ಮೊಬೈಲ್ ಅಂಗಡಿಯಲ್ಲಿ ಕಳ್ಳತನ, ನಾಲ್ವರ ಬಂಧನ

ಕುಂದಾಪುರ : ಬೈಂದೂರು ತಾಲೂಕಿನ ಉಪ್ಪುಂದ ದೇವಸ್ಥಾನದ ಬಳಿಯ ಮೊಬೈಲ್ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟ ನಾಲ್ವರು ಆರೋಪಿಗಳನ್ನು ಮುರುಡೇಶ್ವರ ಬೀಚ್ ಬಳಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಭಟ್ಕಳ ಮುರುಡೇಶ್ವರ ಮಾವಳ್ಳಿ ನಿವಾಸಿ ಮೊಹಮ್ಮದ್ ಇಫಹಲ್ (27) ಮತ್ತು ಮೊಹಮ್ಮದ್ ರಫಿ (21),ಮೊಹಮ್ಮದ್ ಆಸೀಮ್ ಡೋನ್ನಾ (20), ಮತ್ತು ಮೊಹಮ್ಮದ್ ರಹಿಕ್ (22) ಬಂಧಿತ ಆರೋಪಿಗಳು.

ಬಿಜೂರು ನಿವಾಸಿ ಪ್ರಸಾದ್ ಎಂಬವರ ಮಾಲೀಕತ್ವದ ಮೊಬೈಲ್ ಜೋನ್ ಎಂಬ ಅಂಗಡಿಯಲ್ಲಿ, ಜುಲೈ 5 ರಂದು ರಾತ್ರಿ ಅಂಗಡಿಯ ಶೇಟರ್ ಮುರಿದು ಕಳ್ಳತನ ಮಾಡಿದ ಘಟನೆ ಮರುದಿನ ಬೆಳಕಿಗೆ ಬಂದಿತ್ತು.

ಅಂಗಡಿಯಲ್ಲಿ 3500 ನಗದು, 25000 ಬೆಲೆ ಬಾಳುವ 17 ಕೀ ಪ್ಯಾಡ್ ಮೊಬೈಲ್ ಫೋನ್ ಗಳು, 5000 ರೂಪಾಯಿಯ ಪವರ್ ಬ್ಯಾಂಕ್ ಹಾಗೂ ಬ್ಲೂ ಟ್ಯೂತ್ ಕಳವುಗೈದಿದ್ದು, ಈ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 33500 ಆಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಮತ್ತು ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ಹಾಗೂ ಸಿಬ್ಬಂದಿಗಳ ಕಾರ್ಯಚರಣೆ ಮೂಲಕ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಆರೋಪಿಗಳಿಂದ 20000 ರೂಪಾಯಿ ಮೊಬೈಲ್ ಫೋನ್, ಮೂರು ಪವರ್ ಬ್ಯಾಂಕ್, ಕೃತ್ಯಕ್ಕೆ ಬಳಸಿದ 8 ಲಕ್ಷ ರೂಪಾಯಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

Leave A Reply

Your email address will not be published.