ದಕ್ಷಿಣ ಕನ್ನಡದಲ್ಲಿ 17 ಎಸ್.ಡಿ.ಪಿ.ಐ ಕಚೇರಿಗೆ ಜಿಲ್ಲಾಡಳಿತದಿಂದ ಬೀಗ | ಹೈಕೋರ್ಟ್‌ನ ಮೊರೆ ಹೋದ ಎಸ್.ಡಿ.ಪಿ.ಐ

Share the Article

ಬೆಂಗಳೂರು : ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಬೇಕಿದ್ದು, ಕಚೇರಿಗಳ ಮೇಲೆ ದಾಳಿ ನಡೆಸಿ ಹಾಕಲಾಗಿರುವ ಬೀಗ ಮುದ್ರೆ ತೆರವುಗೊಳಿಸಲು ಆದೇಶ ನೀಡಬೇಕೆಂದು ಕೋರಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹೈಕೋರ್ಟ್‌ ಮೊರೆ ಹೋಗಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತವು ಎಸ್‌ಡಿಪಿಐಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿ 17 ಕಚೇರಿಗಳಿಗೆ ಬೀಗ ಹಾಕಿದೆ.

ಇದನ್ನು ತೆರವುಗೊಳಿಸಲು ನಿರ್ದೇಶನ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಹೈಕೋರ್ಟ್ ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಅರ್ಜಿಯ ವಿಚಾರಣೆ ನಡೆಸಿ ಎಸ್‌ಡಿಪಿಐ ಕಚೇರಿಗಳ ಮೇಲೆ ನಡೆಸಲಾದ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನದ ದಾಖಲೆಗಳನ್ನು ಹೈಕೋರ್ಟ್‌ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಎಸ್‌ಡಿಪಿಐ ಪರವಾಗಿ ವಾದ ಮಂಡಿಸಿದ ವಕೀಲರು, ದಕ್ಷಿಣ ಕನ್ನಡದ ಜಿಲ್ಲಾ ಆಡಳಿತವು ಎಸ್ಟಿಪಿಐಗೆ ಸೇರಿದ ಕಚೇರಿಗಳಿಗೆ ಅನಗತ್ಯವಾಗಿ ಬೀಗ ಹಾಕಿದೆ.

ಕಚೇರಿಗಳನ್ನು ಬಂದ್ ಮಾಡಿದ್ದರಿಂದ ಯಾವುದೇ ರಾಜಕೀಯ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. ಕಚೇರಿಯ ಬಾಗಿಲುಗಳನ್ನು ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದರು.

Leave A Reply