ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆ | ಚಾಕಲೇಟ್ ನೀಡುವುದಾಗಿ ಕರೆದೊಯ್ದು ಹೀನಾಯ ಕೃತ್ಯ

ನಾಲ್ಕನೇ ತರಗತಿಯ ಬಾಲಕಿಯನ್ನು ವ್ಯಕ್ತಿಯೋರ್ವ ಪುಸಲಾಯಿಸಿ ಕರೆದುಕೊಂಡು ಹೋಗಿ, ಬಾಲಕಿಯ ಮೇಲೆ ಅತ್ಯಾಚಾರ ಮಾಡಿ‌ ಕೊಲೆ ಮಾಡಿದ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ ಆರೋಪಿ ಕಾಂತರಾಜು (52) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹೀನಾಯ ಕೃತ್ಯ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ಮಂಗಳವಾರ ನಡೆದಿದೆ.

ಬಾಲಕಿಯನ್ನು ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಕರೆದೊಯ್ದು ಈ ಕೃತ್ಯ ಮಾಡಲಾಗಿದೆ.

ಈತ ಮಂಗಳವಾರ ಬಾಲಕಿಗೆ ಕರೆ ಮಾಡಿ ಬೆಳಗ್ಗೆ 11 ಗಂಟೆ ಸುಮಾರಿಗೆ ಟ್ಯೂಷನ್‌ಗೆ ಬರುವಂತೆ ತಿಳಿಸಿದ್ದ. ಬಳಿಕ ಆಕೆ ಬಂದಾಗ ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಕರೆದೊಯ್ದು, ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಇತ್ತ ಕಡೆ ಬೆಳಗ್ಗೆ ಟ್ಯೂಷನ್‌ಗೆಂದು ಮನೆಯಿಂದ ಹೋದ ಮಗಳು ಸಂಜೆಯವರೆಗೂ ಮನೆಗೆ ಬಾರದ ಕಾರಣ, ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೋಷಕರು ಆರೋಪಿ ಕಾಂತರಾಜುನನ್ನು ಕೂಡಾ ಕೇಳಿದ್ದಾರೆ. ಆದರೆ ಆತ ನನಗೇನು ಗೊತ್ತಿಲ್ಲ ಎಂದು ಹೇಳಿದ್ದಾನೆ. ಆತ ಕೂಡಾ ಮಗುವಿನ ಹೆತ್ತವರ ಜೊತೆಗೆ ಹುಡುಕಲು ಶುರು ಮಾಡಿದ್ದಾನೆ. ಆದರೆ ಅಲ್ಲೇ ಇದ್ದ ನಿರ್ಮಾಣ ಹಂತದ ಕಟ್ಟಡದ ಸಮೀಪದ ನೀರಿನ ಸಂಪ್‌ನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೋಲಿಸರು, ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಅನುಮಾನದ ಹಿನ್ನಲೆಯಲ್ಲಿ, ಬಾಲಕಿಯ ಶವವನ್ನು ವೈದ್ಯಕೀಯ ಪರೀಕ್ಷೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಅನಂತರ ಕಾಂತರಾಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ.

ಕೂಡಲೇ ಮಳವಳ್ಳಿ ಪಟ್ಟಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಏನೂ ಅರಿಯದ ಮುಗ್ಧ ಮಗುವಿನ ಸಾವಿಗೆ ಇಡೀ ಮಳವಳ್ಳಿಪಟ್ಟಣದ ಜನತೆ ಕಣ್ಣೀರು ಹಾಕಿದೆ. ಹಾಗೂ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕೆಂದು ಪೋಲಿಸರಿಗೆ ಮನವಿ ಮಾಡಿದ್ದಾರೆ.

Leave A Reply

Your email address will not be published.