Praveen Nettaru : ಕರಾವಳಿಯನ್ನೇ ಬೆಚ್ಚುಬೀಳಿಸಿದ ನೆಟ್ಟಾರು ಹತ್ಯೆ ಪ್ರಕರಣ ಆರೋಪಿಯನ್ನು ಪತ್ತೆ ಮಾಡಿದ ಕಥೆಯೇ ಇಂಟೆರೆಸ್ಟಿಂಗ್‌ ! ಇಲ್ಲಿದೆ ಕುತೂಹಲಭರಿತ ಮಾಹಿತಿ!!!

Parveen Nettaru Murder Case: ಬಿಜೆಪಿ ಯುವ ಮೋರ್ಚಾ ಮಂಗಳೂರು ಜಿಲ್ಲಾ ಘಟಕದ ಕಾರ್ಯಕಾರಿಣಿ ಸದಸ್ಯ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ ಕರಾವಳಿಯ ಜನತೆಯಲ್ಲಿ ದ್ವೇಷದ ಕಿಡಿ ಹಚ್ಚಲು ಕಾರಣವಾಗಿತ್ತು.ಬಿಜೆಪಿ ಯುವ ಕಾರ್ಯಕರ್ತ (BJP Youth Activist)ಪ್ರವೀಣ್ ನೆಟ್ಟಾರು(Parveen Nettaru) ಕೊಲೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಎಂ.ಎಚ್.ತುಫೈಲ್‌ನನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ನಗರದಲ್ಲಿ ಬಂಧಿಸಿದ್ದು, ಆರೋಪಿಯನ್ನು ಜಾಡು ಪತ್ತೆ ಮಾಡಿ ಬಂಧಿಸಿದ ವೈಖರಿಯೇ ವಿಭಿನ್ನ. ಹಾಗಿದ್ರೆ, ಆರೋಪಿಯನ್ನು ಸೆರೆ ಹಿಡಿಯಲು ಖಾಕಿ ಪಡೆ ಮಾಡಿದ್ದೇನು ಗೊತ್ತಾ? ಇಲ್ಲಿದೆ ಈ ಕುರಿತ ರೋಚಕ ಕಹಾನಿ!!

ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು(BJP Activist Praveen Nettar) ಅವರನ್ನು ಜುಲೈ 26 ರಂದು ಅವರ ಕೋಳಿ ಅಂಗಡಿಗೆ ನುಗ್ಗಿ ಹಂತಕರು ಭೀಕರವಾಗಿ ಕೊಲೆ ಮಾಡಿದ್ದು, ಈ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಕರಾವಳಿ ಭಾಗದಲ್ಲಿ ಜನತೆಯ ನಿದ್ದೆಗೆಡಿಸಿದ್ದು ಮಾತ್ರವಲ್ಲದೆ ತಲ್ಲಣಗೊಳಿಸಿತ್ತು. ಹೀಗಾಗಿ, ಪ್ರವೀಣ್ ಅವರ ಹತ್ಯೆಗೆ ಕಾರಣರಾದ ಆರೋಪಿಗಳ ಜಾಡು ಅರಸುತ್ತಾ ಖಾಕಿ ಪಡೆಗೆ ಅನೇಕ ಮಾಹಿತಿ ಸಿಕ್ಕಿದೆ. ಇದಲ್ಲದೆ, ಎನ್ಐಎ ಅಧಿಕಾರಿಗಳು ಆರೋಪಿ ಪತ್ತೆಗೆ 5 ಲಕ್ಷ ಹಣ ಬಹುಮಾನ ಘೋಷಣೆ ಮಾಡಿದ್ದರು. ಸದ್ಯ, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ (Parveen Nettaru Murder Case)ಪ್ರಕರಣದ ಪ್ರಮುಖ ಆರೋಪಿ ಕಡೆಗೂ ಎನ್ಐಎ (NIA)ಬಲೆಯಲ್ಲಿ ಸಿಲುಕಿದ್ದಾನೆ.

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ (Praveen Nettaru) ರಾಷ್ಟ್ರೀಯ ತನಿಖಾ ದಳದ (National Investigation Agency) ಅಧಿಕಾರಿಗಳು ಚಾರ್ಜ್​ಶೀಟ್ (Charge sheet)​ ಸಲ್ಲಿಕೆ ಮಾಡಿದ್ದು, ಎನ್​ಐಎ ತಂಡ ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಸುದೀರ್ಘವಾದ 1500 ಪುಟಗಳ ಚಾರ್ಜ್​ಶೀಟ್​ ನೀಡಿದೆ. 240 ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡಂತೆ ಒಟ್ಟು 20 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ. ಇನ್ನು ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಈವರೆಗೆ 14 ಆರೋಪಿಗಳನ್ನು ಬಂಧಿಸಿಲಾಗಿದ್ದು, 6 ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.

ನಿಷೇಧಿತ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆ ಸದಸ್ಯರಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೊಡಾಜೆ ಮಹಮ್ಮದ್‌ ಶರೀಫ್‌, ನೆಕ್ಕಿಲಾಡಿಯ ಕೆ.ಎ.ಮಸೂದ್‌, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಎಸ್‌.ಮೊಹಮ್ಮದ್‌ ಮುಸ್ತಾಫ ಅಲಿಯಾಸ್‌ ಮುಸ್ತಾಫ ಪೈಚಾರು ತಲೆಮರೆಸಿಕೊಂಡಿದ್ದು, ಇವರ ಪತ್ತೆಗೂ ಕೂಡ ಬಹುಮಾನ ಘೋಷಿಸಲಾಗಿದೆ’ ಎಂದು ತಿಳಿದುಬಂದಿದೆ.

ಆರೋಪಿ ತೌಫೈಲ್ ಮಡಿಕೇರಿ ಮೂಲದವನಾಗಿದ್ದು, ಎಂಟು ತಿಂಗಳಿಂದ ಪೊಲೀಸರಿಗೆ ಹಾಗೂ NIA ತಂಡದ ನಿದ್ದೆಗೆಡಿಸಿದ್ದ. ಎಲ್ಲರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಆರೋಪಿ ಮತ್ತು ಸಂಚುಕೋರನಾಗಿದ್ದ ತೌಫೈಲ್ 2022 ಜುಲೈನಿಂದ ಕಣ್ಮರೆ ಯಾಗಿದ್ದ ಎನ್ನಲಾಗಿದೆ. ಆದರೆ, ಆರೋಪಿ ತೌಫೈಲ್ ಮೇಲೆ ನಿಗಾ ಇಟ್ಟಿದ್ದ ಎನ್ಐಎ ಅಧಿಕಾರಿಗಳಿಗೆ ಆರೋಪಿ ಬೆಂಗಳೂರಿಗೆ ಆಗಮಿಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಹೀಗಾಗಿ, ಮಾರ್ಚ್ 4ರಂದು ರಾತ್ರಿ ಸುಮಾರು 9.30ಕ್ಕೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿಯಲ್ಲಿ (Dasarahalli) ತೌಫಿಲ್ ನನ್ನು ಬಂಧಿಸುವಲ್ಲಿ NIA ತಂಡ ಯಶಸ್ವಿಯಾಗಿದೆ. ಬಂಧಿತ ತೌಫೈಲ್ ಮೂರ್ನಾಲ್ಕು ತಿಂಗಳಿಂದ ಅಲ್ಲಿಯೇ ವಾಸವಾಗಿದ್ದ, ಅಷ್ಟೆ ಅಲ್ಲದೇ ಯಾರೊಂದಿಗೂ ಕೂಡ ಹೆಚ್ಚಿನ ಸಂಪರ್ಕ ಹೊಂದಿರಲಿಲ್ಲ.

ನಂಜುಂಡಪ್ಪ ಎಂಬುವರಿಗೆ ಸೇರಿದ್ದ ಮೂರಂತಸ್ತಿನ ಕಟ್ಟಡದಲ್ಲಿ ಮೊದಲನೇ ಮಹಡಿಯಲ್ಲಿ ವ್ಯಕ್ತಿಯೊಬ್ಬನಿಗೆ ಬಾಡಿಗೆ ನೀಡಲಾಗಿದ್ದು, ಈ ಬಾಡಿಗೆ ಮನೆಯಲ್ಲಿ ಆರೋಪಿ ತೌಫೈಲ್ ವಾಸವಾಗಿದ್ದ ಎನ್ನಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ನಿನ್ನೆ ರಾತ್ರಿ 9.30 ರ ಸಮಯದಲ್ಲಿ ಭುವನೇಶ್ವರಿನಗರದ, ಮಾರುತಿ ಲೇಔಟ್ ನ ಮನೆ ಮೇಲೆ ಪ್ಲಂಬರ್, ಆಟೋ ಚಾಲಕರ ವರಸೆಯಲ್ಲಿ ಎನ್ಐಎ ಅಧಿಕಾರಿಗಳು ತೌಫೈಲ್ ಮನೆಗೆ ದೌಡಾಯಿಸಿದ್ದು, ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಮೊದಲು ಫ್ಲಂಬರ್ ಎನ್ನುವ ಸೋಗಿನಲ್ಲಿ ಕೈಯಲ್ಲಿ ರಿಂಚ್ ಹಿಡಿದು ಮನೆಯೊಳಗೆ ಇಬ್ಬರು ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಸಂದರ್ಭ ತೌಫಿಲ್ ಮನೆಯಲ್ಲಿ ಮಟನ್ ಕಟ್ ಮಾಡುತ್ತಿದ್ದ. ಅಧಿಕಾರಿಗಳನ್ನು ಕಂಡದ್ದೇ ತಡ ಅಲ್ಲಿಂದ ಪರಾರಿಯಾಗುವ ಪ್ರಯತ್ನ ನಡೆಸಿದ್ದು ಮಾತ್ರವಲ್ಲದೆ, ತೌಫಿಲ್ ಅಧಿಕಾರಿಗಳ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದಾನೆ. ಕೂಡಲೇ 10 ರಿಂದ 12 ಜನರನ್ನು ಒಳಗೊಂಡ ಎನ್ಐಎ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದ NIA ಅಧಿಕಾರಿಗಳು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ (Parveen Nettaru Murder Case)ಕುರಿತಂತೆ ತನಿಖೆ ನಡೆಸಲಿದ್ದು, ತನಿಖೆಯ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ.

Leave A Reply

Your email address will not be published.