ಮುರುಘಾ ಶರಣರ ವಿರುದ್ಧ ಸಲ್ಲಿಕೆಯಾಯ್ತು 2ನೇ ಪೋಕ್ಸೋ ಪ್ರಕರಣದ ದೋಷಾರೋಪ ಪಟ್ಟಿ| ಕಿರುಕುಳಕ್ಕೊಳಗಾದ ಮಕ್ಕಳು ಹೇಳಿದ್ದೇನು ಗೊತ್ತಾ?

ಮುರುಘಾ ಶ್ರೀಗಳ ವಿರುದ್ಧ ದಾಖಲಾಗಿದ್ದ 2ನೇ ಪ್ರಕರಣದ ತನಿಖೆ ನಡೆಸಿರುವ ಚಿತ್ರದುರ್ಗ ಪೊಲೀಸರು ಇಲ್ಲಿನ 2ನೇ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯಕ್ಕೆ 761 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇಬ್ಬರು ಮಕ್ಕಳು ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಹೇಳಿಕೆ ನೀಡಿರುವುದು ದೋಷಾರೋಪಣ ಪಟ್ಟಿಯಲ್ಲಿ ದಾಖಲಾಗಿದೆ. ಈ ವೇಳೆ ಸ್ವಾಮಿಜಿ ಚಾಕೋಲೇಟ್ ಆಮೀಷವೊಡ್ಡಿ ತಮ್ಮ ಮೇಲೆ ನಡೆದಿರುವ ದೌರ್ಜನ್ಯದ ಕುರಿತು ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಸದ್ಯ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್ ‘ಎ’ ಮತ್ತು ‘ಬಿ’ ಗಳನ್ನು ಜನವರಿ 10ರಂದೇ ತನಿಖಾಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದೇ ದಿನ ನ್ಯಾಯಾಲಯ ಸ್ವೀಕರಿಸಿದೆ. ಒಟ್ಟು ದೋಷಾರೋಪಣೆ ಪಟ್ಟಿಯಲ್ಲಿ ಪೊಲೀಸರು 73 ಸಾಕ್ಷ್ಯಗಳನ್ನು ಉಲ್ಲೇಖಿಸಿದ್ದು, ಪ್ರಕರಣದ ದೂರಿನಲ್ಲಿ ಪ್ರಸ್ತಾಪಿಸಲಾಗಿದ್ದ ನಾಲ್ವರು ವಿದ್ಯಾರ್ಥಿನಿಯರು ಇಬ್ಬರು ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆದಿಲ್ಲ ಎಂದು ತಿಳಿಸಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ ಇಬ್ಬರು ಮಕ್ಕಳು ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಸ್ವಾಮೀಜಿ ತಮಗೆ ಚಾಕಲೇಟ್ ನೀಡುತ್ತಿದ್ದರು. ಆ ವೇಳೆ ನಿದ್ದೆ ಬಂದಂತೆ ಆಗುತ್ತಿತ್ತು. ಎಚ್ಚರವಾದ ಬಳಿಕ ಕೋಣೆಯಲ್ಲಿ ಯಾರೂ ಇರುತ್ತಿರಲಿಲ್ಲ. ಎನಾಗಿದೆಯೆಂದು ತಿಳಿಯುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

14 ವರ್ಷದ ಸಂತ್ರಸ್ತ ಬಾಲಕಿ ‘ವಾರ್ಡನ್ ರಶ್ಮಿ, ಶರಣರ ಕೊಠಡಿಗೆ ಹೋಗಲು ನಮಗೆ ಟೈಮ್ ಟೇಬಲ್ ನಿಗದಿ ಪಡಿಸಿದ್ದರು. ಶರಣರು, ಲಾಕ್‌ಡೌನ್ ಸಮಯದಲ್ಲಿ ಬೇಜಾರು ಆಗುತ್ತದೆಂದು ಚಿಕ್ಕ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದರು. ರಶ್ಮಿ ಅಕ್ಕನ ಸೂಚನೆಯಂತೆ ಒಂದು ‘ಭಾನುವಾರ ಸಂಜೆ ಐದು ಗಂಟೆಗೆ ಕೆಲ ಮಕ್ಕಳೊಂದಿಗೆ ಸ್ವಾಮಿಜಿಯವರ ಕೊಠಡಿಗೆ ತೆರಳಿದೆವು. ಸ್ವಾಮೀಜಿ, ಚಾಕ್ಲೆಟ್‌ಗಳನ್ನು ಕೊಟ್ಟರು. ತಿಂದ ಮೇಲೆ ನಿದ್ದೆ ಬಂದ ಹಾಗಾಗಿ, ಮಲಗಿದೆವು. ನಂತರ ನಾನು ಎದ್ದು ನೋಡಿದಾಗ ರೂಂನಲ್ಲಿ ಯಾರೂ ಇರಲಿಲ್ಲ. ಏನಾಗಿದೆ ಎಂದು ತಿಳಿಯಲಿಲ್ಲ. ತುಂಬಾ ಸುಸ್ತಾಗಿತ್ತು. ಕಾಲು, ತೊಡೆಯ ಭಾಗ ನೋಯುತ್ತಿತ್ತು’ ಎಂದು ಹೇಳಿಕೆ ನೀಡಿದ್ದಾಳೆ.

‘ಪುನಃ ಭಾನುವಾರ ಹೋದಾಗಲೂ ಸ್ವಾಮೀಜಿ ಚಾಕ್ಲೆಟ್ ನೀಡಿದ್ದರು. ನಿದ್ದೆ ಬಂದ ಅನುಭವ ಆಗಿ, ಅಲ್ಲೇ ಮಲಗಿದ್ದೆವು. ಆಗಲೂ ಸ್ವಾಮೀಜಿ ಏನೋ ಮಾಡಿದ್ದಾರೆ ಅನಿಸಿತು. ನನ್ನ ಖಾಸಗಿ ಅಂಗಗಳನ್ನು ಮುಟ್ಟಿದ್ದಾರೆ ಅನಿಸುತ್ತಿತ್ತು. ಸ್ವಾಮೀಜಿ ರೂಂಗೆ ಹೋಗುವ ಮೊದಲು ಪ್ರತಿ ತಿಂಗಳು ಪಿರಿಯಡ್ಸ್ ಆಗುತ್ತಿತ್ತು. ಸ್ವಾಮೀಜಿ ಬಳಿ ಹೋಗಿ ಬಂದಾಗಿನಿಂದ ಪಿರಿಯಡ್ಸ್ ಆಗಿಲ್ಲ. ಟೈಮ್ ಟೇಬಲ್ ಪ್ರಕಾರ ಹೋಗದಿದ್ದರೆ ರಶ್ಮಿ ಅಕ್ಕ ಹೊಡೆಯುತ್ತಿದ್ದರು’ ಎಂದು ಹೇಳಿಕೆ ದಾಖಲಿಸಿದ್ದಾರೆ. ಹನ್ನೆರಡು ವರ್ಷದ ಸಂತ್ರಸ್ತ ಬಾಲಕಿ ತನ್ನ ಹೇಳಿಕೆಯಲ್ಲಿ ‘ರಶ್ಮಿ ಅಕ್ಕ ಸಂಜೆ 6 ಗಂಟೆಗೆ ಸುಮಾರಿಗೆ ಸ್ವಾಮಿಜಿ ಕೊಠಡಿಗೆ ಇತರ ಮಕ್ಕಳೊಂದಿಗೆ ಕಳುಹಿಸಿದರು. ಎಲ್ಲರೂ ರೂಮಿನಲ್ಲಿ ಕುಳಿತುಕೊಂಡೆವು. ಟಿವಿಯಲ್ಲಿ ದೃಷ್ಟಿ ‘ಧಾರಾವಾಹಿ ಬರುತ್ತಿತ್ತು. ಸ್ವಾಮೀಜಿ ರೂಮಿಗೆ ಬಂದು ನನ್ನ ಮೇಲೆ ರೇಪ್ ಮಾಡಿದರು. ಇದಾದ ಒಂದು ದಿನದ ನಂತರ ಅಮ್ಮನಿಗೆ ಸ್ವಾಮೀಜಿ ಹೀಗೆ ಮಾಡಿದರು, ಆದರೆ ಅಮ್ಮ ಏನನ್ನೂ ಹೇಳಲಿಲ್ಲ ಎಂದು ಹೇಳಿದ್ದಾಳೆ.

ಇನ್ನು ಸಂತ್ರಸ್ತ ಮಕ್ಕಳ ವೈದ್ಯಕೀಯ ತಪಾಸಣೆ ಕುರಿತು ಡಾ.ರೂಪಶ್ರೀ, ಡಾ.ಉಮಾಶ್ರೀ ವರದಿ ನೀಡಿದ್ದು , ಈ ವೇಳೆ ‘ಬಲವಂತದ ಲೈಂಗಿಕ ಕ್ರಿಯೆ ನಡೆದಿರುವುದಕ್ಕೆ ಸಾಕ್ಷಿಗಳು ಸಿಕ್ಕಿಲ್ಲ. ಹಾಗೆಂದು, ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ತಳ್ಳಿ ಹಾಕಲಾಗದು’ ಎಂದು ತಿಳಿಸಿದ್ದಾರೆ. ಜ.13ರಂದು ಮುರುಘಾ ಸ್ವಾಮಿಗಳ ವಿರುದ್ದ ಎರಡನೇ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಜತೆಗೆ ಹಾಸ್ಟೆಲ್ ವಾರ್ಡನ್, ಮಠದ ಉತ್ತರಾಕಾರಿ ಬಾಲಕ, ಮಾಜಿ ವ್ಯವಸ್ಥಾಪಕ ಪರಮಶಿವಯ್ಯ, ವಕೀಲ ಗಂಗಾಧರ, ಶರಣರ ಸಹಾಯಕ ಮಹಾಲಿಂಗ, ಬಾಣಸಿಗ ಕರಿಬಸಪ್ಪ ವಿರುದ್ಧ ದೂರು ದಾಖಲಾಗಿತ್ತು. ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಶಿವಮೂರ್ತಿ ಶರಣರು ಹಾಗೂ ಹಾಸ್ಟೆಲ್ ವಾರ್ಡನ್ ಹೊರತುಪಡಿಸಿ ಉಳಿದವರ ದೋಷಾರೋಪ ಸಾಬೀತು ಪಡಿಸುವ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದಾರೆ.

Leave A Reply

Your email address will not be published.