Anganwadi Workers: ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ !

ಕಳೆದ ಹತ್ತು ದಿನಗಳಿಂದ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಕಾರ್ಯಕರ್ತೆಯರು ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ಸರ್ಕಾರ ಸ್ಪಂದನೆ ನೀಡಿ, ಪ್ರತಿಭಟನೆಗೆ ನಾಂದಿ ಹಾಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್ ನಲ್ಲಿ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ಸರ್ಕಾರ ಈ ಪ್ರತಿಭಟನೆಗೆ ತೆರೆ ಎಳೆದಿದ್ದು, ಗ್ರಾಚ್ಯೂಟಿ, ಶಾಲಾ ಪೂರ್ವ ಶಿಕ್ಷಣಕ್ಕೆ ಸಮಯ ನಿಗದಿ, ಸೇರಿದಂತೆ ಅವರ ವಿವಿಧ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಪ್ರತಿಭಟನೆ ನಿಲ್ಲಿಸಿದ್ದಾರೆ.

ಹಾಗೇ ಈ ಬಾರಿ ಬಜೆಟ್​ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಎಂ ಗ್ರಾಚ್ಯುವಿಟಿ ನೀಡಲು ಒಪ್ಪಿಗೆ ನೀಟ್ಟಿದ್ದು, ಎಲ್ಲವನ್ನೂ ಹಂತ ಹಂತವಾಗಿ ಜಾರಿಗೆ ತರಲಿದ್ದೇವೆ ಎಂದು ತಿಳಿಸಿದ್ದಾರೆ. ಕಾರ್ಯಕರ್ತೆಯರು ಪ್ರತಿನಿತ್ಯ 10 ರಿಂದ 1 ಗಂಟೆವರೆಗೆ ಕೆಲಸ ಮಾಡಲಿದ್ದು, ಆ ಸಮಯದಲ್ಲಿ ಬೇರೆ ಯಾವ ಕೆಲಸವನ್ನೂ ಅವರ ಮೇಲೆ ಹೇರುವ ಹಾಗಿಲ್ಲ ಎಂದಿದ್ದು, ಅದಕ್ಕೆ ಸರ್ಕಾರವೂ ಒಪ್ಪಿಗೆ ಸೂಚಿಸಿದೆ. ನಂತರ ಪ್ರತಿಭಟನೆ ಕೈ ಬಿಡುವುದಾಗಿ ಕಾರ್ಯಕರ್ತರು ಕೂಡ ಒಪ್ಪಿದ್ದಾರೆ. ಹಾಗೇ ಪಿಯುಸಿ ಅರ್ಹತೆ ಇಲ್ಲದೇ ಇರುವ ಕಾರ್ಯಕರ್ತೆಯರಿಗೂ ಒಂದು ಬಾರಿ ಬಡ್ತಿ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹಾಲಪ್ಪ ಅವರು ಹೇಳಿದ್ದಾರೆ.

ಇನ್ನು ಅಂಗನವಾಡಿ ಕಾರ್ಯಕರ್ತೆಯರು ಯಾವೆಲ್ಲಾ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದರು ಎಂದರೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಖಾಯಂ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ 21 ಸಾವಿರ ವೇತನ ನೀಡಬೇಕು. ಅಲ್ಲದೆ, ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಆರೋಗ್ಯ ವಿಮೆಯಾದ ಇ.ಎಸ್.ಐ. ಜಾರಿ ಮಾಡಬೇಕು. ಗ್ರಾಚ್ಯುಟಿ ಹಣ ಮತ್ತು ಪೆನ್‌ಷನ್ ಜಾರಿ ಮಾಡಬೇಕು. ಕೊನೆಯದಾಗಿ ಕಾಯಿಲೆಗಳಿಂದ ಬಳಲುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಂಬಳ ಸಹಿತ ರಜೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದು, ಇದಕ್ಕೆ ಒಪ್ಪಿಗೆ ನೀಡುವ ಸಲುವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಸದ್ಯ ಎಲ್ಲದಕ್ಕೂ ತಾತ್ಕಾಲಿಕವಾಗಿ ಕೆಲವು ಸೂಚನೆ ಮತ್ತು ಧನಾತ್ಮಕ ಸ್ಪಂದನೆ ದೊರೆತಿದೆ. ಕಾರ್ಯಕರ್ತೆಯರು ಪ್ರತಿಭಟನೆಯನ್ನು ನಿಲ್ಲಿಸಿದ್ದಾರೆ.

Leave A Reply

Your email address will not be published.