ಕಾಲೇಜು ಮುಂಭಾಗವೇ ಚಾಕುವಿನಿಂದ ಇರಿದು ವಿದ್ಯಾರ್ಥಿಯ ಕೊಲೆ | ಆರೋಪಿಗಳ ಬಂಧನ

ಕಾಲೇಜು ಫೆಸ್ಟ್ ನಲ್ಲಿ ಉಂಟಾದ ಕಿರಿಕ್ ನಿಂದ ಪಿಯುಸಿ ವಿದ್ಯಾರ್ಥಿ ಅರ್ಬಾಜ್ ( 18) ನನ್ನು ‘ಪೆನ್ ಚಾಕು’ ವಿನಿಂದ ಇರಿದು ಕೊಂದಿದ್ದ ಆರು ಮಂದಿಯನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಿ.ಕಾಂ ವಿದ್ಯಾರ್ಥಿ ಮೊಹಮ್ಮದ್ ಸಾದ್ ( 20), ಸಫಾನುಲ್ಲಾ ಖಾನ್ ( 20), ಜೈನುಲ್ಲಾ ಖಾನ್ ( 19), ಸೈಯದ್ ಫೈಸಲ್ ( 19), ಅನಾಸ್ ಖಾನ್ ( 20), ಜೈದ್ ಖಾನ್ (20) ಬಂಧಿತ ಆರೋಪಿಗಳು.

ಎಚ್ ಬಿ ಆರ್ ಲೇಔಟ್ ನ ಪ್ರಾವಿನ್ಸ್ ಕಾಲೇಜಿನ ವಿದ್ಯಾರ್ಥಿ ಅರ್ಬಾಜ್ ನನ್ನು ಆ.12 ರಂದು ಕಾಲೇಜು ಮುಂಭಾಗವೇ ಆರೋಪಿ ಮೊಹಮ್ಮದ್‌ ಸಾದ್ ಹಾಗೂ ಇತರ ಆರೋಪಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಆ.11 ರಂದು ಕಾಲೇಜಿನಲ್ಲಿ ನಡೆದ ಫೆಸ್ಟ್ ನಲ್ಲಿ ಅರ್ಬಾಜ್ , ಹಾಡೊಂದಕ್ಕೆ ನೃತ್ಯ ಮಾಡುತ್ತಿದ್ದ ವೇಳೆ ಸಾದ್ ಅಣಕಿಸಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಮಾರನೇ ದಿನ ಸಾದ್ ತನ್ನ ಸಹಚರ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಬಂದು ಮಾತನಾಡುವ ನೆಪದಲ್ಲಿ ಅರ್ಬಾಜ್ ನನ್ನು ಇರಿದು ಕೊಲೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.