“ನನಗೆ ಬದುಕಲ್ಲಿ ಯಾಕೆ ಈ ರೀತಿ ಅನ್ಯಾಯ ಆಗ್ತಿದೆ, ಇದು ನನ್ನ ಪೂರ್ವ ಜನ್ಮದ ಪಾಪದ ಫಲವಾ?” – ಸದ್ಗುರು ಜೊತೆ ನಟಿ ಸಮಂತಾ ಬಿಚ್ಚುಮಾತು
ಸಮಂತಾ ರುತ್ ಪ್ರಭು ಇತ್ತೀಚೆಗೆ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಅದು ಕೂಡಾ ಹೆಚ್ಚಾಗಿ ಪರ್ಸನಲ್ ವಿಷಯಕ್ಕೆ ಸಂಬಂಧಪಟ್ಟಕ್ಕೆ. ಅಕ್ಕಿನೇನಿ ಕುಟುಂಬದ ನಾಗ ಚೈತನ್ಯ ಜೊತೆಗೆ ಪ್ರೀತಿಸಿ ಮದುವೆಯಾದ ಮೇಲೆ ಯಾಕೋ ಪ್ರೀತಿ ಮಾಡುವಾಗ ಇದ್ದ ಮಾತುಗಳೆಲ್ಲ ನಗಣ್ಯವಾಗ ತೊಡಗಿತೇನೋ ? ಆದರೆ ಒಂದು ದಿನ ಈ ಚಂದದ ಜೋಡಿ ಒಮ್ಮೆಲೇ, ಏನೂ ಕಾರಣ ಹೇಳದೇ ಬಹಳ ಬೇಗ ನಾಲ್ಕು ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿತು. ಇವರ ವಿಚ್ಛೇದನಕ್ಕೆ ಅದು ಕಾರಣ, ಇದು ಕಾರಣ ಅಂತೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು, ಜಗಳಗಳು ಆದರೂ ನಿಜವಾದ ಕಾರಣ ಏನು ಅಂತ ಇಲ್ಲಿಯವರೆಗೆ ಗೊತ್ತಾಗಲಿಲ್ಲ.
ಇದಾದ ನಂತರ ನೆಟ್ಟಿಗರ ಚುಚ್ಚು ಮಾತುಗಳಿಂದ ಸಿಟ್ಟುಗೊಂಡ ಸಮಂತಾ, ಅಂತವರ ವಿರುದ್ಧ ಕೋರ್ಟಿಗೆ ಕೂಡ ಹೋಗಿದ್ದರು. ಇದೆಲ್ಲ ಆಗಿ ವರ್ಷವಾಗುತ್ತಾ ಬಂದಿದೆ. ಆದರೆ ಈಗ ಸಮಂತಾ ಅವರೇ ತಮ್ಮ ಪರ್ಸನಲ್ ಬದುಕಿನ ನೋವಿನ ಬಗ್ಗೆ ಸದ್ಗುರು ಅವರಿಗೆ ನೇರ ಪ್ರಶ್ನೆ ಕೇಳಿದ್ದಾರೆ. “ನನಗೆ ಬದುಕಲ್ಲಿ ಯಾಕೆ ಈ ರೀತಿ ಅನ್ಯಾಯ ಆಗ್ತಿದೆ, ಇದು ನನ್ನ ಪೂರ್ವ ಜನ್ಮದ ಪಾಪದ ಫಲವಾ “ಅನ್ನುವ ಪ್ರಶ್ನೆ ಕೇಳಿದ್ದಾರೆ.
ಈ ಪ್ರಶ್ನೆ ಈಗ ಸಾಮಾಜಿಕ ಜಾಲತಾಣದ ಒಂದು ವಲಯದಲ್ಲಿ ಭಾರೀ ವೈರಲ್ ಆಗಿದೆ. ಈ ಪ್ರಶ್ನೆನಾ ಸಮಂತಾ ನಗುತ್ತಾ ಕೇಳಿದರೂ ಇದನ್ನು ಕೇಳುವಾಗ ಮನಸ್ಸಿನೊಳಗಿದ್ದ, ನೋವು (Pain), ವಿಷಾದ ಹಾಗೇ ಮುಖದಲ್ಲಿ ಕಾಣಿಸಿಕೊಂಡಿದೆ. ಇದು ಅವರ ಅಭಿಮಾನಿಗಳನ್ನು ತಲ್ಲಣಗೊಳಿಸಿದೆ.
ಸಮಂತಾ ಅವರ ಈ ಮಾತಿಗೆ ಸದ್ಗುರು ಸಮಾಧಾನ ನೀಡುವಂಥಾ ಉತ್ತರ ಕೊಟ್ಟಿದ್ದಾರೆ. ಜಗತ್ತನ್ನು ನಾವು ಹೇಗೆ ನೋಡ್ತವೆ ಅನ್ನೋದು ಇಲ್ಲಿ ಮುಖ್ಯವಾಗುತ್ತದೆ. ಇಲ್ಲಿ ನಮ್ಮ ನೋಡುವ ದೃಷ್ಟಿ ಮುಖ್ಯವಾಗುತ್ತದೆಯೇ ಹೊರತು, ಉರಿವ ಸೂರ್ಯ (Sun), ಬೀಸುವ ಗಾಳಿ (Air) ಎಲ್ಲರಿಗೂ ಒಂದೇ ಆಗಿರುತ್ತದೆ. ನಮ್ಮ ದೃಷ್ಟಿಕೋನಗಳಿಂದ (Vision) ನಮಗೆ ಖುಷಿಯಾ, ನೋವಾ ಅನ್ನೋದು ನಿರ್ಧರಿತವಾಗುತ್ತದೆ. ಜಗತ್ತನ್ನು ಭಾವನೆ, ಯೋಚನೆ ಬೆರೆಸದೇ ನೋಡಿದರೆ ಅದು ಸುಂದರವಾಗಿಯೇ ಕಾಣುತ್ತದೆ. ಆಗ ನಮ್ಮ ಬದುಕೂ (Life) ಸುಂದರವಾಗುತ್ತದೆ ಎಂಬಂಥಾ ಅಧ್ಯಾತ್ಮ (Spirituality)ದ ಮಾತಿನಿಂದ ಸಮಂತಾ ಅವರ ಮನಸ್ಸಿನಲ್ಲಿ ಹರಿದಾಡುತ್ತಿದ್ದ ಗೊಂದಲಕ್ಕೆ ಉತ್ತರ ನೀಡಿದ್ದಾರೆ.
ಆದರೂ ಸಮಂತಾ ಕೇಳಿರುವ ಈ ಪ್ರಶ್ನೆ ನೋಡಿ, ಅವರಿನ್ನೂ ಹಳೆಯ ನೋವಿನಿಂದ ಹೊರಬಂದಿಲ್ವಾ, ನಾಗ ಚೈತನ್ಯ ಅವರಿಂದ ಬೇರ್ಪಟ್ಟ ನೋವು ಇನ್ನೂ ಅವರನ್ನು ಕಾಡುತ್ತಾ ಇದೆಯಾ ಅಂತ ಜನ ಮಾತಾಡಿಕೊಳ್ತಿರುವುದಂತೂ ಸುಳ್ಳಲ್ಲ.