ಸುಬ್ರಹ್ಮಣ್ಯ : ಅತಿಥಿಯಾಗಿ ಮನೆಗೆ ಬಂದ ವ್ಯಕ್ತಿ, ಚೂರಿ ಇರಿದು ಪರಾರಿ!

Share the Article

ಸುಬ್ರಹ್ಮಣ್ಯ: ಅತಿಥಿಯಾಗಿ ಮನೆಗೆ ಬಂದ ವ್ಯಕ್ತಿಯೊಬ್ಬ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಮನೆಯ ಯಜಮಾನನಿಗೆ ಕತ್ತಿಯಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದ ತೋಟದ ಮಜಲು ಎಂಬಲ್ಲಿ ನಡೆದಿದೆ.

ತೋಟದ ಮಜಲು ನಿವಾಸಿ ಲೂಕೋಸ್ ಎಂಬಾತನೇ ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕಳೆದ ಎಂಟು ವರ್ಷಗಳ ಹಿಂದೆ ಕೇರಳ ಮೂಲದ ಲೂಕೋಸ್, ಕೊಲ್ಲಮೊಗ್ರ ಗ್ರಾಮದ ತೋಟದ ಮಜಲು ಎಂಬಲ್ಲಿ ಜಾಗ ಖರೀದಿಸಿ ಸಂಸಾರಸ ಮೇತರಾಗಿ ವಾಸವಾಗಿದ್ದರು. ಆದರೆ, ಕಳೆದ ಎರಡು ವರ್ಷದ ಹಿಂದೆ ಪತ್ನಿ ಬಿಟ್ಟು ಹೋಗಿದ್ದು, ನಂತರದಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಿದ್ದರು. ವಾರದ ಹಿಂದೆ ಲೂಕೋಸ್ ಅವರ ಮನೆಗೆ ಅತಿಥಿಯೊಬ್ಬ ಬಂದಿದ್ದು, ಇವರ ಮನೆಯಲ್ಲೇ ವಾಸವಾಗಿದ್ದ ಎನ್ನಲಾಗಿದೆ. ನಿನ್ನೆ ಮುಂಜಾನೆ ವೇಳೆ ಇಬ್ಬರೂ ಗುತ್ತಿಗಾರಿಗೆ ತೆರಳಿದ್ದು, ಬಳಿಕ ಮನೆಗೆ ವಾಪಸ್ ಆಗಿದ್ದರು.

ನಿನ್ನೆ ಮಧ್ಯಾಹ್ನ 3-4 ಗಂಟೆಯ ವೇಳೆಗೆ ಅತಿಥಿಯಾಗಿ ಮನೆಗೆ ಬಂದಿದ್ದಾತ ರಬ್ಬರ್ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಲೂಕೋಸ್‌ಗೆ ನಾಲೈದು ಬಾರಿ ಇರಿದು ಬಳಿಕ ಪರಾರಿಯಾಗಿದ್ದಾನೆ. ಗಾಯಗೊಂಡ ಲೂಕೋಸ್ ಪಕ್ಕದ ಮನೆಗೆ ಓಡಿಹೋಗಿದ್ದು ಅಲ್ಲಿ ಕುಸಿದು ಬಿದ್ದಿದ್ದಾನೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಸುಬ್ರಮಣ್ಯ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸುಬ್ರಹ್ಮಣ್ಯ ಠಾಣಾಧಿಕಾರಿ ಜಂಬುರಾಜ್ ಮಹಾಜನ್ ಘಟನಾ ಸ್ಥಳಕ್ಕೆ ಆಗಮಿಸಿ, ಗಾಯಾಳುವನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗೆ ಶೋಧ ನಡೆಯುತ್ತಿದೆ.

Leave A Reply

Your email address will not be published.