ರಸ್ತೆ ಬದಿ ನಿಂತಿದ್ದ ಯುವತಿಯನ್ನು ಸಾರ್ವಜನಿಕವಾಗಿ ಅಪಹರಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!!

Share the Article

ಮಡಿಕೇರಿ: ರಸ್ತೆ ಬದಿ ನಿಂತಿದ್ದ ಯುವತಿಯನ್ನು ಬಲವಂತವಾಗಿ ಎಳೆದೊಯ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅಪಹರಣ ಅಂದುಕೊಂಡಿದ್ದ ಪ್ರಕರಣ ತಮಾಷೆಯಾಗಿ ಸುಖಾಂತ್ಯ ಕಂಡಿದೆ.

ಏನಿದು ಪ್ರಕರಣ:
ಮಡಿಕೇರಿ ನಗರದ ಹೊರವಲಯದ ಕಮಾನುಗೇಟ್ ಬಳಿಯ ಅಂಗಡಿ ಬಳಿ ಏಕಾಂಗಿಯಾಗಿ ಬಂದಿದ್ದ ಯುವತಿ ಅಂಗಡಿ ಮಾಲೀಕನಿಂದ 500ರೂ ಪಡೆದು ಗೂಗಲ್ ಪೇ ಮಾಡಿದ್ದಳು. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಯುವತಿಯನ್ನು ಮೂವರು ಯುವಕರು ಇನೋವಾ ಕಾರಿನಲ್ಲಿ ಬಂದು ಅಪಹರಣ ಮಾಡಲಾಗಿದೆ ಎಂದು ಅಂಗಡಿ ಮಾಲೀಕ ರೆಹಮಾನ್ ಪೊಲೀಸರಿಗೆ ದೂರು ನೀಡಿದ್ದರು.

ಅಂಗಡಿ ಮಾಲೀಕ

ಇದರಿಂದಾಗಿ ಮಡಿಕೇರಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು, ಅಲ್ಲದೆ ಈ ಘಟನೆಯಿಂದ ಎಚ್ಚೆತ್ತ ಮಡಿಕೇರಿ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಈ ಪ್ರಕರಣ ತಮಾಷೆಯಾಗಿ ಕಂಡಿದೆ.

ತನಿಖೆಯ ಬಳಿಕ ಹೊರ ಬಿದ್ದ ಸತ್ಯಾಂಶ:

‘ಮಂಡ್ಯ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಈ ಯುವತಿಯು ತನ್ನ ನಾಲ್ವರು ಸ್ನೇಹಿತರೊಂದಿಗೆ ಮಡಿಕೇರಿಗೆ ಪ್ರವಾಸಕ್ಕಾಗಿ ಬಂದಿದ್ದರು. ಈ ವೇಳೆ ಸ್ನೇಹಿತರೊಂದಿಗೆ ತಾನು ಹಣ ಇಲ್ಲದಿದ್ದರೂ ಊರು ತಲುಪುತ್ತೇನೆ ಎಂದು ಮೋಜಿಗಾಗಿ ಬೆಟ್ಟಿಂಗ್ ಕಟ್ಟಿ, ಕಾರಿನಿಂದಿಳಿದು ಹೊರಟರು. ಸಂಪಿಗೆಕಟ್ಟೆ ಸಮೀಪ ಗೂಗಲ್ ಪೇ ಮಾಡಿ ಅಂಗಡಿಯೊಂದರ ಮಾಲೀಕರಿಂದ 500 ರೂ ನಗದು ಪಡೆದು, ಬಸ್‌ನಲ್ಲಿ ಹೊರಡಲು ಸಿದ್ಧವಾಗಿದ್ದರು.

ಈ ವೇಳೆ ಯುವತಿಯನ್ನು ಹುಡುಕುತ್ತ ಬಂದ ಸ್ನೇಹಿತರು ಆಕೆಯನ್ನು ಎಳೆದೊಯ್ದರು. ಇದು ಸಾರ್ವಜನಿಕರಿಗೆ ಅಪಹರಣದಂತೆ ಕಂಡಿತು’ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ಯುವತಿಯನ್ನು ಬಲವಂತವಾಗಿ ಎಳೆದೊಯ್ದ
ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಯುವತಿಯ ಹೇಳಿಕೆ ಪಡೆಯಲಾಗಿದೆ. ಅಪಹರಣ ಪ್ರಕರಣ ಇದಾಗದೇ ಇರುವುದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದ್ದಾರೆ.

Leave A Reply