ಹೀಗೂ ಉಂಟೇ ? ನಾಯಿಗಾಗಿ ನಾಯಿ ಮಾಲೀಕನ ಕಿಡ್ನ್ಯಾಪ್‌

ಮನುಷ್ಯರಿಗೆ ಮನುಷ್ಯ ನಿಗಿಂತ ಪ್ರಾಣಿಗಳ ಮೇಲೆ ವ್ಯಾಮೋಹ ಹೆಚ್ಚಿದೆ ಅನ್ನೋದಕ್ಕೆ ನಾವು ಎಷ್ಟೋ ನಿದರ್ಶನಗಳನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಹಾಗೆಯೇ ಇಲ್ಲೊಂದು ಕಡೆ ನಾಯಿಗಾಗಿ ನಾಯಿ ಮಾಲೀಕನನ್ನೇ ಕಿಡ್ನ್ಯಾಪ್ ಮಾಡಿದ ವಿಚಿತ್ರ ಘಟನೆ ನಡೆದಿದೆ.

ಹೌದು ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ದುಬಾರಿ ಬೆಲೆಯ ನಾಯಿಯ ಮೇಲೆ ಕಣ್ಣು ಹಾಕಿದ್ದ ಖದೀಮರು ಅದಕ್ಕಾಗಿ ನಾಯಿ ಮಾಲೀಕನ ಸಹೋದರನನ್ನೇ ಅಪಹರಣ ಮಾಡಿದ್ದಾರೆ.

ಸಹೋದರನನ್ನು ಕಿಡ್ನ್ಯಾಪ್ ಮಾಡಿದ ಬಳಿಕ ಸಹೋದರ ಜೀವ ಸಹಿತ ಬೇಕಾದರೆ ತಮ್ಮ ಬಳಿ ಇರುವ ದುಬಾರಿ ಶ್ವಾನವನ್ನು ತೆಗೆದುಕೊಂಡು ಬರುವಂತೆ ಕಿಡ್ನ್ಯಾಪ್ ಮಾಡಿದವನ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾರೆ.

ಗ್ರೇಟರ್ ನೋಯ್ಡಾದ ಅಲ್ಪಾ 2 ಎಂಬಲ್ಲಿ ವಾಸ ಮಾಡುತ್ತಿದ್ದ ರಾಹುಲ್ ಪ್ರತಾಪ್ ಎಂಬುವವರೇ ಕಿಡ್ನ್ಯಾಪ್ ಆದ ವ್ಯಕ್ತಿ. ಇವರ ಸಹೋದರ ಶುಭಂ ಎರಡು ದುಬಾರಿ ಬೆಲೆಯ ಶ್ವಾನಗಳನ್ನು ಸಾಕಿದ್ದರು. ರಾಟ್ ವಿಲ್ಲರ್ ಹಾಗೂ ಡಾಗ್ ಅರ್ಜೆಂಟಿನೋ ಎಂಬ ಆ ಎರಡು ದುಬಾರಿ ಶ್ವಾನಗಳಾಗಿದ್ದು, ಇದರಲ್ಲಿ ಶ್ವಾನ ಅರ್ಜೆಂಟಿನೋವನ್ನು ಆರು ತಿಂಗಳ ಹಿಂದೆ 1.5 ಲಕ್ಷ ಹಣ ನೀಡಿ ಖರೀದಿಸಿದ್ದರು. ಈ ಶ್ವಾನದ ಮೇಲೆ ಖದೀಮರು ಕಣ್ಣು ಹಾಕಿದ್ದರು.

ಮಾಹಿತಿ ಪ್ರಕಾರ ಸಹೋದರ ರಾಹುಲ್ ಅಲ್ಪಾ 2 ನಲ್ಲಿ ವಾಸ ಮಾಡುತ್ತಿದ್ದು, ಶ್ವಾನಗಳ ಸಾಕಾಣೆಗೆ ನನಗೆ ಕೆಲಸಕ್ಕೆ ನೆರವಾಗುತ್ತಿದ್ದ. ಅಲ್ಲದೇ ಆಗಾಗ ತನ್ನ ನಿವಾಸದ ಬಳಿ ಈ ದುಬಾರಿ ಶ್ವಾನಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಎಂದು ಶುಭಂ ಹೇಳಿದ್ದಾರೆ. ರಾಹುಲ್ ಚಲನವಲನಗಳನ್ನು ಗಮನಿಸಿದ ಖದೀಮರು ಆತನನ್ನು ನಾಯಿಗಾಗಿ ಕಿಡ್ನ್ಯಾಪ್ ಮಾಡುವ ಪ್ಲಾನ್ ಮಾಡಿದ್ದಾರೆ.

ಡಿಸೆಂಬರ್ 14ರ ಬುಧವಾರ ಗ್ರೇಟರ್ ನೋಯ್ಡಾದ ಅಲ್ಫಾ2ನಲ್ಲಿ ವಾಸ ಮಾಡುತ್ತಿದ್ದ ರಾಹುಲ್‌ ನಿವಾಸದ ಬಳಿ ಬಂದ ಪರಿಚಯದವನಾದ ವಿಶಾಲ್ ಕುಮಾರ್ ತನ್ನ ಇಬ್ಬರು ಗೆಳೆಯರಾದ ಲಲಿತ್ ಹಾಗೂ ಮೋಟಿ ಎಂಬುವವರೊಂದಿಗೆ ರಾಹುಲ್‌ನನ್ನು ಭೇಟಿ ಮಾಡಿದ್ದಾರೆ. ಅಲ್ಲಿ ರಾಹುಲ್‌ನಿಂದ ಒತ್ತಡಪೂರ್ವಕವಾಗಿ ಶ್ವಾನವನ್ನು ಕಿತ್ತುಕೊಂಡು ಹೋಗಲು ಮುಂದಾಗಿದ್ದು ಆದರೆ ಇದು ಸಾಧ್ಯವಾಗಿಲ್ಲ. ನಂತರ ಮೂವರು ಶ್ವಾನವನ್ನು ಅಲ್ಲಿ ಬಿಟ್ಟು ರಾಹುಲ್‌ನನ್ನು ಅಲ್ಲಿಂದ ಎಳೆದುಕೊಂಡು ಹೋಗಿದ್ದಾರೆ. ನಂತರ ಅಪಹರಣಕಾರರು ರಾಹುಲ್ ಸಹೋದರ ಶುಭಂಗೆ ಕರೆ ಮಾಡಿ ರಾಹುಲ್ ಜೀವಂತವಾಗಿ ಬೇಕಿದ್ದಲ್ಲಿ ತಮ್ಮ ದುಬಾರಿ ಶ್ವಾನದೊಂದಿಗೆ ಬರುವಂತೆ ಗದರಿಸಿದ್ದಾರೆ .

ಅಪಹರಣ ವಿಷಯ ತಿಳಿದ ಶುಭಂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ತಂಡಗಳನ್ನು ರಚಿಸಿ ಶಂಕಿತರ ಹುಡುಕಾಟದ ಕಾರ್ಯಾಚರಣೆಗೆ ಇಳಿದಿದ್ದಾರೆ. ಅಲ್ಲದೇ ಶಂಕಿತರ ವಿರುದ್ಧ ಪ್ರಕರಣ ದಾಖಲಿಸಿದ್ದು ಪೊಲೀಸರು ದೂರವಾಣಿ ಮೂಲಕವೇ ಅವರನ್ನು ವಿಚಾರಣೆ ನಡೆಸಿದಾಗ ಡಿಸೆಂಬರ್ 15 ರಂದು ರಾಹುಲ್‌ನನ್ನು ಬಿಟ್ಟು ಕಳುಹಿಸಿದ್ದಾರೆ.

ಅಲಿಗರ್‌ನ ನಿರ್ಜನ ಪ್ರದೇಶವೊಂದರಲ್ಲಿ ರಾಹುಲ್‌ನನ್ನು ಹಾಗೂ ಆತನ ಮೊಬೈಲ್ ಬಿಟ್ಟು ಖದೀಮರು ಪರಾರಿಯಾಗಿದ್ದರು. ನಂತರ ರಾಹುಲ್ ಶುಭಂಗೆ ಕರೆ ಮಾಡಿದ್ದು, ಅಲ್ಲಿಗೆ ಬಂದ ಶುಭಂ ರಾಹುಲ್‌ನನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ.

ಈಗಾಗಲೇ ಮೂವರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಹುಡುಕಾಟದಲ್ಲಿ ಪೊಲೀಸ್ ತಂಡ ನಿರತವಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಅಂಜನಿ ಕುಮಾರ್ ಅವರು ಘಟನೆ ಬಗ್ಗೆ ಖಚಿತಪಡಿಸಿದ್ದಾರೆ.

ಅಂತೂ ಬಂದ ದಾರಿಗೆ ಸುಂಕ ಇಲ್ಲ ಇಲ್ಲ ಎಂದು ಕಳ್ಳರು ಓಡಿ ಹೋಗಿದ್ದು, ಇತ್ತ ಇನ್ನು ದುಬಾರಿ ನಾಯಿ ಸಾಕುವುದು ಸಹ ಅಪಾಯ ಎಂದು ಸಾರ್ವಜನಿಕರು ಗೊಂದಲಗೊಂಡಿದ್ದಾರೆ.

Leave A Reply

Your email address will not be published.