ಕೇಂದ್ರ ಸರ್ಕಾರಿ ನೌಕರರಿಗೆ ಶಾಕ್, ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ನಿಯಮಗಳಲ್ಲಿ ಬದಲಾವಣೆ

ನವದೆಹಲಿ: ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ನಿಯಮಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಶಾಕ್ ನೀಡಿದ್ದಾರೆ.

ಕರ್ತವ್ಯದಲ್ಲಿ ಇದ್ದಾಗಲೇ ಉದ್ಯೋಗಿ ಅಸುನೀಗಿದ ಸಂದರ್ಭದಲ್ಲಿ ಆತನ ಪತ್ನಿ, ಪುತ್ರ, ಅಥವಾ ಪುತ್ರಿಗೆ ಅನುಕಂಪದ ಆಧಾರದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗ ಸಿಗುತ್ತಿತ್ತು. ಮುಂದಿನ ದಿನಗಳಲ್ಲಿ ಹೆಚ್ಚು ಪಾರದರ್ಶಕವಾಗಿರುವ ನಿಯಮಗಳು ಜಾರಿಯಾಗಲಿವೆ.

ಕೇಂದ್ರ ಸರ್ಕಾರಿ ನೌಕರನ ಕುಟುಂಬ ಹೊಂದಿರುವ ವಿತ್ತೀಯ ಸ್ಥಿತಿ, ಸದ್ಯ ದುಡಿಯುತ್ತಿರುವ ಸದಸ್ಯರ ಸಂಖ್ಯೆ, ಕುಟುಂಬದಲ್ಲಿ ಅವಲಂಬಿತರ ಸಂಖ್ಯೆ, ಮಕ್ಕಳ ವಯಸ್ಸು ಇದನ್ನೆಲ್ಲ ಸಮಗ್ರವಾಗಿ ಪರಿಶೀಲನೆ ನಡೆಸಿ ನಿಗದಿತ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ನೌಕರಿ ನೀಡಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪರಿಷ್ಕೃತ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ಈವರೆಗೆ, ಮೃತ ಪುರುಷ ವಿವಾಹಿತ ನೌಕರನಾಗಿದ್ದರೆ ಆತನ ಮೇಲೆ ಅವಲಂಬಿತರಾಗಿದ್ದ ಆತನ ವಿಧವಾ ಪತ್ನಿ, ಮಗ ಮತ್ತು ಮಗಳು ಉದ್ಯೋಗ ಪಡೆಯಲು ಅರ್ಹರಾಗಿದ್ದರು. ಒಂದು ವೇಳೆ ಮೃತನ ಪತ್ನಿಯು ನೇಮಕಾತಿಗೆ ಅರ್ಹಳಲ್ಲದಿದ್ದರೆ ಅವರು ಸೂಚಿಸಿದ ಮಗ ಅಥವಾ ಮಗಳನ್ನು ನೇಮಕಾತಿ ಮಾಡಬಹುದಾಗಿತ್ತು.

ಮಹಿಳಾ ಉದ್ಯೋಗಿ ವಿವಾಹಿತೆಯಾಗಿದ್ದು ಮೃತಪಟ್ಟರೆ ಆಕೆಯ ಮೇಲೆ ಅವಲಂಬಿತರಾಗಿದ್ದ ಆಕೆಯ ಮಗ, ಮಗಳು ಅಥವಾ ಪತಿಯು ಅರ್ಹರಾಗಿರುತ್ತಿದ್ದರು. ಅವಿವಾಹಿತೆಯಾಗಿದ್ದರೆ ಆಕೆಯೊಂದಿಗೆ ವಾಸವಿದ್ದ ಸಹೋದರ ಅಥವಾ ಸಹೋದರಿ ಅರ್ಹರಾಗುತ್ತಿದ್ದರು.

ಮೃತ ನೌಕರರ ಪತಿ ಅಥವಾ ಪತ್ನಿ ಈಗಾಗಲೇ ನಿಧನರಾಗಿದ್ದು ಮಕ್ಕಳು ಅಪ್ರಾಪ್ತರಾಗಿದ್ದರೆ 2 ವರ್ಷದೊಳಗೆ 18 ವರ್ಷ ಪೂರೈಸುವವರಿಗೆ ಅವಕಾಶ ನೀಡುತ್ತಿದ್ದು, 18 ವರ್ಷ ತುಂಬಿದ ಬಳಿಕ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಲು ಎರಡು ವರ್ಷ ಕಾಲಾವಕಾಶ ನೀಡಬೇಕು. ಅಪ್ರಾಪ್ತ ಮಕ್ಕಳ ವಯಸ್ಸು ಸೂಕ್ತವಾಗಿಲ್ಲದಿದ್ದರೆ ಅವರೊಂದಿಗೆ ವಾಸಿಸುವ ಹಾಗೂ ಅವರನ್ನು ಪೋಷಿಸುವ ಕಾನೂನಿನ ಪ್ರಕಾರ ಪ್ರಮಾಣೀಕೃತ ಪೋಷಕರು ಅರ್ಹರಾಗುತ್ತಾರೆ ಎಂದು ಆದೇಶಿಸಲಾಗಿತ್ತು. ಆದರೆ ಇನ್ನು ಮುಂದೆ ಈ ನಿಯಮಗಳಲ್ಲಿ ಬದಲಾವಣೆ ಜಾರಿಯಾಗಲಿದೆ.

Leave A Reply

Your email address will not be published.