ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಕುರ್ಚಿಗೆ 10 ಮಂದಿ ಅಭ್ಯರ್ಥಿಗಳು, ಅದ್ರಲ್ಲಿ ನಾನೂ ಒಬ್ಬ ಎಂದ ಜಿ. ಪರಮೇಶ್ವರ್ !

ಕಾಂಗ್ರೆಸ್ (Congress) ನಲ್ಲಿ ಒಟ್ಟು 10 ಜನ ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದಾರಂತೆ. ಅದರಲ್ಲಿ ನಾನೂ ಒಬ್ಬ ಎಂದು ಹೇಳುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ (G. Parameshwar) ಅವರು ಮತ್ತೊಮ್ಮೆ ಸಿಎಂ ಆಗುವ ಹಳೆಯ ಕನಸನ್ನು ರಿನೋವೇಟ್ ಮಾಡಿ ಬಿಚ್ಚಿಟ್ಟಿದ್ದಾರೆ. ಯಾರಿರಬಹುದು ಆ ಹತ್ತು ಜನ ಗೊತ್ತೇ?

ಸಿದ್ದರಾಮಯ್ಯ ಎಲ್ಲದರಿಂದ ಕ್ಯೂನಲ್ಲಿ ಮೊದಲಿಗೆ ಇದ್ದಾರೆ. ನಂತರ, ಸಿದ್ದು ಹಿಂದೆ ಡಿಕೆಶಿ ನಿಂತಿದ್ದಾರೆ, ಅದರ ಹಿಂದೆ ನಿಲ್ಲಲು ನುಗ್ಗಾಟ ಸಾಗಿದೆ. ಪರಮೇಶ್ವರ್, ರಮೇಶ್ ಕುಮಾರ್, ಖರ್ಗೆ, ಶಾಮನೂರ್ – ಹೀಗೆ ಹಲವು ಹೆಸರುಗಳು ಅಡ್ಡ ಬರುತ್ತವೆ. ಉಳಿದವರು ಅದೃಶ್ಯರಾಗಿದ್ದುಕೊಂಡೇ ಕುರ್ಚಿಯ ಮೇಲೆ ಟವಲ್ಲು ಬೀಸಲು ತುದಿಗಾಲಲ್ಲಿ ನಿಂತಿದ್ದಾರೆ.

ಇಂದು ತುಮಕೂರು (Tumakuru) ಜಿಲ್ಲೆಯ ಮಧುಗಿರಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ನಮ್ಮಲ್ಲಿ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಮಾಡಲು ಬರುವುದಿಲ್ಲ. ದಲಿತ ಮುಖ್ಯಮಂತ್ರಿ ಎನ್ನುವ ಪ್ರಶ್ನೆ ನಮ್ಮಲ್ಲಿ ಬರುವುದಿಲ್ಲ. ಆಯಾ ಸಂದರ್ಭದಲ್ಲಿ ಯಾರು ಸಮರ್ಥರಿದ್ದಾರೆ ಅಂತಹವರನ್ನು ನಮ್ಮಲ್ಲಿ ಮುಖ್ಯಮಂತ್ರಿ ಮಾಡುತ್ತಾರೆ. ಆಕಸ್ಮಿಕವಾಗಿ ಆ ಸಂದರ್ಭದಲ್ಲಿ ಬೇರೆ ಜಾತಿಯವರು ಆದರೆ ಆಗ ಯಾರೂ ಏನು ಮಾಡಲೂ ಆಗುವುದಿಲ್ಲ ಎಂದು ಹೇಳಿದ್ದಾರೆ. .

ನಿಮಗೆ ಸಿಎಂ (Chief Minister) ಆಗುವ ಆಸೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜಕೀಯ ಯಾಕೆ ಮಾಡುತ್ತಿದ್ದೇನೆ ಹೇಳಿ? ಅಧಿಕಾರಕ್ಕೆ ಬರಬೇಕು ಎಂದು ಅಲ್ಲವೇ? ಮುಖ್ಯಮಂತ್ರಿ ಆಗಬೇಕು ಎನ್ನುವುದು ಎಲ್ಲರಿಗೂ ಆಸೆ ಇರುತ್ತದೆ. ನಮ್ಮ ಪಕ್ಷದಲ್ಲಿ ಒಂದು ಹತ್ತು ಜನರಿಗೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಅದರಲ್ಲಿ ನಾನೂ ಒಬ್ಬ ಎಂದು ಹೇಳಿದ್ದಾರೆ.

Leave A Reply

Your email address will not be published.