ಪುತ್ತೂರು : ” ಅಕ್ಕಾ ಅಕ್ಕಾ” ಎಂದು ಕರೆದು, ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಕರಿಮಣಿ ಸರ ಎಳೆದೊಯ್ದ ಗಾಡಿಯಲ್ಲಿ ಬಂದ ದುಷ್ಕರ್ಮಿಗಳು !

ಪುತ್ತೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರ ಚಿನ್ನದ ಮಾಂಗಲ್ಯ ಸರವನ್ನು
ಬುಲೆಟ್‌ ಗಾಡಿಯಲ್ಲಿ ಬಂದ ಆರೋಪಿಗಳಿಬ್ಬರು ಎಳೆದೊಯ್ದ ಘಟನೆಯೊಂದು ನಡೆದಿದೆ.

“ಅಕ್ಕಾ ಅಕ್ಕಾ” ಎಂದು ಕರೆದು ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಎಳೆದೊಯ್ದು ಪರಾರಿಯಾದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ರತ್ನ ಎಂಬ ಮಹಿಳೆ ಬೆಳಿಗ್ಗೆ 10.30 ಗಂಟೆಗೆ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಕೋನಡ್ಕ ಎಂಬಲ್ಲಿಂದ ಮನೆಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ರೆಂಜ ಕಡೆಯಿಂದ ಚೂರಿಪದವು ಕಡೆಗೆ ಹೋಗುತ್ತಿದ್ದ ಕೆಂಪು ಬಣ್ಣದ ಬುಲೆಟ್ ಮುಂದೆ ಹೋಗಿ ಏಕಾಏಕಿ ಟರ್ನ್ ಹೊಡೆದು ಇವರ ಬಳಿ ಬಂದು ನಿಂತು “ಅಕ್ಕಾ ಅಕ್ಕಾ” ಎಂದು ಕರೆದು, ಬೈಕ್ ಸಹಸವಾರ ಏಕಾಏಕಿ ಕುತ್ತಿಗೆಗೆ ಕೈ ಹಾಕಿ ಚಿನ್ನದ ಕರಿಮಣಿ ಸರ ಎಳೆದಿದ್ದಾನೆ.

ಕೂಡಲೇ ರತ್ನ ಅವರು ಗಾಬರಿಗೊಂಡು ಜೋರಾಗಿ ಬೊಬ್ಬೆ ಹಾಕಿ ಕರಿಮಣಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆದರೆ ಗಾಡಿಯಲ್ಲಿದ್ದವರು ಬಲವಾಗಿ ಎಳೆದ ಪರಿಣಾಮ ಚಿನ್ನದ ಕರಿಮಣಿ ಸರ ತುಂಡಾಗಿ ಅದರ ಅರ್ಧ ಭಾಗ ರತ್ನ ಬಳಿ ಉಳಿದು ಉಳಿದರ್ಧ ದುಷ್ಕರ್ಮಿಗಳು ಎಳೆದುಕೊಂಡು ಹೋಗಿದ್ದಾರೆ.

ಕರಿಮಣಿ ಸರ 26 ಗ್ರಾಂ ಚಿನ್ನವನ್ನು ಹೊಂದಿದ್ದು, ಆ ಪೈಕಿ ಸುಮಾರು 11 ಗ್ರಾಂ ಚಿನ್ನವನ್ನು ಸದ್ರಿ ವ್ಯಕ್ತಿಯು ಎಳೆದುಕೊಂಡು ಹೋಗಿದ್ದಾನೆ. ಅದರ ಮೌಲ್ಯ ಅಂದಾಜು ರೂಪಾಯಿ 50 ಸಾವಿರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.