Jharkhand: 12 ದಿನಗಳಲ್ಲಿ 16 ಜನರನ್ನು ಕೊಂದ ಗಜರಾಜ: ಮನೆಯಿಂದ ಹೊರಬರಲು ಹೆದರುತ್ತಿರುವ ಜನ: ಈ ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ!

Jharkhand: ರಾಜ್ಯದಲ್ಲಿ ಕಾಡು ಪ್ರಾಣಿಗಳ ಹಾವಳಿ ಎಲ್ಲೆಂದರಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲೂ ಈ ಕಾಡಾನೆಯ ಕಾಟವನ್ನಂತೂ ಹೇಳತೀರದು. ಇನ್ನು ಈ ಮದಗಜಗಳ ಕಾಟ ಉತ್ತರ ಭಾರತದ ಜಾರ್ಖಾಂಡ್ ತೀವ್ರ ಆತಂಕ ಸೃಷ್ಟಿಸಿದೆ. ಇಟ್ಕಿ ಬ್ಲಾಕ್ ಪ್ರದೇಶದಲ್ಲಿ ಕಳೆದ 12 ದಿನಗಳಲ್ಲಿ ಆನೆಯೊಂದು 16 ಜನರನ್ನು ಕೊಂದು ಸ್ಥಳೀಯ ನಿವಾಸಿಗಳು ಭಯಭೀತರಾಗುವಂತೆ ಮಾಡಿದೆ.

ಹೌದು, ಜಾರ್ಖಾಂಡಿನ(Jharkhand) ಹಜಾರಿಬಾಗ್, ರಾಮಗಢ, ಚತಾರಾ, ಲೋಹದರ್ಗಾ ಹಾಗೂ ರಾಂಚಿ ಜಿಲ್ಲೆಗಳು ಆನೆ ಭಯದಿಂದ ತತ್ತರಿಸಿವೆ. ಯಾವಾಗ, ಯಾವ ಸಮಯದಲ್ಲಿ ದಾಳಿ ಮಾಡುತ್ತದೆಯೋ ಎಂದು ಸ್ಥಳೀಯ ಜನರು ಜೀವ ಭಯದಲ್ಲಿದ್ದಾರೆ. ಬೆಳಿಗ್ಗೆ, ಸಂಜೆ ಜನರು ಮನೆಯಲ್ಲಿರುವಂತೆಯೇ ಅಧಿಕಾರಿಗಳು ಸೂಚಿಸಿದ್ದಾರೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ಜಿಲ್ಲಾಡಳಿತ 144ನೇ ಸೆಕ್ಷನ್ ಜಾರಿಗೊಳಿಸಿದೆ. ಗ್ರಾಮಸ್ಥರು ಆನೆಯ ಬಳಿ ಜಮಾಯಿಸುತ್ತಿದ್ದು, ಇದರಿಂದ ಆನೆ ಹೆದರಿ ದಾಳಿ ನಡೆಸುತ್ತದೆ. ಹೀಗಾಗಿ ಆನೆ ಕಂಡುಬಂದಲ್ಲಿ ಅದರ ಹತ್ತಿರ ಹೋಗದಂತೆ ಸೂಚನೆ ನೀಡಲಾಗಿದೆ ಎಂದು ರಾಂಚಿ ವಲಯ ಅರಣ್ಯಾಧಿಕಾರಿ ಶ್ರೀಕಾಂತ್ ವರ್ವ ತಿಳಿಸಿದ್ದಾರೆ.

ಈಗಾಗಲೇ ಆನೆ ದಾಳಿಗೆ 12 ದಿನಗಳಲ್ಲಿ 16 ಜನ ಪ್ರಾಣ ಕಳೆದುಕೊಂಡಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ಪರಿಹಾರವನ್ನು ಕೊಡಲಾಗುವುದು. ಅಲ್ಲದೆ ಆನೆಯನ್ನು ಕಾಡಿಗೆ ಸ್ಥಳಾಂತರಿಸಲು ಪಶ್ಚಿಮ ಬಂಗಾಳದ ತಜ್ಞರ ತಂಡವು ತುಂಬಾನೇ ಸಹಕಾರ ನೀಡುತ್ತಿದೆ ಎಂದು ಜಾರ್ಖಾಂಡ್ ಪ್ರಧಾನ ಮುಖ್ಯ ಅಣ್ಯಾಧಿಕಾರಿ ಶಶಿಕಮಾರ್ ಸಾಮಂತಾ ತಿಳಿಸಿದ್ದಾರೆ.

‘ಲೋಹರ್ದಗಾ ಜಿಲ್ಲೆಯಲ್ಲಿ ಸೋಮವಾರ ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಮತ್ತು ಭಾನುವಾರ ಒಬ್ಬರನ್ನು ಈ ಆನೆ ತುಳಿದು ಕೊಂದಿತ್ತು. ಸೋಮವಾರ ರಾತ್ರಿ ಇಟ್ಕಿ ಬ್ಲಾಕ್ ಪ್ರವೇಶಿಸಿ ಮಂಗಳವಾರ ಬೆಳಗ್ಗೆ ಇಬ್ಬರು ಮಹಿಳೆಯರು ಸೇರಿ ನಾಲ್ಕು ಜನರನ್ನು ಆನೆ ಕೊಂದಿದೆ ಎಂದು ವರ್ವ ಹೇಳಿದ್ದಾರೆ. ಈ ಆನೆಯ ಯಾಕೆ ಹೀಗೆ ಕ್ರೂರವಾಗಿ ವರ್ತಿಸಲು ಕಾರಣವೆಂದರೆ ಅದು ತನ್ನ ಹಿಂಡಿನಿಂದ ಬೇರ್ಪಟ್ಟ ಮತ್ತು ಕಿರಿಕಿರಿಗೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವ ಒಂಟಿ ಆನೆಯಾಗಿದೆ. ಒಂಟಿ ಆನೆಗಳಿಂದ ದೂರವಿರಬೇಕು ಮತ್ತು ಅದು ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸುತ್ತಿದ್ದರೆ ಅದರ ಕಡೆಗೆ ಹೋಗದಿರಲು ಪ್ರಯತ್ನಿಸಬೇಕು. ಅದರ ಮೇಲೆ ನಿಯಂತ್ರಣ ಸಾಧಿಸಲು ಅಗತ್ಯವಿದ್ದರೆ ಇತರ ರಾಜ್ಯಗಳ ಸಹಾಯವನ್ನೂ ತೆಗೆದುಕೊಳ್ಳಲಾಗುವುದು ಎಂದು ಪಿಸಿಸಿಎಫ್ (ವನ್ಯಜೀವಿ) ಶಾಸ್ಕಿಯರ್ ಸಮಂತಾ ಹೇಳಿದರು.

Leave A Reply

Your email address will not be published.