ಕರಾವಳಿಯಲ್ಲಿ ಹೆಚ್ಚುತ್ತಿದೆ ವೈರಲ್‌ ಜ್ವರ ಸೇರಿದಂತೆ ಕೆಂಗಣ್ಣು | ಸಮಸ್ಯೆಯಿದ್ದವರು ಶಾಲೆಗೆ ಬರದಿರಲು ಸೂಚನೆ!

ಅವಿಭಜಿತ ಕರಾವಳಿ ಜಿಲ್ಲೆಯಲ್ಲಿ ಕಣ್ಣು ನೋವು ( ಕೆಂಗಣ್ಣು) ಸಮಸ್ಯೆ ತೀವ್ರವಾಗಿ ಹಬ್ಬಿದೆ. ದಿನೇ ದಿನೇ ಕಣ್ಣು ಆಸ್ಪತ್ರೆಗಳಲ್ಲಿ ಸರತಿ ಸಾಲುಗಳು ಉದ್ದವಾಗುತ್ತಿದೆ. ಇದು ಬರೀ ಮಕ್ಕಳಲ್ಲಿ ಮಾತ್ರವಲ್ಲದೇ ಹಿರಿಯರನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಆರೋಗ್ಯ ತಜ್ಞರ ಪ್ರಕಾರ ಎಲ್ಲದಕ್ಕೂ ಹವಾಮಾನ ವೈಪರೀತ್ಯವೇ ಕಾರಣ ಎಂದು ಹೇಳುತ್ತಾರೆ.

ಐ ಕಾಂಜಂಕ್ಟಿವಿಟಿಸ್‌ ಅಥವಾ ಮದ್ರಾಸ್‌ ಐ ಸಮಸ್ಯೆಯು ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಮಳೆಗಾಲ ಮುಗಿದು ಚಳಿಗಾಲ ಶುರುವಾಗುವಾಗಲೆ ವಕ್ಕರಿಸಿದೆ. ಇದಕ್ಕೆ ಬಹುಮುಖ್ಯವಾದ ಕಾರಣ ಇತ್ತೀಚೆಗೆ ಬಿಟ್ಟು ಬರುವ ಮಳೆಯ ಜತೆಗೆ ಚಳಿಯ ಪ್ರವೇಶ ಎರಡು ಜತೆಗೂಡಿದಾಗ, ಈ ವಿಶೇಷ ವೈರಸ್‌ ಯಾವುದೇ ವಯಸ್ಸು ನೋಡದೇ ಕಣ್ಣುಗಳ ಮೇಲೆ ದಾಳಿ ಇಡುತ್ತಾ ಕಣ್ಣು ನೋವು ತರಿಸುತ್ತಿದೆ.

ಗುಣಲಕ್ಷಣಗಳು:-
ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಯ ಕಣ್ಣಿನಿಂದ ಹೊರಬರುವ ದ್ರವದ ಮೂಲಕ ಮದ್ರಾಸ್‌ ಕಣ್ಣಿನ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಕೆಲವೊಮ್ಮೆ ಧೂಳು, ಹೊಗೆ ಮತ್ತು ಮಾಲಿನ್ಯದಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ತುರಿಕೆ ಸಂವೇದನೆ, ಕಣ್ಣುಗಳ ಕೆಂಪು ತೀವ್ರ ಕಿರಿಕಿರಿಯೊಂದಿಗೆ ಕಣ್ಣಿನ ಕೆಂಪು, ಕಣ್ಣಿನ ಬಿಳಿ ಭಾಗದ ಕೆಂಪು, ಬೆಳಕಿಗೆ ಒಡ್ಡಿಕೊಂಡಾಗ ಕಣ್ಣು ಕುಟುಕುವುದು, ಕಣ್ಣಿನಿಂದ ಕೊಳಕು ಹೊರಸೂಸುವುದು, ಕೆಲವು ರೋಗಿಗಳು ಕಣ್ಣಿನ ಊತವನ್ನು ಅನುಭವಿಸುತ್ತಾರೆ. ಈ ಸೋಂಕು ದೃಷ್ಟಿಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಇದು ಹೆಚ್ಚಾಗಿ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿನಿಂದ ಉಂಟಾಗುತ್ತದೆ.

ಈ ಸಮಸ್ಯೆ ಕಣ್ಣಿನ ಸರ್ಜರಿ ಆಗಿರುವವರು ಹಾಗೂ ಮಧುಮೇಹಿಗಳ ವಿಚಾರದಲ್ಲಿ ಜಾಗ್ರತೆ ಅಗತ್ಯ. ಮುಖ್ಯವಾಗಿ ಕಣ್ಣಿನ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ. ಕೆಲವೊಂದು ಪ್ರಕರಣಗಳಲ್ಲಿ ಕಣ್ಣಿನ ಬಿಳಿ ಭಾಗದಿಂದ ಕಾರ್ನಿಯಾದ ಕಡೆಗೂ ವೈರಸ್‌ ದಾಳಿ ನಡೆಸುತ್ತದೆ. ಇಂತಹ ಸಮಸ್ಯೆಗಳು ಇದ್ದಾಗ ತಕ್ಷಣವೇ ವೈದ್ಯರ ಬಳಿಗೆ ಹೋಗಬೇಕು.
ಇದಕ್ಕೆ ಬೇಕಿರುವ ಡ್ರಾಪ್ಸ್ ಹಾಕಿದರೆ ಐದು ದಿನಗಳಲ್ಲಿ ಸರಿಹೋಗುತ್ತದೆ. ಉಳಿದಂತೆ ಇದೊಂದು ವೈರಲ್‌ ಕಾಯಿಲೆ ಹೆಚ್ಚು ಅಪಾಯ ಇರದಿದ್ದರೂ ಜಾಗ್ರತೆ ಅತೀ ಅಗತ್ಯ ಎನ್ನುತ್ತಾರೆ ವೈದ್ಯರು.

ಕೆಂಗಣ್ಣು ವಿಚಾರದಲ್ಲಿ ಆರೋಗ್ಯ ಇಲಾಖೆಗೆ ತಲೆನೋವೆ ಬಂದಿದೆ. ಕಣ್ಣಿನ ಸಮಸ್ಯೆಯಿಂದಾಗಿ ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದ್ದೂ, ಯಾವುದಾದರೂ ತೀವ್ರ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣವೇ ಇಲಾಖೆಯ ಗಮನಕ್ಕೆ ತರಬೇಕು ಎಂದು ದಕ್ಷಿಣ ಕನ್ನಡ ಡಿಎಚ್‌ಒ ಡಾ. ಕಿಶೋರ್‌ ಕುಮಾರ್‌ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸುಧಾಕರ ಅವರು ಹೇಳುವಂತೆ ಇಂತಹ ಸಮಸ್ಯೆಗಳಿದ್ದರೆ ಶಾಲೆಗೆ ಕಳುಹಿಸಬೇಡಿ. ಯಾಕೆಂದರೆ ಈ ಮಕ್ಕಳಿಂದ ಮತ್ತಷ್ಟು ಮಕ್ಕಳಿಗೆ ಹರಡುವ ಸಾಧ್ಯತೆ ಇದ್ದೂ, ಐದಾರು ದಿನ ವಿಶ್ರಾಂತಿ ಪಡೆದುಕೊಂಡ ನಂತರ ಶಾಲೆಗೆ ಬಂದರೆ ಸಾಕು ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ದಿನಕ್ಕೆ ಹಲವಾರು ಬಾರಿ ತಣ್ಣೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆಯಿರಿ. ಈ ವೈರಸ್‌ ಕಣ್ಣುಗಳನ್ನು ಸ್ಪರ್ಶಿಸುವ ಮೂಲಕ ಹರಡುವುದರಿಂದ, ಕಣ್ಣನ್ನು ಮುಟ್ಟುವುದು ಅಥವಾ ಉಜ್ಜುವುದನ್ನು ತಪ್ಪಿಸಿ ಬೇರೆಯವರ ಟವೆಲ್, ಕರವಸ್ತ್ರ, ದಿಂಬು, ಹಾಸಿಗೆ ಇತ್ಯಾದಿಗಳನ್ನು ಬಳಸಬೇಡಿ. ದ್ವಿಚಕ್ರ ವಾಹನ ಸವಾರಿ ಮಾಡುವಾಗ ಕಡ್ಡಾಯವಾಗಿ ಸನ್‌ ಗ್ಲಾಸ್‌ ಧರಿಸಿ. ಯಾವಾಗಲೂ ಕನ್ನಡಕ ಹಾಕಿಕೊಂಡಿರಿ. ಈಗಾಗಲೇ ಈ ಕಾಯಿಲೆಯಿಂದ ಬಳಲುತ್ತಿರುವವರಿಂದ ದೂರವಿರಿ. ಪೀಡಿತ ಮಕ್ಕಳು ಶಾಲೆಗಳಿಗೆ ಹೋಗಬಾರದು ಮತ್ತು ಕಚೇರಿಗೆ ಹೋಗುವವರು ರಜೆ ತೆಗೆದುಕೊಳ್ಳಬೇಕು.

ಈ ರೋಗದ ಸಮಯದಲ್ಲಿ, ಸೋಂಕಿತ ವ್ಯಕ್ತಿಗೆ ಕಣ್ಣುಗಳಲ್ಲಿ ತುರಿಕೆ, ಮಸುಕಾದ ದೃಷ್ಟಿ ಮುಂತಾದ ಸಮಸ್ಯೆಗಳಿರುತ್ತದೆ. ವೈದ್ಯರ ಪ್ರಕಾರ, ದಿನದಲ್ಲಿ ಸಾಕಷ್ಟು ನೀರು ಕುಡಿಯುವುದು ಇದನ್ನು ತಪ್ಪಿಸಲು ಉತ್ತಮ ಮಾರ್ಗವಾಗಿದೆ. ಇದಲ್ಲದೆ, ಹಸಿರು ತರಕಾರಿಗಳು, ತಾಜಾ ಹಣ್ಣುಗಳನ್ನು ಸೇವಿಸುವುದು, ಉತ್ತಮ ನಿದ್ರೆ ಮಾಡುವುದರಿಂದ ಈ ರೋಗವನ್ನು ದೂರವಿರಿಸಬಹುದು. ಸೌತೆಕಾಯಿ ಮೊದಲಾದ ತಣ್ಣನೆಯ ವಸ್ತುಗಳನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳುವುದು ಕೂಡ ಈ ಋುತುವಿನಲ್ಲಿ ತಾಜಾತನದ ಅನುಭವ ನೀಡುತ್ತದೆ. ವೈದ್ಯರ ಚೀಟಿ ಇಲ್ಲದೆ ಯಾವುದೇ ಡ್ರಾಫ್ಸ್‌ ಅಥವಾ ಔಷಧ ಬಳಕೆಯನ್ನು ಮಾಡುವುದು ಬಹಳ ಅಪಾಯಕಾರಿ.

Leave A Reply

Your email address will not be published.