ಪಕ್ಕದ್ಮನೆ ಹುಡುಗಿ ಜೊತೆ ಓಡಿಹೋದ ಯುವಕ | ಮಗ ಪ್ರೀತಿ ಮಾಡಿದ್ದಕ್ಕೆ ತಂದೆಗೆ ಶಿಕ್ಷೆ

ಇಲ್ಲೊಂದು ಕಡೆ ‘ಚೆಲುವಿನ ಚಿತ್ತಾರ’ ಸಿನಿಮಾದ ಲವ್ ಸ್ಟೋರಿ ನಡೆದಿದ್ದು, ಇದರ ಶಿಕ್ಷೆಯ ಫಲ ತಂದೆಗೆ ದೊರಕಿದೆ. ಮಗ ಲವ್ ಮಾಡಿ ಓಡಿಹೋಗಿದ್ದಕ್ಕೆ ಮನೆಯವರು ಇಲ್ಲಿ ಶಿಕ್ಷೆ ಅನುಭವಿಸಿದ್ದಾರೆ. ಮನೆಯವರ ವಿರೋಧದಿಂದ‌ ಓಡಿ ಹೋದ ಜೋಡಿಗಳ ಹೆಸರೇ ಅಮರ್ ಮತ್ತು ಅರ್ಚನಾ.

ಹೌದು, ಮಗನ ಮೇಲಿನ ಸಿಟ್ಟಿಗೆ ತಂದೆ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಅಷ್ಟು ಮಾತ್ರವಲ್ಲ. ಇವರನ್ನು ಹೆದರಿಸಿ ಬೆದರಿಸಿ ಇವರೆಲ್ಲರ ಆಸ್ತಿಯನ್ನೂ ತಮ್ಮ ಹೆಸರಿಗೆ ಮಾಡ ಯತ್ನವು ನಡೆದಿದೆ. ಇಷ್ಟೆಲ್ಲಕ್ಕೆ ಮೂಲ ಕಾರಣವೇ ಇವರ ಮಗನ ಲವ್ ಸ್ಟೋರಿ. ಪಕ್ಕದ ಮನೆಯ ಅರ್ಚನಾಳನ್ನು ಪ್ರೀತಿಸಿದ ಅಮರ್ ಆಕೆಯೊಂದಿಗೆ ಓಡಿ ಹೋಗಿದ್ದೇ ಯುವಕನ ತಂದೆ ತಾಯಿಗೆ ಈ ಪಾಡು ಬಂದಿದೆ.

ಪೆಟ್ಟು ತಿಂದ ತಂದೆಯ ಹೆಸರು ಗೋರಖನಾಥ ಚೌವ್ಹಾಣ್. ವಿಜಯಪುರ ತಾಲೂಕಿನ ಜಾಳಗೇರಿ ಗ್ರಾಮದ ನಿವಾಸಿ. ಸೆಪ್ಟೆಂಬರ್ 11 ಶನಿವಾರ ಇದ್ದಕ್ಕಿದ್ದಂತೆ ಪಕ್ಕದ ಮನೆಯ ಬಾಬು ಪವಾರ್ ಹಾಗೂ ಇತರರು ಬಂದು, ಇವರ ಮೇಲೆ ಏಕಾ ಏಕಿ ಹಲ್ಲೆ ಮಾಡಿದ್ದಾರೆ. ಯಾಕೆ ಹಲ್ಲೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರೂ ಕೇಳದೆ ಚೆನ್ನಾಗಿ ಬಾರಿಸಿದ್ದಾರೆ. .

ಓಡಿ ಹೋದ ಹುಡುಗನ ತಂದೆಯನ್ನು ಗ್ರಾಮದ ಹೊರ ಭಾಗದ ಬಯಲಿಗೆ ಎಳೆದುಕೊಂಡು ಹೋಗಿ, ಅಲ್ಲಿ ಕೈ ಕಾಲು ಕಟ್ಟಿ ಥೆಟ್ ಬಿಹಾರ್ ಸ್ಟೈಲ್‌ನಲ್ಲಿ ಕ್ರೂಸರ್ ವಾಹನಕ್ಕೆ ಕಟ್ಟಿ ಎಳೆದಿದ್ದಾರೆ. ಸುಮಾರು 20 ರಿಂದ 30 ಮೀಟರ್ ವರೆಗೂ ಗೋರಖನಾಥ್ ನನ್ನು ಕ್ರೂಸರ್ ವಾಹನಕ್ಕೆ ಕಟ್ಟಿ ಎಳೆದಿದ್ದಾರೆ. ಅಷ್ಟು ಮಾತ್ರವಲ್ಲದೇ ಆತನ ಪತ್ನಿ ಕವಿತಾ ಹಾಗೂ ಮತ್ತೋರ್ವ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಸತಾಯಿಸಿದ್ದಾರೆ

ಇಷ್ಟು ಮಾಡಿ ಕೂಡಾ ಯುವತಿ ಕುಟುಂಬದವರಿಗೆ ಸಮಾಧಾನ ಆಗಿಲ್ಲ. ನಮ್ಮ ಮಗಳನ್ನು ನಿಮ್ಮ ಮಗಾ ಓಡಿಸಿಕೊಂಡು ಹೋಗಿದ್ದಾನೆ.‌ ಹಾಗಾಗಿ ನಿಮ್ಮ ಹೆಸರಿನಲ್ಲಿರೋ ನಾಲ್ಕೂವರೆ ಎಕರೆ ಜಮೀನನ್ನು ನಮ್ಮ ಹೆಸರಿಗೆ ಮಾಡಿಕೊಡಬೇಕೆಂದು, ಜೀವಕ್ಕಿಂತ ಆಸ್ತಿ ದೊಡ್ಡದಲ್ಲಾ ಎಂದು ಹೆದರಿದ ಇವರು ತಮ್ಮ ಜಮೀನನನ್ನು ಅರ್ಚನಾಳ ತಂದೆ ಬಾಬು ಪವಾರ್ ಹೆಸರಿಗೆ ಮಾಡಿಕೊಡಲು ಒಪ್ಪಿ ವಿಜಯಪುರ ನಗರದಲ್ಲಿನ ಸಬ್ ರೆಜಿಸ್ಟ್ರಾರ್ ಕಚೇರಿಗೂ ಬಂದಿದ್ದಾರೆ. ಅಲ್ಲೂ ಇವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಳಿಲ್ಲ.

ಆದರೆ, ಜಮೀನಿನ ಮೇಲೆ ಬ್ಯಾಂಕ್ ಸಾಲದ ಭೋಜಾ ಇದ್ದ ಕಾರಣ ಇವರ ಜಮೀನು ಬಾಬು ಪವಾರ್ ಹೆಸರಿಗೆ ವರ್ಗಾವಣೆ ಆಗಿಲ್ಲಾ. ಇದಾದ ಬಳಿಕ ಜೀವ ಭಯದಿಂದ ಮನೆಯನ್ನೇ ಬಿಟ್ಟು ಗೋರಖನಾಥ ಹಾಗೂ ಕವಿತಾ ಬಂದು ಬಿಟ್ಟಿದ್ದಾರೆ. ಅತ್ತ ಕಡೆ ಓಡಿ ಜೋಡಿ ಸ್ನೇಹಿತರ ಮೂಲಕ ತಂದೆ ತಾಯಿಯರ ಮೇಲೆ ಹಲ್ಲೆ ನಡೆದ ವಿಷಯ ತಿಳಿದು, ಅಜ್ಞಾತ ಸ್ಥಳದಿಂದ ವೀಡಿಯೋ ಮಾಡಿದ್ದಾರೆ.

ನಮ್ಮ ತಂದೆ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ಅವರನ್ನು ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ. ನಾನು ಮನಸಾರೆ ಅಮರ್ ನನ್ನು ಪ್ರೀತಿಸುತ್ತಿದ್ದೇನೆ. ನಾನಾಗಿಯೇ ಆತನೊಂದಿಗೆ ಮನೆ ಬಿಟ್ಟು ಓಡಿ ಬಂದಿದ್ದೇನೆ. ನಮ್ಮ ಮನೆಯಲ್ಲಿ ನನಗೆ ಮದುವೆ ಮಾಡುವ ವಿಚಾರ ಮಾಡುತ್ತಿದ್ದರು. ಆದ ಕಾರಣ ನಾನು ಪ್ರೀತಿಸಿದ ಹುಡುಗನ ಜೊತೆಗೆ ಬಂದಿದ್ದೇನೆ ಎಂದು ವೀಡಿಯೋದಲ್ಲಿ ಅರ್ಚನಾ ಹೇಳಿದ್ದಾಳೆ.

ಇತ್ತ ಕಡೆ ನಮ್ಮ ಮೇಲೆ ಹಲ್ಲೆ ಮಾಡಿದ, ಅರ್ಚನಾಳ ತಂದೆ ಹಾಗೂ ಇತರರು ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಹಾಗೂ ಸೂಕ್ತ ರಕ್ಷಣೆ ಬೇಕೆಂದು ಒತ್ತಾಯ ಮಾಡಿದ್ದಾರೆ ಈ ಹುಡುಗನ ತಂದೆ ತಾಯಿ.

Leave A Reply

Your email address will not be published.