ಪುತ್ತೂರು : ಯುವಕನೋರ್ವನ ಹೈಡ್ರಾಮ | ಆತಂಕಗೊಂಡ ಸಾರ್ವಜನಿಕರು | ಆಸ್ಪತ್ರೆಗೆ ದಾಖಲು ಮಾಡಿದಾಗ ತಿಳಿಯಿತು ನಿಜ ಸಂಗತಿ!

ಪುತ್ತೂರು : ಇಲ್ಲಿನ ಸಮೀಪದ ಕೊಂಬೆಟ್ಟು ಎಂಬಲ್ಲಿ ಯುವಕನೊಬ್ಬ ರಸ್ತೆಯಲ್ಲಿ ಬಿದ್ದು ಹೈಡ್ರಾಮ ಸೃಷ್ಟಿಸಿದ ಘಟನೆಯೊಂದು ನಡೆದಿದೆ.

ಗದಗ ಮೂಲದ ಯುವಕ ಕಂಠ ಪೂರ್ತಿ ಕುಡಿದು ಕೈಗೆ, ಹೊಟ್ಟೆಗೆ ಬ್ಯಾಂಡೇಜ್ ಕಟ್ಟಿಕೊಂಡು ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದಿರುವವನಂತೆ ಹೈಡ್ರಾಮ ಸೃಷ್ಟಿಸಿದ್ದ. ಈತನ ಪರಿಸ್ಥಿತಿ ಕಂಡು ಗಾಬರಿಯಿಂದ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಗದಗ ಮೂಲದ ವ್ಯಕ್ತಿ ಬಿಳಿ ಬಟ್ಟೆಯನ್ನು ಹೊಟ್ಟೆಗೆ ಬಿಗಿಯಾಗಿ ಸುತ್ತಿ ಅದಕ್ಕೆ ರಕ್ತದ ಬಣ್ಣ ಹೋಲುವಂತೆ ಪೈಂಟ್ ಸುರಿದು ಬಿದ್ದು ಕೊಂಡಿದ್ದ. ಇದನ್ನು ಸಾರ್ವಜನಿಕರು ಗಮನಿಸಿ ಹೊಟ್ಟೆಯ ಭಾಗದಿಂದ ರಕ್ತ ಸುರಿಯುತ್ತಿರುವಂತೆ ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದಾಗ ಆತ ಹೊರಳಾಡಿದುದರಿಂದ ಆತನ ಹೊಟ್ಟೆ ಮತ್ತು ಕೈಗೆ ಸುತ್ತಿದ ಬಿಳಿ ಬಟ್ಟೆ ಜಾರಿತ್ತು. ಆಶ್ಚರ್ಯವೇನೆಂದರೆ, ಅಲ್ಲಿ ಯಾವುದೇ ಗಾಯಗಳಿಲ್ಲದಿರುವುದು ಕಂಡು ಆಶ್ಚರ್ಯಚಕಿತರಾದ ಪೊಲೀಸರು ವಿಚಾರಿಸಿದಾಗ ಆತ ಬಾಯಿ ಬಿಡಲಿಲ್ಲ. ಬಳಿಕ ಆತನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಕೈಯಲ್ಲಿ ಅಚ್ಚು ಹಾಕಿಸಿಕೊಂಡಿದ್ದು, ಒಂದು ಕೈಯಲ್ಲಿ ‘ಆಶ್ರಿತಾ’, ಇನ್ನೊಂದು ಕೈಯಲ್ಲಿ ‘ಭೀಮ’ ಎಂದು ಬರೆಯಲಾಗಿತ್ತು. ಸದ್ಯ ಈತನನ್ನು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Leave A Reply

Your email address will not be published.