ಅಡಿಕೆ ಬೆಳೆಗೆ ಹಬ್ಬಿದ ಎಲೆಚುಕ್ಕೆ ರೋಗಕ್ಕೆ ಪರಿಹಾರ | ಕೇಂದ್ರ ನಿಯೋಜಿತ ಸಮಿತಿ ರಾಜ್ಯಕ್ಕೆ ಆಗಮನ : ಗೃಹ ಸಚಿವ ಅರಗ ಜ್ಞಾನೇಂದ್ರ

ರಾಜ್ಯದಲ್ಲಿನ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆಚುಕ್ಕೆ ರೋಗದ ಬಗ್ಗೆ ಅಧ್ಯಯನ ನಡೆಸಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರದ ಏಳು ತಜ್ಞರನ್ನು ಒಳಗೊಂಡ ಸಮಿತಿಯು ಮುಂದಿನ ವಾರ ರಾಜ್ಯಕ್ಕೆ ಆಗಮಿಸಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಇಂದು ಮಾತನಾಡಿರುವ ಸಚಿವರು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿನ ರೈತರು ಎದುರಿಸುತ್ತಿರುವ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸಿದ್ದು, ಅಡಿಕೆ ಬೆಳೆಗೆ ಎದುರಾಗಿರುವ ರೋಗದ ನಿವಾರಣೆಗೆ ಸಮಿತಿಯು ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿ ಎಂದು ಹೇಳಿದ್ದಾರೆ.

ಇದೀಗ ರಾಜ್ಯದಲ್ಲಿನ ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾದ ಎಲೆಚುಕ್ಕೆ ರೋಗದ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳು ಹಾಗೂ ಹಿರಿಯ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ನವರ ನೇತೃತ್ವದಲ್ಲಿ ಕೇಂದ್ರ ಕೃಷಿ ಸಚಿವ ನರೆಂದ್ರ ಸಿಂಗ್ ತೋಮರ್ ಅವರಿಗೆ ನವದೆಹಲಿಯಲ್ಲಿ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲು ಪೂರಕವಾಗಿ ಸ್ಪಂದಿಸಿ ಸಮಿತಿ ರಚಿಸಿದೆ ಎಂದರು.

ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದ ಆಡಿಕೆ ತೋಟಗಳು ಎಲೆಚುಕ್ಕೆ ರೋಗಕ್ಕೆ ಬಲಿಯಾಗಿದ್ದು, ಈ ರೋಗ ಎಲ್ಲೆಡೆ ಹರಡುತ್ತಿರುವುರಿಂದ , ಇದೇ 22ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿಗೆ ಆಗಮಿಸುವ ಸಂಶೋಧನಾ ತಜ್ಞರನ್ನು ಭೇಟಿಯಾಗಿ ಈ ಎಲೆಚುಕ್ಕೆ ರೋಗದ ಬಗ್ಗೆ ಅವರಿಗೆ ತಿಳಿಸುವೆ ಎಂದು ತಿಳಿಸಿದ್ದಾರೆ. ಬರೋಬ್ಬರಿ 50 ಲಕ್ಷ ಜನರಿಗೆ ಒಂದು ರೀತಿಯಲ್ಲಿ ಜೀವನೋಪಾಯ ಕಲ್ಪಿಸಿಕೊಟ್ಟಿರುವ ಈ ಅಡಿಕೆ ಬೆಳೆ ನಮ್ಮ ಭಾಗದ ರೈತರ ಆರ್ಥಿಕ ಜೀವನಾಡಿಯಾಗಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದಲ್ಲಿ ರೈತ ಸಮುದಾಯದ ಜೀವನಾಡಿಯದ ಈ ಅಡಿಕೆ ಬೆಳೆ, ಎಲೆಚುಕ್ಕೆ ರೋಗದಿಂದ ನಲುಗಿ ಹೋಗಿದ್ದು, ಇದರ ನಿಯಂತ್ರಣದ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲು ಮಾಜಿ ಮುಖ್ಯಮಂತ್ರಿ ಬಿ .ಎಸ್ ಯಡಿಯೂರಪ್ಪ ನವರ ನೇತೃತ್ವದ ನಿಯೋಗದಲ್ಲಿ ಶಿವಮೊಗ್ಗ ಸಂಸದ ಬಿ .ವೈ ರಾಘವೇಂದ್ರ, ಗೃಹ ಸಚಿವ ಅರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕೃಷ್ಣಭಟ್ ರವರು ಸೇರಿದಂತೆ ಇತರ ಗಣ್ಯರು ಕೂಡ ಇದ್ದರು.

Leave A Reply

Your email address will not be published.