥೆ ಏನು?

Leave A Reply

Your email address will not be published.