ಸುಳ್ಯ : ಮನೆಯೊಂದರಲ್ಲಿ ವ್ಯಕ್ತಿಯ ಶವ ಪತ್ತೆ | ಕಾರಣ ನಿಗೂಢ

ಸುಳ್ಯ : ಕೂತ್ಕುಂಜ ಗ್ರಾಮದ ನಿವಾಸಿಯೋರ್ವರು ಅವರ ಮನೆಯೊಳಗೆ ಶವವಾಗಿ ಪತ್ತೆಯಾದ ಘಟನೆಯೊಂದು ನಡದಿದೆ.

ಪುತ್ಯ ದಿ.ಶಿವಪ್ಪ ಗೌಡ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರ ತಿರುಮಲೇಶ್ವರ ( 42) ಎಂಬುವವರ ಮೃತದೇಹ ಪತ್ತೆಯಾಗಿದೆ.

ತಿರುಮಲೇಶ್ವರರು ಕೆಲವು ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದರೆನ್ನಲಾಗಿದೆ. ತಿರುಮಲೇಶ್ವರ ಮನೆಯ ಪಕ್ಕದಲ್ಲಿ ವಾಸವಾಗಿದ್ದ ಅವರ ತಾಯಿ ಮತ್ತು ಸಹೋದರ ಕೆಲವು ಸಮಯಗಳ ಹಿಂದೆ ಅವರ ಜಾಗ ಮಾರಾಟ ಮಾಡಿ ಕಡಬದಲ್ಲಿ ಜಾಗ ಖರೀದಿಸಿ ಮನೆ ಮಾಡಿ ಕೆಲವು ದಿನಗಳ ಹಿಂದೆಯಷ್ಟೇ ಗೃಹ ಪ್ರವೇಶ ಮಾಡಿ ಅಲ್ಲಿ ನೆಲೆಸಿದ್ದರು.

ಜೂ.2 ರಂದು ಸಹೋದರ ಶಿವರಾಮರು ತಿರುಮಲೇಶ್ವರರಿಗೆ ಕರೆ ಮಾಡಿದಾಗ ಫೋನ್ ಕರೆ ಸ್ವೀಕರಿಸದ ಕಾರಣ ಅನುಮಾನಗೊಂಡು ಪಂಜದಲ್ಲಿ ಕೆಲವರಿಗೆ ಫೋನ್ ಮಾಡಿ ತಿಳಿಸಿ, ನಂತರ ತಿರುಮಲೇಶ್ವರ ಮನೆಗೆ ಹೋಗಿ ನೋಡಲು ಹೇಳಿದರು. ಈ ವೇಳೆ ತಿರುಮಲೇಶ್ವರರು ಮನೆಯ ಒಳಗೆ ಮಲಗಿದ್ದಲ್ಲಿ ಶವವಾಗಿರುವುದು ಬೆಳಕಿಗೆ ಬಂತು. ಬಳಿಕ ತಿರುಮಲೇಶ್ವರ ಮನೆ ಮಂದಿ ಆಗಮಿಸಿ, ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗೆ ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಗೆ ಶವವನ್ನು ಆಂಬುಲೆನ್ಸ್ ಸಾಗಿಸಲಾಗಿದೆ.

ತಿರುಮಲೇಶ್ವರರು ಈ ಹಿಂದೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪತ್ನಿಯ ದೂರಿನ ಹಿನ್ನೆಲೆ ಜೈಲು ಸೇರಿ ಬಿಡುಗಡೆಗೊಂಡಿದ್ದರು. ಅವರ ಪತ್ನಿ ಮಕ್ಕಳೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದಾರೆ. ತಿರುಮಲೇಶ್ವರರು ಒಂಟಿಯಾಗಿ ವಾಸವಾಗಿದ್ದು ಸಾವು ಹೇಗೆ ಸಂಭವಿಸಿದೆ ಎಂಬ ಖಚಿತ ಮಾಹಿತಿ ಲಭ್ಯವಿಲ್ಲ‌ ಮರಣೋತ್ತರ ಪರೀಕ್ಷೆ ಬಳಿಕ ಜೂ.3 ರಂದು ಮೃತದೇಹ ಮನೆಯವರಿಗೆ ಹಸ್ತಾಂತರ ಗೊಳ್ಳಲಿದೆ. ಮೃತರು ತಾಯಿ ಶ್ರೀಮತಿ ಸೀತಮ್ಮ,ಪತ್ನಿ ಶ್ರೀಮತಿ ವೇದಾವತಿ, ಪುತ್ರಿ ಭವಿಷ್ಯ ಸಿಂಚನ, ಪುತ್ರ ಪ್ರಜ್ವಲ್, ಸಹೋದರ ಶಿವರಾಮ ಹಾಗೂ
ಕುಟುಂಬಸ್ಥರನ್ನು ಅಗಲಿದ್ದಾರೆ.

Leave A Reply

Your email address will not be published.