’53 ಮುಸ್ಲಿಂ ರಾಷ್ಟ್ರಗಳಿವೆ. ನಿನ್ನ ರುಂಡ-ಮುಂಡ ಬೇರೆ ಮಾಡ್ತಾರೆ ‘ ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಆರೋಪದ ಮೇಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿ 7 ಮಂದಿ ವಿರುದ್ಧ FIR !

ಹಿಂದೂ ಕಾರ್ಯಕರ್ತನಿಗೆ, ‘ ಸುಮ್ನಿರು, ಇಲ್ಲಾಂದ್ರೆ ರುಂಡ-ಮುಂಡ ಬೇರೆ ‘ ಮಾಡ್ತಾರೆ ಎಂದು ಬೆದರಿಕೆ ಹಾಕಿದ ಆರೋಪದ ಮೇಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿದಂತೆ 7 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ (Srirangapatna) ಜಾಮಿಯಾ ಮಸೀದಿಯ (Jamia Masjid) ಹೋರಾಟ ಇದೀಗ ಹೊಸದೊಂದು ಆಯಾಮಕ್ಕೆ ತಿರುಗಿದೆ. ನಿನ್ನೆ ತನಕ ಜಾಮಿಯಾ ಮಸೀದಿ ವಿರುದ್ಧ ಹೋರಾಟ ನಡೆಸುತ್ತಿದ್ದ ಹಿಂದೂ ಕಾರ್ಯಕರ್ತರು ಇದೀಗ ಪೊಲೀಸರ ವಿರುದ್ಧ ಕೂಡಾ ಹೋರಾಟಕ್ಕೆ ನಿಲ್ಲುವಂತಾಗಿದೆ.

ಘಟನೆಯ ಸಂಪೂರ್ಣ ವಿವರ:
ಶ್ರೀರಂಗಪಟ್ಟಣದಲ್ಲಿ ಇರೋದು ಜಾಮಿಯಾ ಮಸೀದಿ ಅಲ್ಲ, ಅದು ಮಂದಿರ ಎಂದು ಸಾವಿರಾರು ಹಿಂದೂ ಕಾರ್ಯಕರ್ತರು ಸಂಕೀರ್ತನಾ ಯಾತ್ರೆಯ ಮೂಲಕ ಮೆರವಣಿಗೆ ನಡೆಸಿದರು. ಅಲ್ಲಿನ ನಿಮಿಷಾಂಭ ದೇವಸ್ಥಾನದಿಂದ ರಂಗನಾಥಸ್ವಾಮಿ ದೇವಸ್ಥಾನದವರೆಗೆ ನಡೆದು ಬಂದ ಸಂಕೀರ್ತನಾ ಯಾತ್ರೆ ಮೆರವಣಿಗೆಯ ವೇಳೆ ಘಟನೆಯೊಂದು ನಡೆದಿತ್ತು. ಗಂಜಾಂ ಗ್ರಾಮಕ್ಕೆ ಮೆರವಣಿಗೆ ಬರುವಾಗ ಹಿಂದೂ ಕಾರ್ಯಕರ್ತನೋರ್ವ ಬಾಳೆದಿಂಡನ್ನು ಮುಸ್ಲಿಂ ಒಬ್ಬರ ಮನೆಯ ಮೇಲೆ ಎಸೆದಿದ್ದನಂತೆ. ಈಗ ಈ ಘಟನೆ ಮತ್ತು ನಂತರ ಪೊಲೀಸರು ಹೇಳಿದ ಮಾತು ವಿವಾದಕ್ಕೆ ಕಾರಣವಾಗಿದೆ.

ಅಲ್ಲಿದ್ದ ಸಿಸಿಟಿವಿ ಆಧರಿಸಿ ಶ್ರೀರಂಗಪಟ್ಟಣ ಪೊಲೀಸರು ತನಿಖೆ ನಡೆಸಿ ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದ ಯುವಕನೊಬ್ಬನನ್ನು ಬಂಧಿಸಿದ್ದರು. ಈ ವೇಳೆ ಪೊಲೀಸರು ಯುವಕನಿಗೆ ಅಲ್ಲಿನ ಪೊಲೀಸರು ಹೇಳಿದ ಮಾತು ಇದೀಗ ಒಟ್ಟಾರೆ ವಿವಾದಕ್ಕೆ ಕಾರಣವಾಗಿದೆ. ” ಒಟ್ಟು 53 ಮುಸ್ಲಿಂ ರಾಷ್ಟ್ರಗಳಿವೆ. ನಿನ್ನ ರುಂಡ-ಮುಂಡ ಕತ್ತರಿಸುತ್ತಾರೆ ” ಎಂದು ಪೊಲೀಸರು ಬೆದರಿಸಿದ್ದಾರೆ ಎಂದು ಪೊಲೀಸರ ಮೇಲೆ ಆರೋಪ ಕೇಳಿ ಬಂದಿದೆ. ಹಿಂದೂಗಳಿಗೆ ಹೀಗೆ ಬೆದರಿಕೆ ಹಾಕಿರುವ ಪೊಲೀಸ್‌ನ್ನು ಸಸ್ಪೆಂಡ್ ಮಾಡಿ, ಆತನ ಮೇಲೆ ಎಫ್‌ಐಆರ್ ದಾಖಲು ಮಾಡಬೇಕೆಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಪೊಲೀಸರ ವಿರುದ್ಧ ಜಾಮಿಯಾ ಮಸೀದಿ ಎದುರು ರಾತ್ರಿ ಇಡೀ ಪೆಂಡಾಲ್ ಹಾಕಿಕೊಂಡು ಹಿಂದೂ ಕಾರ್ಯಕರ್ತರು ಪ್ರತಿಭಟಿಸಿ, ಕೊನೆಗೆ ಉದ್ರಿಕ್ತರು ಜಾಮಿಯಾ ಮಸೀದಿಗೆ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದ್ದರು.

ಹಿಂದೂ ಕಾರ್ಯಕರ್ತರನ್ನು ಮನವೊಲಿಸುವ ಕೆಲಸಕ್ಕೆ ಎಸ್ಪಿ ಯತೀಶ್ ಮುಂದಾದರೂ ಯಾವುದೆ ಪ್ರಯೋಜನ ಆಗಲಿಲ್ಲ. ಬೆದರಿಕೆ ಹಾಕಿದ ಪೊಲೀಸ್‌ನ್ನು ಸಸ್ಪೆಂಡ್ ಮಾಡಿ, ಎಫ್‌ಐಆರ್ ದಾಖಲು ಮಾಡುವವರೆಗೆ ನಾವು ಪ್ರತಿಭಟನೆ ಕೈ ಬಿಡಲ್ಲ ಎಂದು ಪಟ್ಟು ಹಿಡಿದು ಕುಳಿತರು. ಚಳಿಯ ನಡುವೆ ಸಣ್ಣಗೆ ಬಿದ್ದ ಮಳೆಯಲ್ಲೇ ಪ್ರತಿಭಟನೆ ಮುಂದುವರೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ ಸರ್ಕಲ್ ಇನ್‌ಸ್ಪೆಕ್ಟರ್‌ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಿಂದೂ ಕಾರ್ಯಕರ್ತರ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ದೂರು ದಾಖಲಾದ ಹಿನ್ನೆಲೆ ಹಿಂದೂ ಸಂಘಟನೆಗಳು ಕೂಡಾ ಪ್ರತಿಭಟನೆಯನ್ನು ಕೈ ಬಿಟ್ಟಿವೆ.

Leave A Reply

Your email address will not be published.