Crime News : ನನಗೆ ಕರೆ ಮಾಡಬೇಡ, ತನ್ನೊಂದಿಗೆ ಮಾತನಾಡಬೇಡ ಎಂದ ಮಹಿಳೆಯನ್ನು ಕೊಲೆಗೈದ ಕ್ಯಾಬ್ ಚಾಲಕ

Bangalore Crime News : ಬೆಂಗಳೂರು: ತನ್ನೊಂದಿಗೆ ಮಾತನಾಡಬೇಡ ಎಂದ ಪರಿಚಯಸ್ಥ ಮಹಿಳೆಯನ್ನು ಕ್ಯಾಬ್ ಚಾಲಕನೋರ್ವ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ(Bangalore Crime News) ನಡೆದಿದೆ.

ಇಂದಿರಾ ನಗರ ನಿವಾಸಿ ದೀಪಾ (48) ಕೊಲೆಯಾದವರು. ಹುಣಸಮಾರನಹಳ್ಳಿ ನಿವಾಸಿ ಭೀಮರಾವ್‌ (23) ಕೊಲೆ ಮಾಡಿದಾತ. ಬಾಗಲೂರು ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ,ಆರೋಪಿಯನ್ನು ಬಂಧಿಸಲಾಗಿದೆ.

ಹುಣಸಮಾರನಹಳ್ಳಿ ನಿವಾಸಿ ಭೀಮರಾವ್‌ ,ಇಂದಿರಾ ನಗರ ನಿವಾಸಿ ದೀಪಾ (48) ಎಂಬಾಕೆಯನ್ನು ಕಬ್ಬಿಣ ರಾಡ್‌ನಿಂದ ಹೊಡೆದು ಕೊಲೆಗೈದು,ಬಾಗಲೂರು ಠಾಣೆ ವ್ಯಾಪ್ತಿಯ ಸಾತನೂರು ಹೊಸಹಳ್ಳಿ ಗ್ರಾಮದ ಬಳಿ ಮೃತದೇಹ ಎಸೆದು ಪರಾರಿಯಾಗಿದ್ದ.

ತಮಿಳುನಾಡು ಮೂಲದ ಪ್ರಸ್ತುತ ಇಂದಿರಾನಗರದ ನಿವಾಸಿ ದೀಪಾ ಅವಿವಾಹಿತರಾಗಿದ್ದು, ತಂದೆ-ತಾಯಿ ಇಲ್ಲ.

ಇಂದಿರಾನಗರದ ಅಪಾರ್ಟ್‌ಮೆಂಟ್‌ ವೊಂದರಲ್ಲಿ ಒಬ್ಬರೇ ವಾಸವಾಗಿದ್ದ ದೀಪಾ, ಕಂಪೆನಿಯೊಂದರಲ್ಲಿ ಅಕೌಂಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು.

ಆರೋಪಿ ಭೀಮರಾವ್‌ ಕಲಬುರಗಿ ಮೂಲದವನಾಗಿದ್ದು, ಹುಣಸಮಾರನಹಳ್ಳಿಯಲ್ಲಿರುವ ಸೋದರ ಸಂಬಂಧಿಯ ಮನೆಯಲ್ಲಿ ವಾಸವಾಗಿದ್ದ.

ದೀಪಾ ಅವರು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲೇ ಭೀಮರಾವ್ ಕ್ಯಾಬ್‌ ಚಾಲಕನಾಗಿದ್ದ.ಈತನ ಕ್ಯಾಬ್‌ನಲ್ಲೇ ದೀಪಾ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಹೀಗಾಗಿ ಇಬ್ಬರು ಆತ್ಮೀಯತೆ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಆಗಾಗ್ಗೆ ಹೊರಗಡೆ ಹೋಗುತ್ತಿದ್ದರು. ಈ ಮಧ್ಯೆ ಇಬ್ಬರ ನಡುವೆ ಸಣ್ಣ-ಪುಟ್ಟ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು ಎಂದು ಹೇಳಲಾಗಿದೆ.

ಅಪಾರ್ಟ್‌ಮೆಂಟ್‌ನಲ್ಲಿದ್ದ ದೀಪಾಳನ್ನು ತನ್ನ ಕ್ಯಾಬ್‌ನಲ್ಲಿ ಕರೆದೊಯ್ದ ಆರೋಪಿ ಮಾರ್ಗ ಮಧ್ಯೆದಲ್ಲೇ ಆಕೆ ಜತೆ ಜಗಳ ತೆಗೆದಿದ್ದಾನೆ. ಅದರಿಂದ ಆಕ್ರೋಶಗೊಂಡ ಆರೋಪಿ ಹಲಸೂರು ಠಾಣೆ ವ್ಯಾಪ್ತಿಯ ಕೇಂಬ್ರಿಡ್ಜ್ ರಸ್ತೆಯಲ್ಲಿ ನಿಲ್ಲಿಸಿದ್ದಾನೆ.

ಕ್ಯಾಬ್‌ನಿಂದ ಇಳಿದ ದೀಪಾ, “ನನಗೆ ಮತ್ತೊಮ್ಮೆ ಕರೆ, ಸಂದೇಶ ಕಳುಹಿಸಬೇಡ. ತನ್ನೊಂದಿಗೆ ಮಾತನಾಡಬೇಡ. ನಿನ್ನ ನಂಬರ್‌ ಬ್ಲಾಕ್‌ ಲಿಸ್ಟ್‌ಗೆ ಹಾಕುತ್ತೇನೆ’ ಎಂದಿದ್ದಾರೆ. ಅದಕ್ಕೆ ಕೋಪಗೊಂಡ ಆರೋಪಿ, ಕ್ಯಾಬ್‌ನಲ್ಲಿದ್ದ ಜಾಕ್‌ರಾಡ್‌ನಿಂದ ಮುಖಕ್ಕೆ ಹೊಡೆದಿದ್ದಾನೆ. ಆಗ ಜೋರಾಗಿ ಕೂಗಿಕೊಂಡ ಆಕೆಯನ್ನು ವೇಲ್‌ನಿಂದಲೇ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ. ಆಕೆ ಮೃತಪಟ್ಟಿರುವುದನ್ನು ದೃಢಪಡಿಸಿಕೊಂಡ ಆರೋಪಿ, ಬಾಗಲೂರು ಠಾಣೆ ವ್ಯಾಪ್ತಿಯ ಸಾತನೂರು ಹೊಸಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಶವ ಎಸೆದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೀಪಾಳನ್ನು ಕೊಲೆಗೈದು ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದು, ಮರುದಿನ ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.

ಮತ್ತೊಂದೆಡೆ ವೈದ್ಯರ ವರದಿಯಲ್ಲಿ ಹಲ್ಲೆ ನಡೆಸಿ, ಕುತ್ತಿಗೆ ಬಿಗಿದು ಕೊಲೆಗೈಯಲಾಗಿದೆ ಎಂದು ದೃಢಪಡಿಸಲಾಗಿತ್ತು. ತನಿಖೆ ವೇಳೆ ಇಂದಿರಾನಗರ ಠಾಣೆಯಲ್ಲಿ ದೀಪಾ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆಕೆ ಸಂಬಂಧಿಕರನ್ನು ಕರೆಸಿ ವಿಚಾರಣೆ ನಡೆಸುವಾಗ ಮಾವ ಕೃಷ್ಣಮೂರ್ತಿ ಅವರು ಭೀಮರಾವ್‌ ಬಗ್ಗೆ ಸುಳಿವು ನೀಡಿದ್ದರು. ಈ ಹಿಂದೆ ಒಂದೆರಡು ಸಲ ಭೀಮರಾವ್‌ ಮನೆಗೆ ಬಂದಿದ್ದು, ನಂದಿಬೆಟ್ಟಕ್ಕೆ ಹೋಗೋಣ ಎಂದು ದೀಪಾಳನ್ನು ಕರೆಯುತ್ತಿದ್ದ. ಆಗ “ನಾನೇ ದೀಪಾಗೆ ಬೇಡ. ಭೀಮರಾವ್‌ನ ವರ್ತನೆ ಸರಿಯಿಲ್ಲ’ ಎಂದು ಹೇಳಿದ್ದೆ. ಆತನ ಬಗ್ಗೆ ಅನುಮಾನ ಇರುವುದಾಗಿ ಹೇಳಿದ್ದರು. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

Leave A Reply

Your email address will not be published.