ಪಡುಬಿದ್ರಿ : ಕಾಮಿನಿ ನದಿ ಕಲುಷಿತ, ಲಕ್ಷಾಂತರ ಮೀನುಗಳ ಮಾರಣಹೋಮ

ಪಡುಬಿದ್ರಿ: ಸ್ಥಳೀಯ ಕಾಮಿನಿ ನದಿಯು ಕಲುಷಿತಗೊಂಡ ಪರಿಣಾಮ ಮೀನುಗಳು ಸಾವನ್ನಪ್ಪಿದೆ. ಲಕ್ಷಾಂತರ ಮೌಲ್ಯದ ಮೀನುಗಳ ಮಾರಣಹೋಮವಾಗಿದೆ ಎಂದೇ ಹೇಳಬಹುದು. ಸ್ಥಳೀಯರ ಪ್ರಕಾರ ರಾಸಾಯನಿಕ ಮಿಶ್ರಿತ ನೀರಿನಿಂದ ಮೀನುಗಳು ಸತ್ತುಹೋಗಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಎರಡು ದಿನಗಳ ಹಿಂದೆ ಜೋರಾಗಿ ಮಳೆ ಬಂದ ನಂತರ, ಹೊಳೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿ ಕಲುಷಿತಗೊಂಡಿದೆ. ಅಷ್ಟು ಮಾತ್ರವಲ್ಲದೇ ಇಡೀ ಪರಿಸರ ದುರ್ವಾಸನೆಯಿಂದ ಕೂಡಿದೆಂದು ತಿಳಿದು ಬಂದಿದೆ. ಪಂಜರದಲ್ಲಿ ಸಾಕುವ ಮೀನುಗಳು ಹಾಗೂ ಹೊಳೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಮೀನುಗಳು ಸತ್ತುಹೋಗಿವೆ.

ಈ ಹೊಳೆಯ ನೀರು ಕೃಷಿ ಭೂಮಿಗೂ ಆವರಿಸಿರುವುದರಿಂದ ಕೃಷಿ ಭೂಮಿಗೂ ಹಾನಿಗೊಳಗಾಗಿದೆ. ಸುಮಾರು ಒಂಬತ್ತು ಟನ್ ಮೀನುಗಳು ಸತ್ತುಹೋಗಿವೆ. ಅಲ್ಲದೆ, ಹೊಳೆಯಲ್ಲಿರುವ ಪಯ್ಯಾ, ಕಾನೆ, ಕ್ಯಾವೇಜ್, ಮಾಲ, ಇರ್ಪೆ, ತೆಬೇರಿ ಮೀನುಗಳು ಸತ್ತು ಹೋಗಿವೆ ಎಂದು ಸ್ಥಳೀಯರು ದೂರಿದ್ದಾರೆ.

ನಾವು ಸಾಕಿದ್ದು ಮಾತ್ರವಲ್ಲದೆ ಹೊಳೆಯ ಮೀನುಗಳು ಕೂಡಾ ಸತ್ತು ಹೋಗಿವೆ. ಇದರಿಂದ ಸುಮಾರು 22 ಲಕ್ಷ ರೂಪಾಯಿಗೂ ಅಧಿಕ ನಷ್ಟ ಆಗಿದೆ. ಕಂಪನಿಗಳಿಂದ ಹೊರ ಬಿಡುವ ರಾಸಾಯನಿಕಯುಕ್ತ ತ್ಯಾಜ್ಯದಿಂದ ಮೀನುಗಳ ಮಾರಣ ಹೋಮವಾಗಿದೆ. ಇಲಾಖೆ ಈ ನಿಟ್ಟಿನಲ್ಲಿ ಸೂಕ್ತ ಪರಿಹಾರ ದೊರಕಿಸಿಕೊಡಬೇಕು’ ಎಂದು ಮೀನು ಸಾಕಣೆದಾರರು ಆಗ್ರಹಿಸಿದ್ದಾರೆ.

Leave A Reply

Your email address will not be published.