ಬಡ ವ್ಯಾಪಾರಿಯ ಕೊಲೆಗೆ ಕಾರಣವಾಯಿತೇ ಆ ಟ್ರ್ಯಾಕ್ಟರ್

ಜೈಪುರ: ತರಕಾರಿ ವ್ಯಾಪಾರಿಯೊಬ್ಬನನ್ನು ಟ್ರ್ಯಾಕ್ಟರ್ ಕಳ್ಳನೆಂದು ತಿಳಿದ ಗುಂಪೊಂದು ಆತನನ್ನು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ.

ರಾಜಸ್ಥಾನದ ಜೈಪುರದ ಗೋವಿಂದಗಢ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಚಿರಂಜಿ ಸೈನಿ (45) ಎಂದು ಗುರುತಿಸಲಾಗಿದೆ.

ಇಲ್ಲಿನ ರಾಂಬಾಸ್ ಎಂಬ ಗ್ರಾಮದಲ್ಲಿ ಟ್ರ್ಯಾಕ್ಟರ್ ಒಂದು ಕಳುವಾಗಿತ್ತು. ಈ ವಿಚಾರವಾಗಿ ಪೋಲಿಸ್ ಸಿಬ್ಬಂದಿಗಳು ಮತ್ತು ಟ್ರ್ಯಾಕ್ಟರ್ ಮಾಲಿಕರು ಕಳ್ಳನನ್ನು ಹಿಡಿಯಲು ಬೆನ್ನಟ್ಟಿದರು. ಆದರೆ, ಆ ಕಳ್ಳ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾನೆ. ಅದೇ ಸಂದರ್ಭದಲ್ಲಿ ತರಕಾರಿ ವ್ಯಾಪಾರಿ ಚಿರಂಜಿ ಅದೇ ಸ್ಥಳಕ್ಕೆ ಬಂದಿದ್ದರು. ಟ್ರ್ಯಾಕ್ಟರ್ ಮಾಲಿಕ ಚಿರಂಜಿಯನ್ನೇ ಕಳ್ಳ ಎಂದು ತಿಳಿದು, ಬಳಿಕ ತನ್ನ ಕಡೆಯವರೊಂದಿಗೆ ಸೇರಿ ಚಿರಂಜಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

 ಅದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಆತ ಕಳ್ಳ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಗಂಭೀರ ಗಾಯಗೊಂಡ ಚಿರಂಜಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಜೈಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಚಿರಂಜಿಯವರು ಮೃತಪಟ್ಟಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಚಿರಂಜಿ ಸೈನಿ ಅವರ ಮಗ ಯೋಗೀಶ್ ಸೈನಿ ಟ್ರ್ಯಾಕ್ಟರ್ ಮಾಲಿಕನ ವಿರುದ್ಧ ಗೋವಿಂದಗಢ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

Leave A Reply

Your email address will not be published.