ತಾಕತ್ತಿದ್ದರೆ ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿ ನೋಡಿ ಎಂದ ನಳಿನ್ ಕಟೀಲ್ ಹಳೆ ವೀಡಿಯೋ ವೈರಲ್ !

ಮಂಗಳೂರು: ಬಿಜೆಪಿಯ ಕಾರ್ಯಕರ್ತ ಪ್ರವೀಣ್ ಹತ್ಯೆ ಆಗಿ ಎಷ್ಟೇ ಸಮಯವಾದರೂ ಯಾವುದೇ ಜನ ಪ್ರತಿನಿಧಿ ಸ್ಥಳಕ್ಕೆ ಬಂದಿರಲಿಲ್ಲ. ಆದರೆ ಯಾವಾಗ ನಿನ್ನೆ ಮಧ್ಯಾಹ್ನದ ಸಮಯಕ್ಕೆ ನಳಿನ್ ಕುಮಾರ್ ಕಟೀಲ್ ತಮ್ಮ ಕಾರಲ್ಲಿ ಬಂದರೋ ಆವಾಗ ಜನ ಕೆರಳಿದ ರೀತಿ ನೋಡಿ ಬಹುಶಃ ಎಲ್ಲಾ ಜನಪ್ರತಿನಿಧಿಗಳ ಮನಸ್ಸಲ್ಲಿ ನಡುಕ ಮೂಡಿಸದೇ ಇರದು.

ಇಂತಿಪ್ಪ ನಳಿನ್ ಕುಮಾರ್ ಕಟೀಲ್ ಅವರ ಒಂದು ವೀಡಿಯೋ ಈ ಹತ್ಯೆಯ ನಂತರ ಭಾರೀ ವೈರಲ್ ಆಗ್ತಿದೆ. ಈ ವೀಡಿಯೋ ಸಾರಾಂಶ ಏನೆಂದರೆ,
“ತಾಕತ್ತಿದ್ದರೆ ನಮ್ಮ ಜಿಲ್ಲೆಯ ಒಬ್ಬನೇ ಒಬ್ಬ ಬಿಜೆಪಿ ಕಾರ್ಯಕರ್ತನ ಮೈ ಮುಟ್ಟಿ ನೋಡಿ, ಇದಕ್ಕೆ ಬಿಜೆಪಿ ತಕ್ಕ ಪಾಠ ಕಲಿಸುತ್ತದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆವೇಶದಲ್ಲಿ ಹೇಳಿಕೆ ನೀಡಿದ್ದ ಹಳೇ ವೀಡಿಯೋ ಇದೀಗ ವೈರಲ್ ಆಗಿದೆ.

“ನಾನು ಕರಾವಳಿ ಜಿಲ್ಲೆಯಲ್ಲಿ ಹೋರಾಟ ಮಾಡಿ ಬಂದವ. ನಮ್ಮ ಜಿಲ್ಲೆಯಲ್ಲಿ ತಾಕತ್ತಿದ್ದರೆ ಒಬ್ಬನೇ ಒಬ್ಬ ಬಿಜೆಪಿ ಕಾರ್ಯಕರ್ತನ ಮೈ ಮುಟ್ಟಿ ನೋಡಿ, ಬಿಜೆಪಿ ಇದಕ್ಕೆ ತಕ್ಕ ಪಾಠ ಕಲಿಸುತ್ತದೆ. ಯಾರೇ ಒಬ್ಬ ಕಾರ್ಯಕರ್ತ ಇದಕ್ಕೆ ಹೆದರುವ ಅವಶ್ಯಕತೆಯಿಲ್ಲ ಎಂದು ನಳಿನ್ ಕುಮಾರ್ ಈ ಹಿಂದೆ ಶಪಥ ಮಾಡಿದ್ದರು.

ಬಹುಶಃ ಈ ಹೇಳಿಕೆ ಕೇವಲ ವೀರಾವೇಶಕ್ಕೆ ಸೀಮಿತ ಎಂಬುದು ಎಲ್ಲರಿಗೂ ನಿನ್ನೆ ತಿಳಿಯಿತು. ಪ್ರವೀಣ್ ನಟ್ಟಾರು ಅವರ ಹತ್ಯೆಯ ಬಳಿಕ ರಾಜ್ಯದ ಎಲ್ಲಾ ಜನತೆಗೆ ಈ ರಾಜಕಾರಣಗಳ ಒಳ ಮರ್ಮ ಯಾವುದಕ್ಕೆ ಸೀಮಿತ ಎಂಬ ಸತ್ಯಾಂಶ ಅರಿವಾಗಿದೆ ಎಂದೇ ತಿಳಿಯೋಣ. ಆದರೂ ಈ ಹೇಳಿಕೆ ನಿಜವಾಗಿದ್ದರೆ ಇದೀಗ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಬಿಜೆಪಿ ಯುವ ಮೋರ್ಚದ ಪ್ರವೀಣ್ ಹತ್ಯೆ ನಡೆದಿದೆ, ಹಾಗಾದರೆ ನಳಿನ್ ಕುಮಾರ್ ಮಾತಿನಂತೆ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುತ್ತಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

Leave A Reply

Your email address will not be published.