ಟೈಲರ್ ಹತ್ಯೆ ಪ್ರಕರಣ: ಸರಣಿ ಟ್ವೀಟ್ ಮೂಲಕ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಕೆಂಡಕಾರಿದ ಬಿಜೆಪಿ !!

ಬೆಂಗಳೂರು: ಉದಯಪುರದಲ್ಲಿ ನಡೆದ ಟೈಲರ್ ಹತ್ಯೆ, ಪಕ್ಷಗಳ ನಡುವೆ ಕಿಚ್ಚೆತ್ತುಕೊಳ್ಳಲು ಕಾರಣವಾಗಿದೆ. ಹತ್ಯೆಗೀಡಾದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಇರುವುದರಿಂದ, ಟೈಲರ್ ನ ಸಾವಿಗೆ ಕಾಂಗ್ರೆಸ್ ಯೇ ಕಾರಣ ಎಂಬ ವಗ್ವಾದ ನಡೆಯುತ್ತಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ‘ಐಸಿಸ್ ಮಾದರಿಯಲ್ಲಿ ಹತ್ಯೆ ನಡೆಸಿರುವ ಈ ಉಗ್ರರನ್ನು ಗಲ್ಲಿಗೇರಿಸಬೇಕು. ಕಾಂಗ್ರೆಸ್ ಪಕ್ಷವೇ ಒಂದು ಭಯೋತ್ಪಾದಕ ಪಕ್ಷ. ಮತಾಂಧರ ಓಲೈಕೆಯೇ ಕಾಂಗ್ರೆಸ್ಸಿಗರ ಮೂಲಭೂತ ಧ್ಯೇಯ. ಇಂತಹ ಅಮಾನವೀಯ ಕೃತ್ಯ ನಡೆದಾಗ ಕಾಂಗ್ರೆಸ್ ಮೌನಕ್ಕೆ ಶರಣಾಗುವುದೇಕೆ? ಬದುಕುವ ಹಕ್ಕಿನ ಬಗ್ಗೆ ಬೊಬ್ಬೆ ಹಾಕುವವರು ಈಗೆಲ್ಲಿದ್ದಾರೆ’ ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮ‌ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂಬುದಕ್ಕೆ ರಾಜಸ್ಥಾನದ ಘಟನೆಯೇ ಸಾಕ್ಷಿ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಪಕ್ಷ ಚಿಂತನ ಶಿಬಿರ ಆಯೋಜಿಸಿದ ರಾಜ್ಯದಲ್ಲೇ ಇಂತಹ ಘೋರ ಘಟನೆ ನಡೆದಿದ್ದು, ಭಾರತ್ ಜೋಡೋ ಎಂದ ನಾಡಿನಲ್ಲೇ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ.

ಹತ್ಯೆ, ನರಮೇಧಗಳು‌ ನಡೆದಾಗ ಕಾಂಗ್ರೆಸ್ ಪಕ್ಷದ ಅನುಕಂಪ‌ದ ರಾಜಕಾರಣ ಸೆಲೆಕ್ಟಿವ್ ಆಗಿರುತ್ತದೆ. ನೆತ್ತರಿನಲ್ಲೂ ಧರ್ಮ ಹುಡುಕುವ ಏಕೈಕ ಪಕ್ಷವೆಂದರೆ ಅದು, ಕಾಂಗ್ರೆಸ್! ಹಿಂದೂ‌ ಅಸ್ಮಿತೆಗಳ ಬಗ್ಗೆ ಕುಹಕವಾಡಿರುವ ಪತ್ರಕರ್ತನ ಬಂಧನವನ್ನು ಖಂಡಿಸುವ ಸಿದ್ದರಾಮಯ್ಯ ಈಗ ಮೌನಿ ಬಾಬಾ ಆಗಿದ್ದಾರೆ. ರಾಜಸ್ಥಾನದಲ್ಲಿ ನಡೆದ ಕೊಲೆಯನ್ನು ಮತಾಂಧರು ನಡೆಸಿದ್ದಾರೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ತಿಳಿದಿದೆ, ಅದಕ್ಕಾಗಿಯೇ ಈ‌ ಮೌನ ಅಲ್ಲವೇ?

‘ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಅತಿಯಾದ ಮುಸ್ಲಿಂ ಓಲೈಕೆಯ ಫಲವಾಗಿ ಮತಾಂಧರು ಇಂದು ಉದಯ ಪುರ್ ನ ಕನ್ಹಯ್ಯ ಲಾಲ್ ಎಂಬ ಹಿಂದೂ ಯುವಕನನ್ನು ಬರ್ಬರವಾಗಿ ಹತ್ಯೆ ಗೈದಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಇದೇ‌ನು ಹೊಸದಲ್ಲ. ಕರ್ನಾಟಕದಲ್ಲಿ ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪರೇಶ್ ಮೇಸ್ತಾ, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ರುದ್ರೇಶ್ ಅವರಂತಹ ಹಿಂದೂ ಕಾರ್ಯಕರ್ತರ ಕೊಲೆ ನಡೆದಿತ್ತು. ಇವೆಲ್ಲ ಕಾಂಗ್ರೆಸ್ ಪಕ್ಷದ ಅತಿಯಾದ ತುಷ್ಟಿಕರಣದ ನೇರ ಪ್ರಭಾವದಿಂದ ಆಗಿರುವ ದಾರುಣ ಹತ್ಯೆಗಳು! ಎಂದು’ ಬಿಜೆಪಿ ಕಿಡಿಕಾರಿದೆ.

ಅಲ್ಲದೆ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ರಾಜಸ್ಥಾನದ ಹಿಂದೂ ವ್ಯಕ್ತಿ ಕೊಲೆ ಅತ್ಯಂತ ಹೇಯವಾದ ನೀಚ, ರಾಕ್ಷಸ ಕೃತ್ಯವಾಗಿದೆ. ಟೈಲರ್ ಹತ್ಯೆಗೆ ಕಾಂಗ್ರೆಸ್ಸ್ ನ ಮತಾಂಧರ ಓಲೈಕೆಯೇ ಕಾರಣ ಎಂದು ಗುಡುಗಿದ್ದಾರೆ.

Leave A Reply

Your email address will not be published.