ಫೆ.18 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 18ರಂದು ನಡೆಯುವ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಮಹಾರುದ್ರಯಾಗ, ಏಕ ಬಿಲ್ವಂ ಶಿವಾರ್ಪಣಂ ಸೇವೆ, ಶಿವಾರ್ಪಣಂ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ದೇವರ ಬಲಿ ಉತ್ಸವದ ಬಳಿಕ ಅಷ್ಟಾವಧಾನ ಸೇವೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.

ದೇವಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾಶಿವರಾತ್ರಿ ಉತ್ಸವಕ್ಕೆ ವಿಶೇಷವಾಗಿ ಬೆಳಿಗ್ಗೆ ವೇದ ಸಂವರ್ಧನಾ ಪ್ರತಿಷ್ಠಾನದಿಂದ ಮಹಾರುದ್ರಯಾಗ ನಡೆಯಲಿದೆ. ಸುಮಾರು 121 ಮಂದಿ ರುದ್ರಪಠಣ ಮಾಡಲಿದ್ದಾರೆ. ಇದೇ ಸಂದರ್ಭ ಶತರುದ್ರಾಭಿಷೇಕ ಮತ್ತು ಏಕ ಬಿಲ್ವಂ ಶಿವಾರ್ಪಣಂ ಸೇವೆ ನಡೆಯಲಿದ್ದು, ಭಕ್ತರಿಗೆ ಬಿಲ್ವಾರ್ಚಣೆ ಮಾಡಲು ಅವಕಾಶವಿದೆ ಎಂದರು.

ಧ್ಯಾನಮೂರ್ತಿ ಶಿವನ ಮಂಭಾಗದಲ್ಲಿ ಮುಂಜಾನೆ ಗಂಟೆ 6.45ರಿಂದ ಮರುದಿನ ಸೂರ್ಯೋದಯದವರೆಗೆ ಭಜನೆ, ಕುಣಿತ ಭಜನೆ ನಡೆಯಲಿದೆ. ಪೂರ್ವಾಹ್ನ ಗಂಟೆ 9 ರಿಂದ ದೇವಾಲಯದ ಪಂಚಾಕ್ಷರಿ ಮಂಟಪದಲ್ಲಿ ಶಿವನ ಛದ್ಮವೇಷ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 2 ರಿಂದ ಪಂಚಾಕ್ಷರಿ ಮಂಟಪದಲ್ಲಿ ಪುತ್ತೂರಿನ ವಿವಿಧ ಸಂಗೀತ ಕಲಾ ಶಾಲೆಗಳ ಗುರುಗಳ ನೇತೃತ್ವದಲ್ಲಿ ಸಂಗೀತೋತ್ಸವ, ಸಂಜೆ ಗಂಟೆ 5ರಿಂದ ವಿವಿಧ ನೃತ್ಯ ಕಲಾಶಾಲೆಗಳ ಗುರುಗಳ ನೇತೃತ್ವದಲ್ಲಿ ನೃತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಲಿದೆ. ಕಂಡನಾಯಕ ಕಟ್ಟೆಯಲ್ಲಿ ಪೂಜೆಯ ಬಳಿಕ ಪಲ್ಲಕಿ ಉತ್ಸವ ನಡೆದ ಬಳಿಕ ಅಷ್ಟಾವಧನ ಸೇವೆ ನಡೆಯಲಿದೆ. ಬಳಿಕ ಬಂಡಿ ಉತ್ಸವ, ತೆಪ್ಪೋತ್ಸವ ನಡೆಯಲಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸದಸ್ಯ ಬಿ ಐತ್ತಪ್ಪ ನಾಯ್ಕ ಉಪಸ್ಥಿತರಿದ್ದರು.

Leave A Reply

Your email address will not be published.