ಸೆಲ್ಫೀ ದುರಂತ : ಹಾವಿನ ಜೊತೆ‌ ಸೆಲ್ಫೀ ಕ್ಲಿಕ್ಕಿಸಲು ಹೋಗಿ ಹಾವಿನಿಂದ ಕಚ್ಚಿ ಸಾವು!

ಸೆಲ್ಫಿ ಹುಚ್ಚಿನಿಂದ ತನ್ನ ಪ್ರಾಣವನ್ನೇ ಕಳೆದುಕೊಂಡ ದುರ್ಘಟನೆಯೊಂದು ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ಹಾವಿನ ಸೆಲ್ಪಿ ತೆಗೆಯುವಾಗ ಹಾವು ಕಡಿದು ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನುಮೃತನನ್ನು ಮಣಿಕಂಠ ರೆಡ್ಡಿ (32) ಎಂದು ಗುರುತಿಸಲಾಗಿದೆ.

ನೆಲ್ಲೂರಿನ ಕೋವೂರು ಜಂಕ್ಷನ್ ಬಳಿ ಮನಿಕಂಠ ಜ್ಯೂಸ್ ಅಂಗಡಿಯನ್ನು ನಡೆಸುತ್ತಿದ್ದರು. ನಿನ್ನೆ ಸಂಜೆ ಮಣಿಕಂಠ ಅವರ ಅಂಗಡಿಗೆ ಹಾವಾಡಿಗನೊಬ್ಬ ಬಂದಿದ್ದನು. ಈ ವೇಳೆ ತನ್ನ ಬಳಿ ಅನೇಕ ಹಾವುಗಳಿವೆ ಮತ್ತು ಅವು ಯಾರಿಗೂ ತೊಂದರೆ ಮಾಡುವುದಿಲ್ಲ ಎಂದು ಹೇಳಿದ್ದಾನೆ. ಹಾವಾಡಿಗನ ಮಾತನ್ನು ನಂಬಿದ ಮಣಿಕಂಠ ಹಾವಿನ ಜೊತೆ ಸೆಲ್ಪಿ ತೆಗೆದುಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾನೆ.

ತಕ್ಷಣವೇ ಹಾವಾಡಿಗನು ಹಾವುಗಳಲ್ಲಿ ಒಂದು ಹಾವನ್ನು ತೆಗೆದುಕೊಂಡು ಮಣಿಕಂಠನ ಕುತ್ತಿಗೆಗೆ ಹಾಕಿದನು. ಮಣಿಕಂಠನು ಸೆಲ್ಫಿ ತೆಗೆಯುವಾಗ ಕೈಗೆ ಹಾವು ಕಚ್ಚಿದೆ. ಈ ಬಗ್ಗೆ ಮಣಿಕಂಠ ಹಾವಾಡಿಗನ ಬಳಿ ವಿಷಯ ತಿಳಿಸಿದರೂ, ಆತಂಕ ಪಡುವ ಅಗತ್ಯವಿಲ್ಲ ಎಂದು ಹಾವಾಡಿಗ ಉತ್ತರಿಸಿದ್ದಾನೆ. ಇದಾದ ಕೆಲವೇ ಹೊತ್ತಿನ ನಂತರ ಮಣಿಕಂಠ ಅಸ್ವಸ್ಥಗೊಂಡಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ, ಚಿಕಿತ್ಸೆ ಫಲಿಸದೇ ಮಣಿಕಂಠ ನಿನ್ನೆ ಬೆಳಗ್ಗೆ ಮೃತಪಟ್ಟಿದ್ದಾನೆ. ಈ ಹಿನ್ನಲೆ, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಕ್ರಮವಾಗಿ ಹಾವುಗಳನ್ನು ಸೆರೆಹಿಡಿದು, ಪ್ರದರ್ಶಿಸುವ ಹಾವಾಡಿಗರ ಮೇಲೂ ಪ್ರಕರಣವನ್ನು ದಾಖಲಿಸಲಾಗಿದೆ.

Leave A Reply

Your email address will not be published.