ಬಳೆ ಕೊಡಿಸು ಗಂಡ ಎಂದು ಕರೆದುಕೊಂಡು ಹೋದ ಹೆಂಡತಿ | ಕ್ಷಣದಲ್ಲಿ ಪಕ್ಕಾ ಸಿನಿಮಾ ಸ್ಟೈಲಲ್ಲಿ ಎಸ್ಕೇಪ್ !

ಕೆಲವೊಂದು ಘಟನೆಗಳು ನಮ್ಮ ಸುತ್ತಮುತ್ತ ಭಾರೀ ಕುತೂಹಲ ರೀತಿಯಲ್ಲಿ ನಡೆಯುತ್ತದೆ. ಯಾವುದೇ ಸಿನಿಮಾ ಸ್ಟೋರಿಗೂ ಕಮ್ಮಿ ಇರಲ್ಲ ಈ ಘಟನೆಗಳು.

ಹೌದು, ಅಂತಹದೊಂದು ಕುತೂಹಲಕಾರಿ ಘಟನೆಯೊಂದು ಬಿಹಾರ ಮುಂಗೇರ್‌ನಲ್ಲಿ ನಡೆದಿದೆ. ಜೂನ್ 14 ರಂದು ಮುಂಗೇರ್ ನಿವಾಸಿ ರಾಮವಿಲಾಸ್ ಗುಪ್ತಾ ಅವರ ಪುತ್ರ ವಿವೇಕ್ ಪೊದ್ದಾರ್ ಮತ್ತು ನೌವಾಗರ್ಹಿ ನಿವಾಸಿ ರಾಮ್ಪಿಲಾಸ್ ಪೊದ್ದಾರ್ ಅವರ ಪುತ್ರಿ ಮೋನಿ ಕುಮಾರಿ ವಿವಾಹ ನಡೆದಿತ್ತು. ಈ ಸಂಭ್ರಮ ಮೊದಲ ವಾರದವರೆಗೆ ಹಾಗೆಯೇ ಮುಂದುವರೆದಿತ್ತು. ನವದಂಪತಿಗಳು ಖುಷಿಯಿಂದಲೇ ಸಂಬಂಧಿಕರ ಮನೆಗೆಲ್ಲ ಹೋಗಿ ಬರುತ್ತಿದ್ದರು. ಈ ಜೋಡಿಯನ್ನು ನೋಡಿ ಕಣ್ಣು ಬೀಳದಿರಲಿ ಎಂದವರೇ ಹೆಚ್ಚು.

ಜೂನ್ 22 ರಂದು ಸಂಜೆ ಮೋನಿ ಕುಮಾರಿ ತನ್ನ ಪತಿ ವಿವೇಕ್ ಜೊತೆ ಬಳೆ ಖರೀದಿಸಲೆಂದು ಹೋಗಿದ್ದಾಳೆ. ಅಂಗಡಿಯ ಒಳಗೆ ಹೋಗಿ ತನ್ನ ಹಳೆಯ ಬಳೆಯನ್ನು ಗಂಡನಿಗೆ ಜಾರಿಸಲು ಹೇಳಿದ್ದಾಳೆ. ಆತ ಆಕೆಯ ಕೈಗಳಿಂದ ಬಳೆಗಳನ್ನು ತೆಗೆದು ಕೆಳಗೆ ಇಡುತ್ತಿದ್ದಂತೆ, ‘ ಈಗ ಬಂದೆ ರೀ ‘ ಅನ್ನುತ್ತಾ ಅಂಗಡಿಯಿಂದ ಹೊರಕ್ಕೆ ಬಂದಿದ್ದಾಳೆ. ಅಲ್ಲಿ ಅದಾಗಲೇ ತಂಡವೊಂದು ಸ್ಕಾರ್ಪಿಯೋ ಗಾಡಿಯಲ್ಲಿ ಕಾದು ಕೂತಿತ್ತು. ಅತ್ತ ಹೆಂಡತಿ ಏಕಾಏಕಿ ಅಂಗಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ಗಂಡ ಕೂಡಾ ಹೆಂಡತಿಯನ್ನು ಹಿಂಬಾಲಿಸಿದ್ದಾರೆ. ಗಂಡ ನೋಡನೋಡುತ್ತಿದ್ದಂತೆ ಆಕೆ ಆ ಗಾಡಿ ಹತ್ತಿದವಳೆ ಬಾಯ್ ಫ್ರೆಂಡ್ ಜತೆ ಎಸ್ಕೇಪ್ ಆಗಿದ್ದಾಳೆ. ತಕ್ಷಣ ಏನು ಮಾಡಲು ತೋಚದ ಗಂಡ ತನ್ನ ದ್ವಿಚಕ್ರವಾಹನವನ್ನು ಸ್ಟಾರ್ಟ್ ಮಾಡಿ ಹಿಂಬಾಲಿಸಿದ್ದಾರೆ. ಸಾಕಷ್ಟು ದೂರ ಚೀಸ್ ಮಾಡಿದರು ಕಾರು ವೇಗವಾಗಿ ಹೊರಟುಹೋಗಿದೆ.

ತಲೆ ಕೆಡಿಸಿಕೊಂಡ ವಿವೇಕ್ ನೇರವಾಗಿ ಮನೆಗೆ ಬಂದು ವಿಷಯ ಮುಟ್ಟಿಸಿದ್ದಾನೆ. ನಂತರ ಕುಟುಂಬದವರ ಜೊತೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾನೆ. ಇಷ್ಟೆಲ್ಲ ಗಡಿಬಿಡಿಯ ಮಧ್ಯೆ ಮನೆಗೆ ಬಂದು ನೋಡಿದರೆ ಮದುವೆಗೆ ಹಾಕಿದ್ದ ಒಡವೆಗಳು, ಆಭರಣಗಳೂ ಯಾವುದೂ ಇರಲಿಲ್ಲ. ಅಷ್ಟೇ ಅಲ್ಲದೆ ಹೆಂಡತಿಯ ಬಟ್ಟೆ ಬರೆ, ಆಕೆಯ ಎಲ್ಲಾ ವಸ್ತುಗಳು ರೂಮ್‌ನಲ್ಲಿ ಇರಲಿಲ್ಲ.

ಒಡವೆ ಹಾಗೂ ಇನ್ನಿತರ ವಸ್ತುಗಳು ರೂಮ್‌ನಲ್ಲಿ ಇಲ್ಲದಿರುವುದು ನೋಡಿ ಇಡೀ ಘಟನೆಯ ಬಗ್ಗೆ ವಿವೇಕ್‌ಗೆ ಅನುಮಾನ ಬಂದಿದೆ. ಅಲ್ಲದೆ ಈ ವಿಚಾರವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಇದೇ ವೇಳೆ ಮೋನಿ ಕುಮಾರಿಯ ಫೋನ್ ಫೋನ್ ಕರೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಪಹರಣಗಾರರ ತಂಡದಲ್ಲಿದ್ದ ಒಬ್ಬನ ನಂಬರ್‌ನಿಂದ ಮೋನಿ ಕುಮಾರಿಗೆ ಪದೇ ಪದೇ ಕರೆ ಬಂದಿರುವುದು ಕಂಡು ಬಂದಿದೆ.

ತಕ್ಷಣವೇ ಕಾರ್ಯಪ್ರವೃತರಾದ ರಾಮನಗರ ಪೊಲೀಸ್ ಠಾಣೆಯ ಪೊಲೀಸರು, ಮೋನಿ ಕುಮಾರಿ ಹಾಗೂ ಆಕೆಯ ಪ್ರಿಯಕರ ದಿವ್ಯಾಂಶು ಕುಮಾರ್‌ನ ಫೋನ್ ಟ್ರ್ಯಾಕ್ ಮಾಡಿದ್ದಾರೆ. ಅಲ್ಲದೆ ಇಬ್ಬರನ್ನು ಕಾಂತಪುರ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಆ ಬಳಿಕ ವಿಚಾರಣೆಗೆ ಒಳಪಡಿಸಿದಾಗ ಮೋನಿ ದಿವ್ಯಾಂಶುನನ್ನು ಪ್ರೀತಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಇಬ್ಬರು ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಮನೆಯಲ್ಲಿ ಒಪ್ಪಿರಲಿಲ್ಲ. ಹೀಗಾಗಿ ಮದುವೆಯಾದ ಬಳಿಕ
ಪರಾರಿಯಾಗಲು ಮೋನಿ ಕುಮಾರಿ ಪ್ಲಾನ್ ರೂಪಿಸಿದ್ದಳು.

ಅದರಂತೆ ಜೂನ್ 22 ರಂದು ಎಸ್ಕೇಪ್ ಆಗಲು ನಿರ್ಧರಿಸಿ, ಕಿಡ್ನಾಪ್ ಮಾಡುವಂತೆ ದಿವ್ಯಾಂಶು ಕುಮಾರ್‌ಗೆ ತಿಳಿಸಿದ್ದಾಳೆ. ಅತ್ತ ಗೆಳೆಯರೊಂದಿಗೆ ಆಗಮಿಸಿ ದಿವ್ಯಾಂಶು ಮೋನಿಯನ್ನು ಅಪಹರಿಸಿದ್ದಾನೆ. ಇದೀಗ ಕಿಡ್ನಾಪ್ ಪ್ಲ್ಯಾನ್ ಬಗ್ಗೆ ಬಾಯಿಬಿಟ್ಟಿರುವ ದಿವ್ಯಾಂಶು ಕುಮಾರ್, ಎಲ್ಲವೂ ಮೋನಿ ಕುಮಾರಿಯ ಫ್ಲ್ಯಾನ್‌ನಂತೆ ಮಾಡಿರುವುದಾಗಿ ತಿಳಿಸಿದ್ದಾನೆ. ಇದನ್ನೆಲ್ಲಾ ಕೇಳಿ ನವ ವರ ವಿವೇಕ್ ಮಾತ್ರ ದಂಗಾಗಿದ್ದಾರೆ. ಸದ್ಯ ತಮ್ಮನ್ನು ತಾವೇ ಕಿಡ್ನ್ಯಾಪ್ ಮಾಡಿಕೊಂಡ ಪ್ರೇಮಿಗಳು ಪೊಲೀಸರ ವಶದಲ್ಲಿದ್ದು, ನ್ಯಾಯಾಲಯಕ್ಕೆ ಒಪ್ಪಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ತಮ್ಮ ಒಬ್ಬನೇ ಮಗನ ಬದುಕು ಹೀಗಾದುದಕ್ಕೆ, ಮತ್ತು ತಮಗೆ ಹುಡುಗಿಯ ಮದುವೆಗೆ ಮುಂಚೆ ಮುಂಚಿನ ಪ್ರೇಮ ಪ್ರಸಂಗವನ್ನು ತಿಳಿಸದೆ ಮದುವೆ ಮಾಡಿದ್ದಕ್ಕೆ ಹುಡುಗನ ಹೆತ್ತವರು ಶಾಪ ಹಾಕುತ್ತಿದ್ದಾರೆ.

Leave A Reply

Your email address will not be published.