ತಂಗಿಗೆ ಮೆಸೇಜ್‌ ಮಾಡಿದ್ದಕ್ಕೆ ಅಣ್ಣ ಮಾಡಿದ ಈ ದುಷ್ಕೃತ್ಯ !

ದಿನನಿತ್ಯ ಒಂದಲ್ಲ ಒಂದು ಕೊಲೆ, ಅತ್ಯಾಚಾರದ ಪ್ರಕರಣಗಳು ಕೇಳಿ ಬರುತ್ತಲೇ ಇವೆ. ಕ್ಷುಲ್ಲಕ ಕಾರಣಕ್ಕೆ ಸ್ವಂತ ಸಹೋದರ, ಗೆಳೆಯರನ್ನೇ ಕೊಂದಿರುವ ಹಲವು ಪ್ರಕರಣಗಳಿವೆ. ಇವಾಗಂತೂ ಸೋಷಿಯಲ್ ಮೀಡಿಯಾ ಚಮತ್ಕಾರ, ಅದರಿಂದ ಎಷ್ಟು ಒಳಿತಿದೆಯೋ ಅಷ್ಟೇ ಕೆಡುಕು ಕೂಡ ಆಗುತ್ತದೆ. ಇದೀಗ ನಡೆದಿರುವ ಘಟನೆಯಲ್ಲಿ ತಂಗಿಗೆ ಮೆಸೇಜ್‌ ಮಾಡಿದ ಎಂಬ ಒಂದೇ ಕಾರಣಕ್ಕೆ ಆಕೆಯ ಅಣ್ಣ ಎಂತಹ ದುಷ್ಕೃತ್ಯ ಮಾಡಿದ್ದಾನೆ ಗೊತ್ತಾ ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನಂಪ್ರತಿ ಏನಾದರೂ ಒಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಆಶ್ಚರ್ಯಕರ ಘಟನೆಯೊಂದು ನಡೆದಿದ್ದು, ತನ್ನ ತಂಗಿಗೆ ಯಾರೋ ಒಬ್ಬ ಯುವಕ ಮೆಸೇಜ್ ಮಾಡುತ್ತಿದ್ದಾನೆ ಎಂದು ತಿಳಿದು ಯುವತಿಯ ಸಹೋದರ, ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಿದ್ಧಾರ್ಥ್ ಎಂಬ ಯುವಕ ಕೀರ್ತಿ ಎಂಬ ಯುವತಿಯ ಜೊತೆ ಕಳೆದ ಒಂದು ವರ್ಷದಿಂದ ಇನ್ಸ್ಟಾಗ್ರಾಮ್​ನಲ್ಲಿ ಚಾಟ್ ಮಾಡುತ್ತಿದ್ದ. ಇಬ್ಬರೂ ಸ್ನೇಹಿತರಾಗಿದ್ದರು. ಈ ವಿಚಾರ ತಿಳಿದ ಕೀರ್ತಿಯ ಅಣ್ಣ ಚೇತನ್, ಸಿದ್ಧಾರ್ಥ್​ಗೆ ಕರೆ ಮಾಡಿದ್ದಾನೆ. ಕರೆಯಲ್ಲಿ ನಿನ್ನ ಜೊತೆ ಮಾತನಾಡಬೇಕು ಸಿಗು ಎಂದಿದ್ದಾನೆ. ಹಾಗೆಯೇ ಯುವಕನ ಪಿಜಿ ಬಳಿ ಯುವತಿಯ ಸಹೋದರ ಚೇತನ್ ಮತ್ತು ಆತನ ಗೆಳೆಯರು ಬಂದಿದ್ದಾರೆ. ಬಳಿಕ ಇವರಿಬ್ಬರಿಗೂ ಮಾತುಕತೆ ನಡೆದಿದ್ದು, ಮಾತು ಮಿತಿ ಮೀರಿ ಚೇತನ್ ಮತ್ತು ಆತನ ಸ್ನೇಹಿತರು ಸಿದ್ಧಾರ್ಥ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಹಲ್ಲೆಗೊಳಗಾದ ಯುವಕ ನಡು ರಸ್ತೆಯಲ್ಲಿ ಬಿದ್ದಿದ್ದು, ತಕ್ಷಣ ಸ್ಥಳಕ್ಕೆ ಸ್ಥಳೀಯರು ಧಾವಿಸಿ, ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿದ್ಧಾರ್ಥ್​ ಗೋವಿಂದರಾಜ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave A Reply

Your email address will not be published.