‘SC-ST’ ಸಮುದಾಯಕ್ಕೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಶೀಘ್ರವೇ ವಸತಿ ಸೌಲಭ್ಯ
ನಿವೇಶನ ಹಾಗೂ ವಸತಿ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮಾಹಿತಿ ಸಂಗ್ರಹಿಸಿ ಶೀಘ್ರವೇ ಸಲ್ಲಿಕೆ ಮಾಡಲು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು, ಮನೆ ಇಲ್ಲದ ಹಾಗೂ ನಿವೇಶನ ಇಲ್ಲದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಇನ್ನಾರು ತಿಂಗಳೊಳಗಾಗಿ ನಿವೇಶ ಹಾಗೂ ವಸತಿ ಕಲ್ಪಿಸಲು ಸರ್ಕಾರ ಉದ್ದೇಶಿಸಿದೆ. ಈ ಕುರಿತಂತೆ ಪ್ರಾಯೋಗಿಕವಾಗಿ ಹಾವೇರಿ, ಚಿತ್ರದುರ್ಗ, ಚಾಮರಾಜನಗರ ಹಾಗೂ ಕಲಬುರ್ಗಿಯಲ್ಲಿ ವಸತಿ, ನಿವೇಶನ ರಹಿತ ಸಮೀಕ್ಷೆಯನ್ನು ಕೈಗೊಂಡಿದೆ. ತ್ವರಿತವಾಗಿ ಸರ್ವೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಭೂ ಒಡೆತನ ಸೇರಿದಂತೆ ವಿವಿಧ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಬಡವರಿಗೆ ಈ ಯೋಜನೆಗಳನ್ನು ತಲುಪಿಸಲು ಆದ್ಯತೆ ನೀಡಬೇಕು. ಈ ವರ್ಗದ ಯೋಜನೆಗಳ ಅನುಷ್ಠಾನದಲ್ಲಿ ವಿನಾಕಾರಣ ವಿಳಂಬ ಹಾಗೂ ಗೊಂದಲಗಳನ್ನು ಮಾಡಿಕೊಳ್ಳದೆ ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಬಡವರ ಆರ್ಥಿಕ ಬದಲಾವಣೆಗೆ ಸಹಾಯಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಉದ್ಯೋಗಖಾತ್ರಿ ಯೋಜನೆ, ಕೌಶಲ್ಯ ಅಭಿವೃದ್ಧಿ ಯೋಜನೆ, ಸಾಂಸ್ಕಂತಿಕ ಕಾರ್ಯಕ್ರಮಗಳು, ಶಿಕ್ಷಣ, ವಸತಿ, ಕ್ರೀಡೆ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದರು.