ಅಕ್ರಮ ಗೋಸಾಟ, ದುಷ್ಕರ್ಮಿಗಳು ನೀಡಿದ ಚಿತ್ರಹಿಂಸೆಗೆ ಕಾರಿನಲ್ಲೇ ಪ್ರಾಣ ಬಿಟ್ಟ ದನ!

ಹೆಬ್ರಿ: ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ದನಗಳನ್ನು ಹಾಗೂ ಓರ್ವ ಆರೋಪಿಯನ್ನು ಹೆಬ್ರಿ ಠಾಣೆ ಪೊಲೀಸರು ಜು. 3ರಂದು ವಶಪಡಿಸಿಕೊಂಡಿದ್ದಾರೆ. ಸ್ವಿಫ್ಟ್ ಕಾರಿನಲ್ಲಿ ಈ ದನಗಳನ್ನು ಸಾಗಿಸಲಾಗುತ್ತಿತ್ತು.

ಪೊಲೀಸರು ಆರೋಪಿ ಶಕೀಲ್ ಅಹಮ್ಮದ್ ಟಿ.ಕೆ. ಅವನನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ದುರದೃಷ್ಟಕರ ಏನೆಂದರೆ ಕಾರಿನಲ್ಲಿದ್ದ ಒಂದು ದನ ಆರೋಪಿಗಳು ನೀಡಿದ ಚಿತ್ರಹಿಂಸೆಯಿಂದಾಗಿ ಮೃತಪಟ್ಟಿದೆ.

ಭಾನುವಾರ ರಾತ್ರಿ 8:30ರ ವೇಳೆ ಹೆಬ್ರಿ ಪಿಎಸ್‌ಐ ಸುದರ್ಶನ್ ದೊಡಮನಿ ತನ್ನ ಸಿಬ್ಬಂದಿ ಜತೆ ಹೆಬ್ರಿ ತಾಲೂಕು ಚಾರಾದ ನವೋದಯ ಶಾಲೆ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಬೇಳಂಜೆ ಕಡೆಯಿಂದ ಮಾರುತಿ ಸ್ವಿಫ್ಟ್ ಕಾರು (KA.53.MB.6960) ಅತಿವೇಗವಾಗಿ ಬರುತ್ತಿದ್ದ ಕಾರನ್ನು ಪೊಲೀಸರು ನಿಲ್ಲಿಸಲು ಸೂಚನೆ ನೀಡಿದಾಗ ಚಾಲಕ ಮತ್ತಷ್ಟು ವೇಗವಾಗಿ ಹೆಬ್ರಿ ಕಡೆಗೆ ಚಲಾಯಿಸಿದ್ದಾನೆ.

ಪೊಲೀಸರು ಕಾರನ್ನು ಬೆನ್ನಟ್ಟಿದಾಗ ಸ್ವಿಫ್ಟ್ ಕಾರು ಚಾರಾ ಸರ್ಕಲ್ ಬಳಿ ಸಾಗಿ, ಬ್ರಹ್ಮಾವರ ರಸ್ತೆಯಲ್ಲಿ ಹೋಗಿ ಮಂಡಾಡಿಜೆಡ್ಡು ಕಡೆಗೆ ಹೋಗುವ ರಸ್ತೆಗೆ ತಿರುಗಿದೆ. ಕೆರೆಬೆಟ್ಟು ಗ್ರಾಮದ ಕೆರೆಬೆಟ್ಟು ಮಹಾಲಿಂಗ ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ ಕಾರು ನಿಲ್ಲಿಸಿದ್ದಾರೆ. ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಇಳಿದು ಓಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಪೊಲೀಸರು ಈ ಪೈಕಿ ಶಕೀಲ್ ಅಹಮ್ಮದ್ ಟಿ.ಕೆ. ಎಂಬವನನ್ನು ಬೆನ್ನಟ್ಟಿ ಸೆರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಇನ್ನೊಬ್ಬ ಕತ್ತಲ ಮರೆಯಲ್ಲಿ ಕಾಡಿನೊಳಗೆ ಓಡಿ ತಪ್ಪಿಸಿಕೊಂಡಿದ್ದಾನೆ.

Leave A Reply

Your email address will not be published.