Rashmika Mandanna : ನಟಿ ರಶ್ಮಿಕಾರನ್ನು ಬ್ಯಾನ್‌ ಮಾಡಿದರೆ ಕನ್ನಡ ಚಿತ್ರರಂಗಕ್ಕೆ ಬಹಳ ನಷ್ಟ – ನಿರ್ದೇಶಕ ನಾಗಶೇಖರ್‌ ಶಾಕಿಂಗ್‌ ಹೇಳಿಕೆ

ನ್ಯಾಷನಲ್ ಕ್ರಷ್ , ನಟಿ ರಶ್ಮಿಕಾ ಮಂದಣ್ಣ ಈಗಾಗಲೇ ಸಾಕಷ್ಟು ಟ್ರೋಲ್ ಗಳಿಗೆ ಒಳಗಾಗಿದ್ದಾರೆ. ಪ್ರತೀದಿನ ಏನಾದರೊಂದು ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಇದೀಗ ಕೆಲವು ಸುದ್ದಿಗಳು ತಾರಕಕ್ಕೇರಿ ರಶ್ಮಿಕಾ ಕರ್ನಾಟಕದಲ್ಲಿ ಬ್ಯಾನ್ ಆಗಬೇಕು ಎಂಬ ಕೂಗು ಹೆಚ್ಚಾಗಿದೆ. ಈ ಆಕ್ರೋಶದ ಬೆನ್ನಲ್ಲೇ ಈ ಬಗ್ಗೆ ಮಾತನಾಡಿದ ʻಮೈನಾʼ ನಿರ್ದೇಶಕ ನಾಗಶೇಖರ್, ನಟಿ ರಶ್ಮಿಕಾರನ್ನು ಬ್ಯಾನ್ ಮಾಡಿದ್ರೆ ಕನ್ನಡ ಚಿತ್ರರಂಗಕ್ಕೆ ಬಹಳ ನಷ್ಟ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಸದ್ಯ ನಟಿ ರಶ್ಮಿಕಾ ಮಂದಣ್ಣ ಸೌತ್ ಹಾಗೂ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹಾಗೇ ಇತ್ತೀಚೆಗೆ ಕನ್ನಡಿಗರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಕಾರಣ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ತಮ್ಮ ಮೊದಲ ಸಿನಿಮಾ ಹಾಗೂ ಚಿತ್ರರಂಗದಲ್ಲಿ ತನ್ನ ಹೆಸರುವಾಸಿಗೆ ಕಾರಣವಾದ ಸಿನಿಮಾ ಕಿರಿಕ್ ಪಾರ್ಟಿಯ ನಿರ್ಮಾಣ ಸಂಸ್ಥೆಯ ಹೆಸರು ಹೇಳಲಿಲ್ಲ. ಹಾಗಾಗಿ ಕನ್ನಡಿಗರು ನಟಿಯ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಘಟನೆಯ ಕೆಲ ದಿನಗಳ ಬಳಿಕ ರಶ್ಮಿಕಾಳ ಈ ನಡವಳಿಕೆಗೆ ರಿಷಬ್ ಶೆಟ್ಟಿ ತಮ್ಮದೇ ಶೈಲಿಯಲ್ಲಿ ಟಾಂಗ್ ಕೊಟ್ಟಿದ್ದರು. ರಿಷಬ್ ಟಾಂಗ್ ನೀಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ರಶ್ಮಿಕಾಳ ವಿರುದ್ಧ ನೆಟ್ಟಿಗರ ಟ್ರೋಲ್ ಗಗನಕ್ಕೇರಿತು. ರಶ್ಮಿಕಾ ಬ್ಯಾನ್ ಆಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಇದೀಗ ಈ ಬಗ್ಗೆ ನಿರ್ದೇಶಕ ನಾಗಶೇಖರ್ ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ನಿರ್ದೇಶಕ ನಾಗಶೇಖರ್ ತೆಲುಗಿನ ತಮ್ಮ ಮುಂದಿನ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೇಳೆ ರಶ್ಮಿಕಾ ಬಗ್ಗೆ ಬ್ಯಾನ್ ಮತ್ತು ನಟಿಯ ಮೊದಲ ಚಿತ್ರದ ಬಗ್ಗೆ ನಿರ್ದೇಶಕ ನಾಗಶೇಖರ್ ಅವರಿಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ನಿರ್ದೇಶಕರು ಅವಕಾಶ ಕೊಟ್ಟವರನ್ನು ನೆನಪು ಇಟ್ಟುಕೊಳ್ಳಬೇಕು ಎಂದು ನಿರೀಕ್ಷೆ ಮಾಡುವುದೇ ತಪ್ಪು, ಅದನ್ನೆಲ್ಲಾ ನಿರೀಕ್ಷೆ ಮಾಡಬಾರದು ಎಂದು ಹೇಳಿದರು.

ಹಾಗೇ ಮಾತು ಮುಂದುವರೆಸಿ ಅವರು ಹೀಗೆ ಹೇಳಿದರು, ನನಗೆ ಈ ವಿಷಯವಾಗಿ ಗೊತ್ತಿಲ್ಲ. ರಶ್ಮಿಕಾ ಅವರನ್ನು ಕನ್ನಡ ಚಿತ್ರರಂಗ ಬ್ಯಾನ್ ಮಾಡಿದರೆ ಚಿತ್ರರಂಗಕ್ಕೆ ನಷ್ಟ ಉಂಟಾಗುತ್ತದೆ. ಯಾಕಂದ್ರೆ ಒಬ್ಬ ಒಳ್ಳೆಯ ಕಲಾವಿದೆಯನ್ನು ಚಿತ್ರರಂಗದಿಂದ ಬ್ಯಾನ್ ಮಾಡುವುದು ಸರಿಯಲ್ಲ. ನಾವೇನಾದರೂ ಮುಂದಿನ ದಿನಗಳಲ್ಲಿ ನನ್ನ ಕನ್ನಡದ ಸಿನಿಮಾಗೆ ರಶ್ಮಿಕಾ ರೀತಿಯ ನಟಿ ಬೇಕು ಎಂದುಕೊಳ್ಳುತ್ತೇವೆ. ಆದರೆ ಆಕೆಯ ಬ್ಯಾನ್ ಮಾಡಿದರೆ ಫಿಲ್ಮ್ ಮೇಕರ್ಸ್‌ಗೆ ತೊಂದರೆಯಾಗುತ್ತದೆ ಎಂದು ನಿರ್ದೇಶಕ ನಾಗಶೇಖರ್ ಹೇಳಿದರು.

Leave A Reply

Your email address will not be published.