‘ಕಾಂತಾರ’ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ‘ದೈವ ಆವಾಹನೆ’ ಆಗಿದ್ದು ನಿಜವೇ?

ಜನರು ಕಾತುರದಿಂದ ಕಾಯುತ್ತಿರುವ ಸ್ಯಾಂಡಲ್‌ವುಡ್‌ನ ‘ಕಾಂತಾರ’ ಬಹು ನಿರೀಕ್ಷಿತ ಸಿನಿಮಾವಾಗಿದ್ದು, ಕರಾವಳಿಯ ಅದ್ಭುತ ಕಲಾವಿದ ರಿಷಬ್‌ ಶೆಟ್ಟಿ, ನಟನೆ ಮಾತ್ರವಲ್ಲದೇ, ನಿರ್ದೇಶನದ ಮೂಲಕವೂ ಸೈ ಎನಿಸಿಕೊಂಡಿದ್ದು , ಅವರೇ ನಿರ್ದೇಶಿಸಿರುವ ಬಹುನಿರೀಕ್ಷಿತ ಸಿನಿಮಾ ಇಂದು (ಸಪ್ಟೆಂಬರ್ 30) ರಂದು ತೆರೆ ಕಾಣುತ್ತಿದೆ.

ಜನರ ಮನದಲ್ಲಿ ಹೆಚ್ಚು ನಿರೀಕ್ಷೆ ಹುಟ್ಟು ಹಾಕಿರುವ ‘ಕಾಂತಾರ’ ಸಿನಿಮಾದ ಬುಕ್ಕಿಂಗ್‌ ಭರ್ಜರಿಯಾಗಿ ನಡೆಯುತ್ತಿದೆ. ಮೊತ್ತ ಮೊದಲ ಬಾರಿಗೆ ರಿಷಬ್ ಶೆಟ್ಟಿಯ ‘ಕಾಂತಾರ’ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಮಾಡಿದ್ದು, ಈ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ‘ಕಾಂತಾರ’ ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿಯ ಜೊತೆ ನಾಯಕಿಯಾಗಿ ಸಪ್ತಮಿ ಗೌಡ ತೆರೆ ಹಂಚಿಕೊಂಡಿದ್ದಾರೆ.

ಕರಾವಳಿಯ ಜನ ಬಲವಾಗಿ ನಂಬುವ ಭೂತಾರಾಧನೆ ಜೊತೆಗೆ ಕರಾವಳಿಯ ಜನರ ಅವಿಭಾಜ್ಯ ಭಾಗವಾಗಿರುವ ಕಂಬಳವನ್ನು ತೋರಿಸಲಾಗಿದೆ. ರಿಷಬ್ ಶೆಟ್ಟಿ ಭೂತಾರಾಧನೆಯ ವೇಷದಾರಿ ಯಾಗಿ ಮಿಂಚಿದ್ದ ಪೋಸ್ಟರ್ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಕರಾವಳಿಯ ಜನ ದೈವಿಕ ಶಕ್ತಿ, ಆಚರಣೆಗಳನ್ನು ಶ್ರದ್ಧೆ ಭಕ್ತಿಯಿಂದ ಪಾಲಿಸುವುದು ತಿಳಿದ ವಿಚಾರ. ಪವಿತ್ರ ಆರಾಧನೆಯಾಗಿರುವ ಭೂತಾರಾಧನೆಯ ಚಿತ್ರೀಕರಣದ ಸಮಯದಲ್ಲಿ ರಿಷಬ್‌ ಶೆಟ್ಟಿ ಅವರಿಗಾದ ವಿಶೇಷ ಅನುಭವವನ್ನು ಹಂಚಿಕೊಂಡಿದ್ದಾರೆ.

ನನಗಾದ ಅನುಭವ ನನಗಷ್ಟೇ ಇರಲಿ ಎಂದಿರುವ ಕರಾವಳಿಯ ಬಹುಮುಖ ಪ್ರತಿಭೆ ರಿಷಬ್‌ ಸಂದರ್ಶನ ವೊಂದರಲ್ಲಿ ಹೇಳಿದ್ದಾರೆ. ದೈವಾರಾಧನೆ ಎನ್ನುವುದು ಅದು ಮಾತಿಗೆ ನಿಲುಕದ್ದು. ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ಆಚರಣೆಯಂತೆ ದೇವರನ್ನು ನಂಬುವಂತೆ ದೈವಗಳನ್ನು ಪೂಜಿಸುವ, ಹರಕೆ ಹೊರುವ ಪರಿಪಾಠವಿದ್ದೂ, ಹಿರಿಯರ ಮಾರ್ಗ ದರ್ಶನದಂತೆ ನಾವು ಕ್ರಮಪ್ರಕಾರ ನಡೆಸಿಕೊಂಡು ಬರುತ್ತಿರುವುದಲ್ಲದೆ, ಮುಂದಿನ ಪೀಳಿಗೆಯು ಕೂಡ ಇದೇ ಅದರ್ಶದ ಹಾದಿಯಲ್ಲಿ ಸಾಗಲು ಅನುವು ಮಾಡಿಕೊಡುತ್ತದೆ. ಇದೇ ಸಂದರ್ಭದಲ್ಲಿ ನನಗಾದ ಅನುಭವ ನನಗಷ್ಟೇ ಇರಲಿ, ಬಾಯಿ ಮಾತಿನಿಂದ ಹೇಳಲು ಇಷ್ಟಪಡಲ್ಲ ಎಂದಿದ್ದಾರೆ.

ನಮ್ಮ ಹಿಂದೂ ಆಚರಣೆಗಳಿಗೆ ಅದರದ್ದೇ ಆದ ಮಹತ್ವವಿದೆ ಜೊತೆಗೆ ಹಿಂದಿನ ತಲೆಮಾರಿನವರು ಪಾಲಿಸಿಕೊಂಡು ಬಂದಿರುವ ಆಚರಣೆಗಳು ಸಂಸ್ಕೃತಿಯ ಪ್ರತಿಬಿಂಬವಾಗಿದ್ದು ಇದರ ಬಗ್ಗೆ ಎಲ್ಲರಿಗೂ ತಿಳಿದಿರಬೇಕಾದ ಆವಶ್ಯಕತೆ ಇದೆ. ಯಕ್ಷಗಾನದಿಂದ ತಾನು ಸಾಕಷ್ಟು ಬದುಕಿನ ಪಾಠ ಕಲಿತಿದ್ದು, ರಾಮಾಯಣದ ಕಥೆಗಳ ಬಗ್ಗೆ ಹೆಚ್ಚಾಗಿ ಯಕ್ಷಗಾನದಿಂದ ತಿಳಿದಿದ್ದೇನೆ ಅಲ್ಲದೆ, ನಾವು ಬದುಕಿನ ಉತ್ತಮ ವಿಚಾರಗಳನ್ನು ಅನುಸರಿಸುವುದರ ಜೊತೆಗೆ ಮುಂದಿನ ಪೀಳಿಗೆಗೂ ಅನ್ವಯವಾಗುವಂತೆ ವಿಚಾರಗಳನ್ನೂ ಪಸರಿಸಬೇಕು ಎಂಬ ಕಿವಿಮಾತು ನೀಡಿದ್ದಾರೆ.

Leave A Reply

Your email address will not be published.