ಮಂಗಳೂರು : ‘ರಿಕ್ಷಾ ಕುಕ್ಕರ್ ಬಾಂಬ್’ ಪ್ರಕರಣದ ಬೆನ್ನಲ್ಲೇ ಪೊಲೀಸರಿಂದ ಮಹತ್ವದ ಪ್ರಕಟಣೆ !

ಮಂಗಳೂರಿನಲ್ಲಿ ನಡೆದಂತಹ ಕುಕ್ಕರ್ ಬಾಂಬ್ ಪ್ರಕರಣ ಜನರನ್ನು ಬೆಚ್ಚಿಬೀಳಿಸಿದ್ದು, ಈ ಘಟನೆ ಕುರಿತು ದಿನಕ್ಕೊಂದು ಸ್ಫೋಟಕ ಸಂಗತಿಗಳು ಬಹಿರಂಗವಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನಾದ ಆರೋಪಿ ಶಾರಿಕ್ ಮೈಸೂರಿನಲ್ಲಿದ್ದುಕೊಂಡು, ಅಲ್ಲಿಯೇ ಬಾಂಬ್ ತಯಾರಿಸಿಕೊಂಡು ಮಂಗಳೂರಿಗೆ ಬಂದಿದ್ದ ಸಂಗತಿ ಈಗ ಬಹಿರಂಗವಾಗಿದೆ.

ಈ ಹಿಂದೆ ಭಯೋತ್ಪಾದನಾ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಇಬ್ಬರು ಆರೋಪಿಗಳು ಸಹ ಶಿವಮೊಗ್ಗ ಜಿಲ್ಲೆಯ ನಂಟು ಹೊಂದಿದ್ದು ಬಹಿರಂಗವಾಗಿತ್ತು. ಇವರು ಬಾಂಬ್ ತಯಾರಿಸಿ ಅದರ ರಿಹರ್ಸಲ್ ಅನ್ನು ಶಿವಮೊಗ್ಗ ಜಿಲ್ಲೆಯಲ್ಲಿಯೇ ಮಾಡಿದ್ದು ತಿಳಿದು ಬಂದಿತ್ತು. ಇದರ ಮಧ್ಯೆ ಈಗ ಶಿವಮೊಗ್ಗ ಜಿಲ್ಲಾ ಪೊಲೀಸರು ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ.

ಸಾರ್ವಜನಿಕರು ತಮ್ಮ ಮನೆಗಳನ್ನು ಬಾಡಿಗೆಗೆ ಕೊಡುವ ಸಂದರ್ಭದಲ್ಲಿ ಬಾಡಿಗೆದಾರರ ಪೂರ್ವಾಪರವನ್ನು ಪರಿಶೀಲಿಸಿ, ಅವರುಗಳ ಮಾಹಿತಿಯನ್ನು ಖಚಿತಪಡಿಸಿಕೊಂಡ ನಂತರವೇ ಬಾಡಿಗೆ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ ಯಾವುದೇ ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಹೊಸದಾಗಿ ತಮ್ಮ ಏರಿಯಾದಲ್ಲಿ ಮನೆಯನ್ನು ಬಾಡಿಗೆ ಕೇಳಿಕೊಂಡು ಬಂದ ಸಂದರ್ಭದಲ್ಲಿ ಅಥವಾ ವಾಸವಾಗಿದ್ದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ / ಪೊಲೀಸ್ ಕಂಟ್ರೋಲ್ ಅಥವಾ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

Leave A Reply

Your email address will not be published.