ಪತ್ನಿಯೊಂದಿಗೆ ಮುನಿಸು-ಮರವೂರು ಸೇತುವೆಯಲ್ಲಿ ಬೈಕ್ ನಿಲ್ಲಿಸಿ ವ್ಯಕ್ತಿ ನಾಪತ್ತೆ!! ಕಳೆದ ಬಾರಿಯ ಪ್ರಕರಣಕ್ಕೆ ಹೋಲಿಕೆ-ಶೋಧ ಕಾರ್ಯಕ್ಕೆ ತೊಡಕು
ಮಂಗಳೂರು:ಪತ್ನಿ ಜೊತೆ ಮುನಿಸಿಕೊಂಡ ವ್ಯಕ್ತಿಯೊಬ್ಬರು ಮಧ್ಯರಾತ್ರಿ ಮನೆಯಿಂದ ಹೊರಟು ಹೋಗಿ, ಮಾರನೆಯ ದಿನ ವ್ಯಕ್ತಿಯ ಬೈಕ್ ಸೇತುವೆಯ ಮೇಲೆ ಪತ್ತೆಯಾಗಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟ ಪ್ರಕರಣವೊಂದು ಬಜ್ಪೆ ಠಾಣಾ ವ್ಯಾಪ್ತಿಯ ಮರವೂರು ಎಂಬಲ್ಲಿ ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಮಂಗಳೂರು ನಗರ ಕದ್ರಿ ಠಾಣಾ ವ್ಯಾಪ್ತಿಯ ವ್ಯಾಸನಗರ ನಿವಾಸಿ ವಿವೇಕ್ ಪ್ರಭು(45) ಎಂದು ಗುರುತಿಸಲಾಗಿದ್ದು, ಈ ಬಗ್ಗೆ ವಿವೇಕ್ ಅವರ ಪತ್ನಿ ನೀಡಿದ ದೂರನಂತೆ ಕದ್ರಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಫಳ್ನಿರ್ ಬಳಿಯ ಪೆಟ್ರೋಲ್ ಪಂಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವಿವೇಕ್, ಕಳೆದ ಮಂಗಳವಾರ ರಾತ್ರಿ ಮನೆಯಲ್ಲಿ ಪತಿ ಹಾಗೂ ಪತ್ನಿ ನಡುವೆ ಯಾವುದೋ ಕಾರಣಕ್ಕೆ ಕಲಹ ಉಂಟಾಗಿತ್ತು. ಆ ಬಳಿಕ ಮನೆಯಿಂದ ಹೊರಹೋದ ವಿವೇಕ್ ಅವರ ಬೈಕ್ ಕೀ ಸಹಿತ ಮರವೂರು ಸೇತುವೆಯ ಬಳಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಮಳೆಯಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಶೋಧ ಕಾರ್ಯಕ್ಕೂ ತೊಡಕು ಉಂಟಾಗಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ಇಂತಹುದೆ ಘಟನೆಯೊಂದು ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪತ್ನಿಯೊಂದಿಗೆ ಮುನಿಸಿಕೊಂಡ ಆಟೋ ಚಾಲಕನೋರ್ವ ಗುರುಪುರ ಸೇತುವೆಯ ಬಳಿ ಬೈಕ್ ನಿಲ್ಲಿಸಿ ನದಿಗೆ ಹಾರಿದ್ದು, ಒಂದೆರಡು ದಿನಗಳ ಬಳಿಕ ಮರವೂರು ಬಳಿಯಲ್ಲೇ ಶವ ಪತ್ತೆಯಾಗಿತ್ತು.